ಬೆಂಗಳೂರು: ಕಳೆದ ವಾರ ನಡೆದ ಜಂಟಿ ಅಧಿವೇಶನದಲ್ಲಿ ವಿರೋಧ ಪಕ್ಷಗಳ ತೀವ್ರ ವಾಗ್ದಾಳಿ ಮತ್ತು ಸಚಿವರ ರಾಜೀನಾಮೆ ಆಗ್ರಹಕ್ಕೆ ಗುರಿಯಾಗಿದ್ದ ಅಬಕಾರಿ ಇಲಾಖೆ, ಇದೀಗ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಪಾರದರ್ಶಕ ಹಾದಿ ಹಿಡಿದಿದೆ. ಅಬಕಾರಿ ಪರವಾನಗಿ ಪ್ರಕ್ರಿಯೆಯಲ್ಲಿನ ವಿಳಂಬ ಮತ್ತು ಲಂಚಗುಳಿತನವನ್ನು ತಡೆಯಲು ರಾಜ್ಯ ಸರ್ಕಾರವು ಆನ್ಲೈನ್ ವ್ಯವಸ್ಥೆಯನ್ನು ಬಲಪಡಿಸಿದ್ದು, ದಾಖಲೆ ಅವಧಿಯಲ್ಲಿ ಪರವಾನಗಿ ನವೀಕರಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
47 ಗಂಟೆಗಳಲ್ಲಿ 14,275 ಲೈಸೆನ್ಸ್ ನವೀಕರಣ
ಅಬಕಾರಿ ಇಲಾಖೆಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ವೇಗದಲ್ಲಿ ಕೆಲಸ ನಡೆದಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದ್ದಾರೆ. ಕೇವಲ 47 ಗಂಟೆಗಳ ಅವಧಿಯಲ್ಲಿ ಬರೊಬ್ಬರಿ 14,275 ಲೈಸೆನ್ಸ್ಗಳನ್ನು ನವೀಕರಣ (Renewal) ಮಾಡುವ ಮೂಲಕ ಇಲಾಖೆ ಹೊಸ ದಾಖಲೆ ಬರೆದಿದೆ. ಈ ಹಿಂದೆ ಲೈಸೆನ್ಸ್ ನವೀಕರಣಕ್ಕಾಗಿ ತಿಂಗಳುಗಟ್ಟಲೆ ಕಚೇರಿಗಳಿಗೆ ಅಲೆಯಬೇಕಿತ್ತು, ಆದರೆ ಈಗ ಆಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ಈ ಪ್ರಕ್ರಿಯೆ ಅತ್ಯಂತ ಸರಳವಾಗಿದೆ.
16 ಟೇಬಲ್ಗಳ ಕಿರಿಕಿರಿ ಇನ್ನು ಇಲ್ಲ
ಅಬಕಾರಿ ಪರವಾನಗಿ ಪಡೆಯುವ ವೇಳೆ ಅರ್ಜಿದಾರರು ಎದುರಿಸುತ್ತಿದ್ದ ಸುದೀರ್ಘ ಪ್ರಕ್ರಿಯೆಗೆ ಸರ್ಕಾರ ಕತ್ತರಿ ಹಾಕಿದೆ. ಹಿಂದೆ ಸಿಎಲ್-7 (CL-7) ಲೈಸೆನ್ಸ್ ಪಡೆಯಲು ಅರ್ಜಿದಾರರು ಬರೊಬ್ಬರಿ 16 ಟೇಬಲ್ಗಳಿಗೆ ಅಲೆಯಬೇಕಿತ್ತು. ಪ್ರತಿ ಹಂತದಲ್ಲೂ ಭ್ರಷ್ಟಾಚಾರಕ್ಕೆ ಅವಕಾಶವಿತ್ತು. ಆದರೆ ಈಗ ಆ ಹಂತಗಳನ್ನು ಕೇವಲ 7 ಟೇಬಲ್ಗಳಿಗೆ ಸೀಮಿತಗೊಳಿಸಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ. ಸಂಪೂರ್ಣ ಪ್ರಕ್ರಿಯೆಯು ಆನ್ಲೈನ್ ಮೂಲಕ ನಡೆಯುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಪಾರದರ್ಶಕತೆ ಮತ್ತು ಕಟ್ಟುನಿಟ್ಟಿನ ಕ್ರಮ
ಅಧಿವೇಶನದಲ್ಲಿ ವ್ಯಕ್ತವಾಗಿದ್ದ ಭ್ರಷ್ಟಾಚಾರದ ಆರೋಪಗಳಿಗೆ ತಿರುಗೇಟು ನೀಡಿರುವ ಸರ್ಕಾರ, ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುತ್ತಿದೆ. ಪರವಾನಗಿ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವುದು ಮಾತ್ರವಲ್ಲದೆ, ಇಲಾಖೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಮತ್ತು ಉದ್ಯಮಿಗಳು ಲಂಚ ನೀಡದೆ ಕೆಲಸ ಮಾಡಿಸಿಕೊಳ್ಳಲು ಈ ಆನ್ಲೈನ್ ವೇದಿಕೆ ಸಹಕಾರಿಯಾಗಲಿದೆ.





