ಶಿವಮೊಗ್ಗ: ದೇಶದಲ್ಲಿ ಅಕಾಲಿಕ ಮಳೆಯ ಅಬ್ಬರ ಹೆಚ್ಚಾಗಲಿದ್ದು, ಜಲಕಂಟಕ ಹಾಗೂ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಪ್ರಕೃತಿಯ ಅಬ್ಬರ ಹೆಚ್ಚಾಗಲಿದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಉತ್ತಮ ಮಳೆ ಹಾಗೂ ಬೆಳೆ ಕಂಡುಬರುವ ಸಾಧ್ಯತೆ ಇದೆ. ಆದರೆ ಸಕಾಲಿಕ ಮಳೆಯಿಗಿಂತ ಅಕಾಲಿಕ ಮಳೆಯೇ ಹೆಚ್ಚು ಆಗಲಿದ್ದು, ಇದರಿಂದ ಹಲವೆಡೆ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳಿದರು. ಗುಡುಗು, ಸಿಡಿಲು ಹಾಗೂ ಗಾಳಿಯ ತೀವ್ರತೆ ಹೆಚ್ಚಾಗಿ ಕೆಲವೆಡೆ ಭೂಮಿ ತಲ್ಲಣಗೊಳ್ಳುವಂತಹ ಘಟನೆಗಳೂ ಸಂಭವಿಸಬಹುದು ಎಂದು ಅವರು ಭವಿಸ್ಯ ನುಡಿದರು.
ದೊಡ್ಡ ದೊಡ್ಡ ನಗರಗಳು ಅನಿರೀಕ್ಷಿತ ಆಪತ್ತುಗಳನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಪ್ರಕೃತಿ ವಿಕೋಪಗಳಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ಸ್ವಾಮೀಜಿ ಕರೆ ನೀಡಿದರು. ಮಳೆ, ಗಾಳಿ ಮತ್ತು ಸಿಡಿಲಿನ ಆರ್ಭಟ ಹೆಚ್ಚಾದರೂ ಜನಜೀವನದ ಮೇಲೆ ದೊಡ್ಡ ಮಟ್ಟದ ಹಾನಿ ಉಂಟಾಗುವುದಿಲ್ಲ ಎಂದು ಅವರು ಸಮಾಧಾನಕರ ಮಾತುಗಳನ್ನೂ ಹೇಳಿದರು.
ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತೂ ಮಾತನಾಡಿದ ಕೋಡಿಮಠ ಶ್ರೀಗಳು, “ಅರಸನ ಅರಮನೆ ಕಳೆಗುಂದಿತು, ಪಟ್ಟದ ಆನೆ ಗಾಂಭೀರ್ಯ ನಡೆದೀತು” ಎಂದು ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳ ಸೂಚನೆ ನೀಡಿದರು.
ಜಾಗತಿಕ ಮಟ್ಟದಲ್ಲಿಯೂ ಅಶಾಂತಿ ಹೆಚ್ಚಾಗುವ ಲಕ್ಷಣಗಳಿವೆ ಎಂದು ಅವರು ತಿಳಿಸಿದರು. ಯುದ್ಧ, ವಾಯುದಾಳಿ ಮತ್ತು ನಗರಗಳ ಮೇಲೆ ಪರಿಣಾಮ ಬೀರುವಂತಹ ಘಟನೆಗಳು ನಡೆಯಬಹುದು ಎಂದು ಹೇಳಿದ ಅವರು, ಈ ಹಿಂದೆ ನೀಡಿದ್ದ ಕೆಲವು ಭವಿಷ್ಯವಾಣಿಗಳು ನಿಜವಾಗಿವೆ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.
ಹಿಂಗಾರು ಮಳೆ ಮತ್ತು ಗಾಳಿಯ ಅಬ್ಬರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ರೈತರಿಗೆ ಒಟ್ಟಾರೆ ಉತ್ತಮ ಮಳೆಯ ಲಾಭ ಸಿಗಬಹುದು. ಆದರೆ ಅಕಾಲಿಕ ಮಳೆಯ ಕಾರಣ ಬೆಳೆ ಹಾನಿಯ ಆತಂಕವೂ ಕಾಡಬಹುದು ಎಂದು ವಿಶ್ಲೇಷಿಸಲಾಗಿದೆ.





