“ಬಡವರ ದುಡ್ಡು ತಿಂದರೆ ಹುಳ ಬಿದ್ದು ಸಾಯ್ತಾರೆ”: ಜಮೀರ್ ಅಹ್ಮದ್

Untitled design 2025 06 24t141045.422

ಬೆಂಗಳೂರು: ಬಡವರಿಗೆ ಮನೆ ಹಂಚಿಕೆಗೆ ಸಂಬಂಧಿಸಿದಂತೆ ದುಡ್ಡು ಪಡೆದ ಆರೋಪಕ್ಕೆ ವಸತಿ ಸಚಿವ ಜಮೀರ್ ಅಹ್ಮದ್  ಪ್ರತಿಕ್ರಿಯಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಡವರ ಬಳಿ ಹಣ ತೆಗೆದುಕೊಂಡು ಮನೆ ನೀಡಿದರೆ “ಹುಳ ಬಿದ್ದು ಸಾಯುತ್ತಾರೆ” ಎಂದು ಖಾರವಾಗಿ ಹೇಳಿದ್ದಾರೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ತನಿಖೆಗೆ ಸಿದ್ಧ ಎಂದು ಸವಾಲು ಹಾಕಿರುವ ಸಚಿವರು, ಆರೋಪ ಮಾಡುವವರು ದಾಖಲೆಗಳನ್ನು ಸಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ನಾಯಕ ಬಿ.ಆರ್. ಪಾಟೀಲ್ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಜಮೀರ್, “ಬಡವರಿಗೆ ಮನೆ ಹಂಚಿಕೆಗೆ ಹಣ ತೆಗೆದುಕೊಂಡರೆ ಒಳ್ಳೆಯದಾಗುತ್ತದೆಯೇ? ದೇವರು ಒಳ್ಳೆಯದನ್ನು ಮಾಡುತ್ತಾನೆಯೇ?” ಎಂದು ಪ್ರಶ್ನಿಸಿದ್ದಾರೆ. “ನಾನು ಸತ್ಯ ಹರಿಶ್ಚಂದ್ರ ಎಂದು ಹೇಳಿಲ್ಲ, ಆದರೆ ಬಡವರ ದುಡ್ಡು ತಿನ್ನುವಷ್ಟು ದರಿದ್ರನೂ ಅಲ್ಲ” ಎಂದು  ಸ್ಪಷ್ಟಪಡಿಸಿದ್ದಾರೆ. ಈ ಆರೋಪಗಳ ಬಗ್ಗೆ ಸಿಬಿಐ ತನಿಖೆಗೂ ಒಪ್ಪಿಗೆ ನೀಡುವುದಾಗಿ ತಿಳಿಸಿದ ಅವರು, ಆರೋಪಕ್ಕೆ ದಾಖಲೆಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.

“ಬಡವರಿಗೆ ಮನೆ ಹಂಚಿಕೆಗೆ ಹಣ ತೆಗೆದುಕೊಂಡರೆ ನಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆಯೇ? ಇಂತಹ ಕೆಲಸ ಮಾಡಿದರೆ ಉದ್ಧಾರವಾಗುತ್ತದೆಯೇ?” ಎಂದು ಸಚಿವ ಜಮೀರ್ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಬಿ.ಆರ್. ಪಾಟೀಲ್ ಅವರು ಯಾವ ಸಂದರ್ಭದಲ್ಲಿ ಈ ಆರೋಪವನ್ನು ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಆದರೆ, “ಪಾಟೀಲ್ ಹಿರಿಯ ನಾಯಕರು, ಒಳ್ಳೆಯವರು. ಆದರೆ ಈ ವಿಷಯದ ಬಗ್ಗೆ ಅವರೊಂದಿಗೆ ಇನ್ನೂ ಮಾತನಾಡಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ಸಚಿವ ಜಮೀರ್ ಅಹ್ಮದ್, ಮನೆ ಹಂಚಿಕೆಯ ಪ್ರಕ್ರಿಯೆಯ ಬಗ್ಗೆ ವಿವರಿಸಿದ್ದಾರೆ. “ನಾವು ಮೂರು ಹಂತಗಳಲ್ಲಿ ಬಡವರಿಗೆ ಮನೆಗಳನ್ನು ಹಂಚಿಕೆ ಮಾಡುತ್ತಿದ್ದೇವೆ. ಯಾವುದೇ ಹೊಸ ಗುರಿಗಳನ್ನು ನಿಗದಿಪಡಿಸಿಲ್ಲ. ಭ್ರಷ್ಟಾಚಾರದ ಆರೋಪಗಳಿದ್ದರೆ, ದಾಖಲೆಗಳೊಂದಿಗೆ ಸಾಬೀತುಪಡಿಸಬೇಕು” ಎಂದು ಸವಾಲು ಹಾಕಿದ್ದಾರೆ. “ಆರೋಪ ಮಾಡುವವರು ಯಾರಾದರೂ ಇರಲಿ, ದಾಖಲೆಗಳಿಲ್ಲದೆ ಆರೋಪ ಮಾಡುವುದು ಸರಿಯಲ್ಲ” ಎಂದು ತಿಳಿಸಿದ ಅವರು, ತಮ್ಮ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ಎಂದು  ಹೇಳಿದ್ದಾರೆ.

Exit mobile version