ಬಾಗಲಕೋಟೆ, ಏಪ್ರಿಲ್ 27: ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನ ಮೂಲದ ಉಗ್ರರು ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 26 ಭಾರತೀಯ ಪ್ರವಾಸಿಗರು ಹತ್ಯೆಯಾದ ಘಟನೆಗೆ ಸಂಬಂಧಿಸಿದಂತೆ, ಕೆಲವು ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಇಂತಹ ಸಂದರ್ಭದಲ್ಲಿ ಕರ್ನಾಟಕದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ತಿಮ್ಮಾಪುರ, ದೇಶದ ಬೇಹುಗಾರಿಕಾ ವ್ಯವಸ್ಥೆ ಮುರಿದುಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ಇದೇನು ಹೊಸದೇನಲ್ಲ. ಈ ಹಿಂದೆ ಕಾರ್ಗಿಲ್ ಯುದ್ಧದ ವೇಳೆ, ಪುಲ್ವಾಮಾ ದಾಳಿಯ ಸಂದರ್ಭದಲ್ಲಿಯೂ ಬೇಹುಗಾರಿಕೆ ವಿಫಲವಾಗಿದೆ. ಈಗ ಮತ್ತೆ ಪಹಲ್ಗಾಮ್ನಲ್ಲಿ ಎಡವಟ್ಟಾಗಿದೆ,” ಎಂದು ತಿಮ್ಮಾಪುರ ಹೇಳಿದರು.
ಹತ್ಯೆಯಾದವರ ಕುರಿತು, “ಹಿಂದೂ ಧರ್ಮದವರನ್ನು ಹುಡುಕಿ ಹುಡುಕಿ ಕೊಂದರು” ಎಂಬ ಹೇಳಿಕೆಗಳನ್ನು ತೀವ್ರವಾಗಿ ವಿರೋಧಿಸಿದ ಅವರು, “ಹತ್ಯೆಯನ್ನು ಧರ್ಮದ ಆಧಾರದ ಮೇಲೆ ನೋಡುವುದು ತಪ್ಪು. ಈ ಘಟನೆಗಳಲ್ಲಿ ಮುಸ್ಲಿಂ ಯುವಕರು ಹಿಂದೂ ಪ್ರವಾಸಿಗರಿಗೆ ಸಹಾಯ ಮಾಡಿರುವುದನ್ನೂ ಗಮನಿಸಬೇಕು,” ಎಂದರು.
ತಿಮ್ಮಾಪುರ ಅವರು, “ಘಟನೆಯಾದಾಗ ಆತಂಕ ಮತ್ತು ಭಯದ ಪರಿಸ್ಥಿತಿಯಲ್ಲಿ ಉಗ್ರರು ಮನುಷ್ಯರ ಧರ್ಮ ಕೇಳಿ ಗುಂಡಿಕ್ಕುತ್ತಾರೆ ಎಂಬುದು ಅಸಾಧ್ಯ. ಗುಂಡು ಹೊಡೆದವನಿಗೆ ನಿಲ್ಲಲು ಸಮಯವಿರುವುದಿಲ್ಲ. ಇವೆಲ್ಲವನ್ನೂ ಧರ್ಮಕ್ಕೆ ಹಚ್ಚಿ ರಾಜಕೀಯ ಲಾಭ ಪಡೆಯುವುದು ನಾಚಿಕೆಯಾಗಬೇಕಾದ ವಿಚಾರ,” ಎಂದು ಹೇಳಿದರು.
ಚುನಾವಣೆ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ, ಮುಸ್ಲಿಂ ಸಮುದಾಯದ ವಿರುದ್ಧ ಸಿಡಿದೇಳುವಂತೆ ಮಾಡುವ ಪ್ರಯತ್ನಗಳನ್ನು ತೀವ್ರವಾಗಿ ಟೀಕಿಸಿದ ಅವರು, “ಕಾರವಾರದಲ್ಲಿ ಚುನಾವಣೆಗೆ ಮೊದಲು ಯಾರೋ ಸಾವನ್ನಪ್ಪಿದಾಗ, ಮುಸ್ಲಿಂ ಸಮುದಾಯದವರನ್ನು ಆರೋಪಿಸಿದರು. ಆದರೆ ನಂತರದಲ್ಲಿ ಅದು ಸಹಜ ಸಾವು ಎಂದು ತಿಳಿಯಿತು. ಇಂತಹ ರಾಜಕೀಯ ನಮಗೆ ಬೇಡ,” ಎಂದು ಹೇಳಿದರು.
ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ ಮಂಜುನಾಥ ಅವರ ಪತ್ನಿ ಹೇಳಿಕೆಯನ್ನು ಉಲ್ಲೇಖಿಸಿದ ತಿಮ್ಮಾಪುರ, “ಅವರು ಮುಸ್ಲಿಂ ವ್ಯಕ್ತಿಯೊಬ್ಬರು ನೆರವಾಗಿದ್ದು ನಿಜ ಎಂದು ಹೇಳಿದ್ದಾರೆ. ಈ ಸತ್ಯವನ್ನು ಗಮನದಲ್ಲಿಟ್ಟುಕೊಂಡು ಯೋಚನೆ ಮಾಡಬೇಕು,” ಎಂದು ತಿಳಿಸಿದರು.
ಕಲಬುರ್ಗಿಯಲ್ಲಿ ನಡೆದ ಪಾಕಿಸ್ತಾನ ಧ್ವಜ ರಕ್ಷಣೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ತಿಮ್ಮಾಪುರ, “ರಾಷ್ಟ್ರದ್ರೋಹಿ ಕ್ರಿಯೆಗಳನ್ನು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪಾಕ್ ಧ್ವಜ ಹಾರಿಸಿದವರನ್ನು ಬಂಧಿಸಿ, ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡಬೇಕು,” ಎಂದು ಒತ್ತಾಯಿಸಿದರು. ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದವರ ವಿರುದ್ಧ ಕೂಡ ಕ್ರಮ ಜರಗಬೇಕು ಎಂದರು.
ತಿಮ್ಮಾಪುರ ಅವರು, “ದೇಶ ಗಂಭೀರ ಪರಿಸ್ಥಿತಿಯಲ್ಲಿದೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬದಲು, ಭದ್ರತೆ ಹಾಗೂ ರಾಷ್ಟ್ರಾಭಿಮಾನವನ್ನು ಮೊದಲಿಗಿಡಬೇಕು,” ಎಂದು ಮನವಿ ಮಾಡಿದರು.