ಸೌಜನ್ಯ ಹೆಲ್ಪ್‌ಲೈನ್ ಹೆಸರಿನಲ್ಲಿ ವಂಚನೆ; ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ಪ್ರಕರಣ ದಾಖಲು

Untitled design 2025 06 21t203157.355

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ಎಂಬಾಕೆಯ ವಿರುದ್ಧ “ಸೌಜನ್ಯ ಹೆಲ್ಪ್‌ಲೈನ್” ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್‌ನ ಮಾಲಾಡಿ ನಿವಾಸಿ ರಾಜೇಶ್ ಕೆ. ಎಂಬ ಗಾಯಕರ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ರಾಜೇಶ್ ಕೆ. ವೃತ್ತಿಯಲ್ಲಿ ಗಾಯಕರಾಗಿದ್ದು, ‘ಅರವಿಂದ್ ವಿವೇಕ್’ ಎಂಬ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಲೈವ್ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. 2024ರಲ್ಲಿ ಫೇಸ್‌ಬುಕ್ ಮೂಲಕ ಸಂಧ್ಯಾ ಪವಿತ್ರ ನಾಗರಾಜ್ ಜೊತೆ ಪರಿಚಯವಾಯಿತು. ತಾನು ಹೋರಾಟಗಾರ್ತಿಯಾಗಿದ್ದು, “ಸೌಜನ್ಯ ಹೆಲ್ಪ್‌ಲೈನ್” ಮೂಲಕ ನೊಂದವರಿಗೆ ಮತ್ತು ವಂಚನೆಗೊಳಗಾದವರಿಗೆ ಸಹಾಯ ಮಾಡುವುದಾಗಿ ಸಂಧ್ಯಾ ರಾಜೇಶ್‌ಗೆ ನಂಬಿಸಿದ್ದಳು. ರಾಜ್ಯದಲ್ಲಿ ಅಮಾಯಕರ ವಿರುದ್ಧ ದಾಖಲಾಗಿದ್ದ ಹಲವು ಪ್ರಕರಣಗಳನ್ನು ಬಗೆಹರಿಸಿರುವುದಾಗಿ ಆಕೆ ತಿಳಿಸಿದ್ದಳು.

ADVERTISEMENT
ADVERTISEMENT

ರಾಜೇಶ್, ಬಂಟ್ವಾಳ ನಗರ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಒಂದು ಪ್ರಕರಣದ ಬಗ್ಗೆ ಸಂಧ್ಯಾಗೆ ತಿಳಿಸಿದ್ದರು. ಈ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ಬಗೆಹರಿಸುವುದಾಗಿ ಆಕೆ ಭರವಸೆ ನೀಡಿದ್ದಳು. ಈ ಸಂಬಂಧ ದಾಖಲಾತಿಗಳನ್ನು ಪಡೆಯಲು 2025ರ ಜನವರಿಯಲ್ಲಿ ಸಂಧ್ಯಾ, ರಾಜೇಶ್‌ರನ್ನು ಬೆಂಗಳೂರಿನ ಜೆ.ಪಿ.ನಗರದ ತನ್ನ ಮನೆಗೆ ಕರೆಸಿದ್ದಳು. ಪ್ರಕರಣ ಬಗೆಹರಿಸಲು ಕೆಲವು ಖರ್ಚುಗಳಿವೆ ಎಂದು ಹೇಳಿ, ರಾಜೇಶ್‌ರಿಂದ ಹಂತ ಹಂತವಾಗಿ ಒಟ್ಟು 3 ಲಕ್ಷ 20 ಸಾವಿರ ರೂಪಾಯಿಗಳನ್ನು ಪಡೆದಿದ್ದಾಳೆ.

ಹಣ ನೀಡಿದರೂ ಪ್ರಕರಣ ಬಗೆಹರಿಯದಿದ್ದಾಗ ರಾಜೇಶ್ ಸಂಧ್ಯಾಳನ್ನು ಪ್ರಶ್ನಿಸಿದ್ದರು. ಆಗ ಆಕೆ ಇನ್ನಷ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ. ಸಂಶಯಗೊಂಡ ರಾಜೇಶ್, ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ತೋರಿಸುವಂತೆ ಕೇಳಿದಾಗ, ಸಂಧ್ಯಾ ತನ್ನ ಮೋಸದ ಆಟವನ್ನು ಬಹಿರಂಗಗೊಳಿಸಿದಳು. ರಾಜೇಶ್‌ಗೆ ಮನೆಗೆ ಹೆಂಗಸರನ್ನು ಕರೆದುಕೊಂಡು ಬಂದು ಜಗಳ ಮಾಡುವುದಾಗಿ, ಕೈ-ಕಾಲು ಮುರಿಯುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಆತಂಕಗೊಂಡ ರಾಜೇಶ್, ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಸೆಕ್ಷನ್ 318(4) (ವಂಚನೆ) ಮತ್ತು 351(2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಸಂಧ್ಯಾ ಇದೇ ರೀತಿ ಇತರರನ್ನೂ ವಂಚಿಸಿರುವ ಸಾಧ್ಯತೆ ಇರುವ ಬಗ್ಗೆ ಪರಿಶೀಲಿಸುತ್ತಿದ್ದಾರೆ.

Exit mobile version