ಹೈದರಾಬಾದ್: ಆಂಧ್ರಪ್ರದೇಶದ ಕರ್ನೂಲ್ ಬಳಿ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದಲ್ಲಿ ಬೆಂಗಳೂರಿನ ಇಬ್ಬರು ಸಾಫ್ಟ್ವೇರ್ ಎಂಜಿನಿಯರ್ಗಳು ಸಾವನ್ನಪ್ಪಿದ್ದಾರೆ. ದೀಪಾವಳಿ ಹಬ್ಬ ಮುಗಿಸಿ ಕೆಲಸಕ್ಕೆ ಮರಳುತ್ತಿದ್ದ ಅನುಷಾ ರೆಡ್ಡಿ (22) ಮತ್ತು ಗನ್ನಮನೇನಿ ಧಾತ್ರಿ (27) ಮೃತ ದುರ್ದೈವಿಗಳಾಗಿದ್ದಾರೆ.
ಅನುಷಾ ರೆಡ್ಡಿ ಯದಾದ್ರಿ ಭುವನಗಿರಿ ಜಿಲ್ಲೆಯ ವಸ್ತಕೊಂಡೂರು ಗ್ರಾಮದವರು. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅವರು ದೀಪಾವಳಿ ಹಬ್ಬ ಮುಗಿಸಿ ಕೆಲಸಕ್ಕೆ ಮರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಇನ್ನೊಬ್ಬ ಮೃತ ದುರ್ದೈವಿ ಧಾತ್ರಿ ಬಾಪಟ್ಲ ಜಿಲ್ಲೆಯವರಾಗಿದ್ದು, ಮಾವನ ಮನೆಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದರು.
ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ನಲ್ಲಿ ಇಬ್ಬರು ಮಕ್ಕಳು ಸೇರಿ ಒಟ್ಟು 41 ಮಂದಿ ಪ್ರಯಾಣಿಕರಿದ್ದರು. ದುರಂತದ ನಂತರ 20 ಮಂದಿ ಪ್ರಯಾಣಿಕರನ್ನು ಆಸ್ಪತ್ರೆಯಲ್ಲಿ ಅನುಶೀಲನೆಗೆ ಒಳಪಡಿಸಲಾಗಿದೆ. ಈವರೆಗೆ 11 ಮೃತದೇಹಗಳನ್ನು ಪತ್ತೆಮಾಡಲಾಗಿದ್ದು, ಮೃತದೇಹಗಳ ಗುರುತಿಸುವಿಕೆ ಕಾರ್ಯ ನಡೆದಿದೆ.
ದುರಂತದ ಸಮಯದಲ್ಲಿ ತುರ್ತು ನಿರ್ಗಮನ ದ್ವಾರ ಮುರಿದು ಜಯಸೂರ್ಯ, ರಾಮಿರೆಡ್ಡಿ, ಅಕಿರಾ, ವೇಣುಗೋಪಾಲ್ ರೆಡ್ಡಿ, ಹರಿಕಾ, ಸತ್ಯನಾರಾಯಣ, ಶ್ರೀಲಕ್ಷ್ಮಿ, ನವೀನ್ ಕುಮಾರ್, ಅಖಿಲ್, ಜಸ್ಮಿತಾ, ರಮೇಶ್ ಮತ್ತು ಸುಬ್ರಹ್ಮಣ್ಯಂ ಅವರುಗಳು ತಪ್ಪಿಸಿಕೊಂಡಿದ್ದಾರೆ. ಘಟನಾ ಸ್ಥಳದಿಂದ ಡ್ರೈವರ್ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ವಿಧಿವಿಜ್ಞಾನ ತಜ್ಞರು ಮೃತ ದೇಹಗಳ ಮಾದರಿಗಳನ್ನು ಸಂಗ್ರಹಿಸಿ ಡಿಎನ್ಎ ಪರೀಕ್ಷೆಗಳನ್ನು ನಡೆಸಿದ ನಂತರ ಪೊಲೀಸರು ಮೃತರ ವಿವರಗಳನ್ನು ಅಧಿಕೃತವಾಗಿ ಬಹಿರಂಗಪಡಿಸಲಿದ್ದಾರೆ. ಬಸ್ನ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಬಸ್ನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಅಶ್ವಿನ್ ರೆಡ್ಡಿ (36), ಕೀರ್ತಿ (30), ಪಂಕಜ್ (28), ಯುವನ್ ಶಂಕರ್ ರಾಜು (22), ತರುಣ್ (27), ಆಕಾಶ್ (31), ಗಿರಿರಾವ್ (48), ಬುನ್ಸಾಯ್ (33), ಗಣೇಶ್ (30), ಜಯಂತ್ ಪುಷ್ವಾಹ (27), ಪಿಲ್ವಾಮಿನ್ ಬೇಬಿ (30), ರಮೇಶ್ ಕುಮಾರ್ (30) ಮತ್ತು ಅವರ ಕುಟುಂಬದವರು (64), ಮೊಹಮ್ಮದ್ ಕೈಸರ್ (51), ದೀಪಕ್ ಕುಮಾರ್ (24), ಆಂದೋಜ್ ನವೀನ್ ಕುಮಾರ್ (26), ಪ್ರಶಾಂತ್ (32), ಎಂ. ಸತ್ಯನಾರಾಯಣ (28), ಮೇಘನಾಥ್ (25), ವೇಣು ಗುಂಡ (33), ಚರಿತ್ (21), ಚಂದನ ಮಂಗ (23), ಸಂಧ್ಯಾರಾಣಿ ಮಂಗಾ (43), ಗ್ಲೋರಿಯಾ (24), ಎಲ್ಲೆಸಾ ಎಸ್. ಶ್ರೀಹರ್ಷ (24), ಶಿವ (24), ಶ್ರೀನಿವಾಸ ರೆಡ್ಡಿ (40), ಸುಬ್ರಹ್ಮಣ್ಯಂ (26), ಕೆ. ಅಶೋಕ್ (27), ಎಂ.ಜಿ. ರಾಮ ರೆಡ್ಡಿ (50), ಉಮಾಪತಿ (32), ಅಮೃತ್ ಕುಮಾರ್ (18), ವೇಣುಗೋಪಾಲ್ ರೆಡ್ಡಿ (24) ಅವರುಗಳು ಸೇರಿದ್ದಾರೆ.





