ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ವೇಳೆ ಶಾಸಕ ಪ್ರದೀಪ್ ಈಶ್ವರ್ ಅವರನ್ನು ವೇದಿಕೆಯಿಂದ ಹೊರಹಾಕುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಸಂಸದ ಡಾ.ಕೆ.ಸುಧಾಕರ್ ಅವರ ಬೆಂಬಲಿಗರು ಗಲಾಟೆ ನಡೆಸಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಪ್ರದೀಪ್ ಈಶ್ವರ್, ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಖಬರ್ದಾರ್ ಕುಮಾರಣ್ಣ, ನಿನ್ನ ಚೇಲಾಗಳಿಗೆ ಹೆದರಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ
ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ತಮಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದರು. “ನಾನು ಈ ಜಿಲ್ಲೆಯ ಶೋಷಿತ ಸಮುದಾಯವನ್ನು ಪ್ರತಿನಿಧಿಸುವ ಶಾಸಕ. ಕಾರ್ಯಕ್ರಮಕ್ಕೆ ಆಹ್ವಾನಿಸಿ ಸಾರ್ವಜನಿಕವಾಗಿ ಅವಮಾನಿಸುವುದು ಸರಿಯೇ? ಈ ಜಿಲ್ಲೆಯಲ್ಲಿ ಶೋಷಿತರು ಮತ್ತು ಅಲ್ಪಸಂಖ್ಯಾತರು ಬದುಕಬಾರದೇ?” ಎಂದು ಪ್ರಶ್ನಿಸಿದರು.
ಇದೇ ವೇಳೆ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಕುಮಾರಣ್ಣ, ನೀವು ಡಿ.ಕೆ. ಶಿವಕುಮಾರ್ ಅವರನ್ನು ಸಹಿಸಲ್ಲ, ಚೆಲುವರಾಯಸ್ವಾಮಿ ಅವರನ್ನು ಸಹಿಸಲ್ಲ, ಓಬಿಸಿ ನಾಯಕತ್ವವನ್ನೂ ಸಹಿಸಲ್ಲ. ನನ್ನ ಕುಟುಂಬ ಹಾಗೂ ನನ್ನ ಸಮುದಾಯವನ್ನು ಅವಮಾನ ಮಾಡಿದ್ದೀರಿ. ನಮ್ಮ ಸಮುದಾಯದ ಯಾವುದೇ ಕಾರ್ಯಕ್ರಮದಲ್ಲಿ ನಾವು ನಿಮ್ಮನ್ನು ಈ ರೀತಿಯಾಗಿ ನಡೆಸಿಕೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಾವು ನಿಮ್ಮ ಮನೆಯ ವಾಚ್ಮ್ಯಾನ್ ಕೆಲಸಕ್ಕೆ ಮಾತ್ರ ಲಾಯಕ್ಕು, ಕೂಲಿ ಕೆಲಸಕ್ಕೆ ಮಾತ್ರ ಯೋಗ್ಯ ಎಂದು ನೀವು ಭಾವಿಸಿದ್ದೀರಾ? ನಾವು ನಿಮ್ಮ ಮನೆಯಿಂದ ಬೀಳುವ ಭಿಕ್ಷೆಯನ್ನೇ ತಿನ್ನುವವರು ಎಂದುಕೊಂಡಿದ್ದೀರಾ?” ಎಂದು ಪ್ರಶ್ನಿಸಿದ ಪ್ರದೀಪ್ ಈಶ್ವರ್, ತಮ್ಮ ವಿರುದ್ಧ ನಡೆಯುತ್ತಿರುವ ರಾಜಕೀಯ ದಾಳಿಯನ್ನು ಖಂಡಿಸಿದರು.
ಇದೇ ವೇಳೆ ಒಕ್ಕಲಿಗ ಸಮುದಾಯದ ವಿಚಾರವನ್ನು ಪ್ರಸ್ತಾಪಿಸಿದ ಅವರು, “ನಾನು ಒಬ್ಬನೇ ಒಕ್ಕಲಿಗ ನಾಯಕನಾಗಿ ಡಿ.ಕೆ. ಶಿವಕುಮಾರ್ ಪರವಾಗಿ ನಿಂತಿದ್ದೇನೆ. ಕ್ಷೇತ್ರದಲ್ಲಿ ಬೇರೆ ಯಾರೂ ಬೆಳೆಯಬಾರದು ಎನ್ನುವ ಮನೋಭಾವ ಸರಿಯಲ್ಲ. ಖಬರ್ದಾರ್ ಕುಮಾರಣ್ಣ, ನಿಮ್ಮ ಚೇಲಾಗಳಿಗೆ ನಾನು ಹೆದರುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದ ಪ್ರದೀಪ್ ಈಶ್ವರ್, ಎಚ್.ಡಿ. ಕುಮಾರಸ್ವಾಮಿ ಅವರ ದುಬಾರಿ ವಾಚ್ ವಿವಾದವನ್ನು ಮತ್ತೆ ಪ್ರಸ್ತಾಪಿಸಿದರು. “ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸುಮಾರು 65 ಲಕ್ಷ ರೂಪಾಯಿ ಮೌಲ್ಯದ ವಾಚ್ ಧರಿಸುತ್ತಿದ್ದರು ಎಂದು ನಾನು ಹೇಳಿದ್ದೇನೆ. ಈಗ ಸಾಮಾನ್ಯ ವಾಚ್ ಧರಿಸಿ ತೋರಿಸಿದರೆ ಸತ್ಯ ಬದಲಾಗುವುದಿಲ್ಲ. ಅವರು ಧರಿಸಿದ್ದ ದುಬಾರಿ ವಾಚ್ಗಳ ಫೋಟೋ ಹಾಗೂ ವಿಡಿಯೋಗಳನ್ನು ನಾನು ಈಗಾಗಲೇ ಬಿಡುಗಡೆ ಮಾಡಿದ್ದೇನೆ” ಎಂದು ಹೇಳಿದರು.
ತಮ್ಮ ಸಿಎ (CA) ಸೈಟ್ ವಿಚಾರಕ್ಕೂ ಸ್ಪಷ್ಟನೆ ನೀಡಿದ ಪ್ರದೀಪ್ ಈಶ್ವರ್, “ನಾನು ಒಂದು ಎಕರೆ ಸಿಎ ಸೈಟ್ ಹೇಗೆ ಪಡೆದೆ ಎಂಬುದರ ಬಗ್ಗೆ ಈಗಾಗಲೇ ದಾಖಲೆ ಸಮೇತ ಮಾಹಿತಿ ನೀಡಿದ್ದೇನೆ. ಅದೇ ರೀತಿ ಕುಮಾರಸ್ವಾಮಿ ಅವರು 32 ಎಕರೆ ಜಮೀನು ಹೇಗೆ ಖರೀದಿಸಿದರು ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು” ಎಂದು ಆಗ್ರಹಿಸಿದರು.
“ನಾನು ದುಬಾರಿ ಬೆಳೆ ಬೆಳೆಸಿ ಹಣ ಸಂಪಾದಿಸಿದ್ದೇನೆ ಎಂದು ಹೇಳಬಹುದು. ಆದರೆ 32 ಎಕರೆ ಜಮೀನು ಖರೀದಿಸಲು ಬೇಕಾದ ಹಣದ ಮೂಲ ಏನು ಎಂಬುದನ್ನು ಜನರ ಮುಂದೆ ಬಹಿರಂಗಪಡಿಸಬೇಕು” ಎಂದು ಅವರು ಸವಾಲು ಹಾಕಿದರು.
ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, “ನಾನು ಕುಮಾರಸ್ವಾಮಿ ಅವರ ಮನೆ ಮುಂದೆ ವಾಚ್ಮ್ಯಾನ್ ಕೆಲಸ ಮಾಡಲು ಸಿದ್ಧನಿದ್ದೇನೆ. ನನ್ನ ಸಿಎ ಸೈಟ್ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಾರ್ವಜನಿಕರ ಮುಂದೆ ಇಡುತ್ತೇನೆ. ಆದರೆ ಕುಮಾರಸ್ವಾಮಿ ಅವರೂ ತಮ್ಮ 32 ಎಕರೆ ಜಮೀನಿನ ದಾಖಲೆಗಳನ್ನು ಬಹಿರಂಗಪಡಿಸಬೇಕು. ನಂತರ ಜನರು ಸತ್ಯ ಏನು ಎಂದು ತೀರ್ಮಾನಿಸಲಿ” ಎಂದು ತಿರುಗೇಟು ನೀಡಿದರು.





