ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್ ಅವರ ನೇತೃತ್ವದಲ್ಲಿ ಕರ್ನಾಟಕದ ಉನ್ನತ-ಮಟ್ಟದ ನಿಯೋಗವೊಂದು ನಾರ್ವೆ ಸಂಸತ್ತಿಗೆ ಅಧಿಕೃತ ಭೇಟಿ ನೀಡಿದೆ. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಸಂಸತ್ತುಗಳಲ್ಲಿ ಒಂದಾದ ನಾರ್ವೆ ಸಂಸತ್ತಿನ ಈ ಭೇಟಿಯು ಎರಡೂ ದೇಶಗಳ ನಡುವೆ ಸಂಸತ್ತೀಯ ಸಹಯೋಗವನ್ನು ಬಲಪಡಿಸುವ ಉದ್ದೇಶ ಹೊಂದಿದೆ.
1814ರಲ್ಲಿ ಸ್ಥಾಪಿತವಾದ ನಾರ್ವೆ ಸಂಸತ್ತು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಸಂಸತ್ತುಗಳಲ್ಲಿ ಒಂದಾಗಿದೆ. ಅದೇ ವರ್ಷ ಅಂಗೀಕರಿಸಲಾದ ನಾರ್ವೆಯ ಸಂವಿಧಾನವು ಇಂದಿಗೂ ಶಾಶ್ವತ ಪ್ರಜಾಪ್ರಭುತ್ವದ ಮಾದರಿಯಾಗಿ ಉಳಿದಿದೆ. ಈ ಐತಿಹಾಸಿಕ ಸಂಸತ್ತಿನ ಕಾರ್ಯನಿರ್ವಹಣೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಧ್ಯಯನ ಮಾಡುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿತ್ತು.
ಈ ಸಂದರ್ಭದಲ್ಲಿ ಸಭಾಧ್ಯಕ್ಷ ಖಾದರ್ ಫರೀದ್ ಅವರು ನಾರ್ವೆಯ ಮಾಜಿ ಸಚಿವ ಮತ್ತು ಮಾಜಿ ಸಂಸದ ಹಿಮಾಂಶು ಗುಲೇಟ್ ಅವರೊಂದಿಗೆ ವಿಚಾರ ವಿನಿಮಯ ನಡೆಸಿದರು. ಭೇಟಿಯ ವೇಳೆ, ನಾರ್ವೆಯ ಇತಿಹಾಸ, ಸಂವಿಧಾನ, ಆಡಳಿತ ವ್ಯವಸ್ಥೆ ಹಾಗೂ ಜನಪರ ಯೋಜನೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಎರಡೂ ರಾಷ್ಟ್ರಗಳ ಸಂಸತ್ತಿನ ಕಾರ್ಯನಿರ್ವಹಣಾ ವಿಧಾನಗಳು, ಜನತಾಂತ್ರಿಕ ಪ್ರಕ್ರಿಯೆಗಳ ವಿನ್ಯಾಸ ಹಾಗೂ ಸಂಸದೀಯ ಅಧಿವೇಶನಗಳ ನಿರ್ವಹಣೆ ಕುರಿತಂತೆ ಪರಸ್ಪರ ಅಭಿಪ್ರಾಯ ವಿನಿಮಯವೂ ನಡೆಯಿತು. ಸಭಾಧ್ಯಕ್ಷ ಖಾದರ್ ಫರೀದ್ ಅವರು ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಚರ್ಚೆ ಮಾಡಿದ್ದಾರೆ.
ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ,ನಾರ್ವೆಯ ಪ್ರಗತಿಶೀಲ ಜನತಾಂತ್ರಿಕ ಮಾದರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಮತ್ತು ನಾರ್ವೆ ದೇಶದ ನಡುವೆ ಶಿಕ್ಷಣ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಹಕಾರ ವೃದ್ಧಿಯ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು. ಈ ಭೇಟಿಯ ಸಂದರ್ಭದಲ್ಲಿ ಕರ್ನಾಟಕ ವಿಧಾನಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಹಾಗೂ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಉಪಸ್ಥಿತರಿದ್ದರು.