ಬೆಂಗಳೂರು: ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ 2015ರಲ್ಲಿ ದಾಖಲಾದ ಎರಡನೇ ಅತ್ಯಾಚಾರ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಶುಕ್ರವಾರ ಈ ಆದೇಶವನ್ನು ಹೊರಡಿಸಿದ್ದು, ಸಿಐಡಿ ಪೊಲೀಸರು ಸಲ್ಲಿಸಿದ್ದ ಆರೋಪಪಟ್ಟಿಯನ್ನು ನಿರಾಕರಿಸಲಾಯಿತು. ಮಹಿಳೆಯೊಬ್ಬರು ತಮ್ಮ ವೈಯಕ್ತಿಕ ವೈವಾಹಿಕ ಸಮಸ್ಯೆಗಳಿಗೆ ಸಂಬಂಧಿಸಿದ ದುರುದ್ದೇಶದಿಂದ ಈ ಕೇಸ್ನ್ನು ದಾಖಲಿಸಿದ್ದಾರೆ ಎಂಬ ವಾದವನ್ನು ಸ್ವೀಕರಿಸಿ ಹೈಕೋರ್ಟ್ ಪ್ರಕರಣವನ್ನು ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ:
2015ರಲ್ಲಿ ಒಬ್ಬ ಮಹಿಳೆ ರಾಘವೇಶ್ವರ ಭಾರತಿ ಸ್ವಾಮೀಜಿ ಮತ್ತು 7 ಜನರ (ಅರುಣ್ ಶ್ಯಾಮ್, ಅನಂತ, ಮಂಜುನಾಥ್ ಹೆಬ್ಬಾರ್, ರಮೇಶ್, ಸುಧಾಕರ್, ಮಧುಕೇಶ್ವರ ಹೆಬ್ಬಾರ್, ಜಗದೀಶ್ ಶರ್ಮಾ) ವಿರುದ್ಧ ಅತ್ಯಾಚಾರ ಮತ್ತು ಬೆದರಿಕೆ ಸೇರಿದಂತೆ ಆರೋಪಗಳನ್ನು ದಾಖಲಿಸಿದ್ದರು. ಸಿಐಡಿ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ ನಂತರ, ನ್ಯಾಯಾಲಯವು ಸ್ವಾಮೀಜಿ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ, ಹೈಕೋರ್ಟ್ ಹೊಸ ತೀರ್ಪಿನಲ್ಲಿ ಈ ಪ್ರಕರಣವನ್ನು “ದುರುದ್ದೇಶಪೂರಿತ” ಎಂದು ಪರಿಗಣಿಸಿ ರದ್ದುಗೊಳಿಸಿದೆ.
ಮೊದಲನೇ ಅತ್ಯಾಚಾರ ಪ್ರಕರಣದಲ್ಲೂ ರಿಲೀಫ್:
ಇದಕ್ಕೂ ಮುನ್ನ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧದ ಮೊದಲ ಅತ್ಯಾಚಾರ ಪ್ರಕರಣದಲ್ಲಿ ಹೈಕೋರ್ಟ್ ತಾಂತ್ರಿಕ ಕಾರಣದಿಂದ ಶ್ರೀಗಳಿಗೆ ರಿಲೀಫ್ ನೀಡಿತ್ತು. ಸಿಐಡಿಯನ್ನು ಪೊಲೀಸ್ ಠಾಣೆ ಎಂದು ಸರ್ಕಾರ ಘೋಷಿಸಿಲ್ಲ, ಹೀಗಾಗಿ ಸಿಐಡಿ ಪೊಲೀಸರಿಗೆ ಆರೋಪಪಟ್ಟಿ ಸಲ್ಲಿಸಲು ಅಧಿಕಾರವಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸಿತ್ತು. ಈ ತೀರ್ಪು ಪ್ರಶ್ನಿಸಿ ಗಾಯಕಿ ಪ್ರೇಮಲತಾ ಹಾಗೂ ಸರ್ಕಾರ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರೂ, ಹೈಕೋರ್ಟ್ ಅವುಗಳನ್ನು ವಜಾಗೊಳಿಸಿತ್ತು.