ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಲಕ್ಷಾಂತರ ನೌಕರರು ಇಂದು ರಾಜಧಾನಿ ಬೆಂಗಳೂರಿನಲ್ಲಿ ‘ಬೆಂಗಳೂರು ಚಲೋ’ ಪ್ರತಿಭಟನೆಯ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 38 ತಿಂಗಳ ವೇತನ ಹಿಂಬಾಕಿ ಮತ್ತು 2024ರಿಂದಲೇ ವೇತನ ಪರಿಷ್ಕರಣೆಯಾಗಬೇಕು ಎಂಬ ಬೇಡಿಯನ್ನಿಟ್ಟಿರುವ ನೌಕರರು, ಸರ್ಕಾರದ ಸಂಧಾನವನ್ನ ತಿರಸ್ಕರಿಸಿದ್ದಾರೆ. ಇದರಿಂದಾಗಿ ಶುಕ್ರವಾರದಿಂದ ರಾಜ್ಯಾದ್ಯಂತ ಸಾರಿಗೆ ವ್ಯವಸ್ಥೆ ಸ್ತಬ್ಧವಾಗುವ ಸಾಧ್ಯತೆ ದಟ್ಟವಾಗಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಇಂದು ಜಮಾಯಿಸಿದ ಸಾವಿರಾರು ಸಾರಿಗೆ ನೌಕರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಪ್ರತಿಭಟನೆ ನಡೆಸುತ್ತಿದ್ದಾರೆ.
ನೌಕರರ ಪ್ರಮುಖ ಬೇಡಿಕೆಗಳು
-
38 ತಿಂಗಳ ವೇತನ ಹಿಂಬಾಕಿ (Arrears): ಬಾಕಿ ಇರುವ ಪೂರ್ಣ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು.
-
ವೇತನ ಪರಿಷ್ಕರಣೆ: 2024ರ ಜನವರಿ 1ರಿಂದಲೇ ಜಾರಿಗೆ ಬರುವಂತೆ ಹೊಸ ವೇತನ ಶ್ರೇಣಿ ನಿಗದಿಪಡಿಸಬೇಕು.
ಸರ್ಕಾರವು 26 ತಿಂಗಳ ಹಿಂಬಾಕಿ ನೀಡಲು ಮತ್ತು 2025ರ ಏಪ್ರಿಲ್ನಿಂದ ವೇತನ ಪರಿಷ್ಕರಣೆ ಮಾಡಲು ಮುಂದಾಗಿತ್ತು. ಆದರೆ, ನಮ್ಮ ದುಡಿಮೆಗೆ ತಕ್ಕ ಪ್ರತಿಫಲ ಕೇಳುತ್ತಿದ್ದೇವೆ, ಇದರಲ್ಲಿ ರಾಜಿ ಸಾಧ್ಯವಿಲ್ಲ ಎಂದು ಜಂಟಿ ಕ್ರಿಯಾ ಸಮಿತಿಯ ನಾಯಕರು ಸ್ಪಷ್ಟಪಡಿಸಿದ್ದಾರೆ.
ಡಿಕೆಶಿ ಮನವಿ ಮತ್ತು ಸರ್ಕಾರದ ನಿಲುವು
ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ನೌಕರರು ಅರ್ಥಮಾಡಿಕೊಳ್ಳಬೇಕು. 38 ತಿಂಗಳ ಬದಲಿಗೆ 26 ತಿಂಗಳ ಹಿಂಬಾಕಿ ನೀಡಲು ಒಪ್ಪಿದ್ದೇವೆ. ಸದ್ಯ ಅಷ್ಟು ಸಿಕ್ಕಿರುವುದಕ್ಕಾದರೂ ನೌಕರರು ಸಂತೋಷಪಟ್ಟು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ನಾಳೆಯಿಂದ ಬಸ್ ಸಂಚಾರ ಬಂದ್ ?
ಇಂದು ಸಂಜೆ 4 ಗಂಟೆಗೆ ಜಂಟಿ ಕ್ರಿಯಾ ಸಮಿತಿಯು ಮಹತ್ವದ ಸುದ್ದಿಗೋಷ್ಠಿ ನಡೆಸಲಿದೆ. ಒಂದು ವೇಳೆ ಸರ್ಕಾರ ಸಂಜೆಯೊಳಗೆ ಪೂರ್ಣ ಬೇಡಿಕೆಗೆ ಒಪ್ಪದಿದ್ದರೆ, ಶುಕ್ರವಾರ ಬೆಳಿಗ್ಗೆಯಿಂದಲೇ ಬಸ್ ಸಂಚಾರವನ್ನ ನಿಲ್ಲಿಸಲು ನೌಕರರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಸಂಚಾರ ಸುಗಮ
ಬೆಂಗಳೂರು ಚಲೋ ಪ್ರತಿಭಟನೆಯ ನಡುವೆಯೂ ಇಂದು ಬಸ್ ಸಂಚಾರದಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಕಂಡುಬಂದಿಲ್ಲ. ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಯಾವುದೇ ನೌಕರರಿಗೆ ರಜೆ ನೀಡದಂತೆ ಮತ್ತು ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ವಹಿಸಿದ್ದಾರೆ. ಆದರೆ ಸಂಜೆಯ ನಂತರ ಪರಿಸ್ಥಿತಿ ಬದಲಾಗುವ ಲಕ್ಷಣಗಳಿವೆ. ಒಂದು ವೇಳೆ ಸಂಜೆ ಹೊತ್ತಿಗೆ ನೌಕರರ ಬೇಡಿಕೆಗಳಿಗೆ ಸರಿಯಾದ ಸ್ಪಂದನೆ ಸಿಗಲಿಲ್ಲವೆಂದರೆ, ನಾಳೆಯಿಂದ ರಾಜ್ಯದಾದ್ಯಂತ ಬಸ್ ಸಂಚಾರ ಸ್ಥಗಿತವಾಗುವ ಸಾಧ್ಯತೆಗಳಿವೆ





