ಬೆಳಗಾವಿಯಲ್ಲಿ ಕರ್ನಾಟಕದ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮಾರ್ಚ್ 22 ರಂದು ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆಗಳು ಕರೆ ನೀಡಲಾಗಿದೆ.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಎಲ್ಲ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡಲು ಮುಂದಾಗಿವೆ. ಮಾರ್ಚ್ 22ರಂದು ಕನ್ನಡಪರ ಸಂಘಟನೆಗಳು ಹೋರಾಟ ನಡೆಸಲಿದ್ದು, ಅಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಅಖಂಡ ಕರ್ನಾಟಕ ಬಂದ್ ನಡೆಯಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಬಂದ್ಗೆ ತೀವ್ರ ವಿರೋಧ
ಕರ್ನಾಟಕ ಬಂದ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಕರ್ನಾಟಕ ಬಂದ್ ಆಚರಣೆ ಯಾವ ಪುರುಷಾರ್ಥಕ್ಕೆ..? ಕರ್ನಾಟಕ ಬಂದ್ ಮಾಡಿ ಸಂಘಟನೆಗಳು ಸಾಧಿಸೋದೇನು?, ಕರ್ನಾಟಕ ಬಂದ್ ಮಾಡಿದ್ರೆ ಕನ್ನಡಿಗರಿಗೆ ಏನು ಲಾಭ..?, 4ನೇ ಶನಿವಾರ ಸರ್ಕಾರಿ ರಜೆ ದಿನ ಕರ್ನಾಟಕ ಬಂದ್ ಏಕೆ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯ ಜನರ ಪ್ರಶ್ನೆಯಾಗಿದೆ.
ಅಧಿವೇಶನ ಮುಗಿದ ದಿನವೇ ಬಂದ್ ಏಕೆ?
ಕರ್ನಾಟಕ ವಿಧಾನಮಂಡಲ ಅಧಿವೇಶನ ಶುಕ್ರವಾರ ಮುಕ್ತಾಯವಾಗುತ್ತಿದೆ. ಈ ಅಧಿವೇಶನದಲ್ಲಿ ಮರಾಠಿ ಪುಂಡಾಟದ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ ಅಧಿವೇಶನ ಮುಗಿದ ಕೂಡಲೇ ಬಂದ್ ಮಾಡುವುದು ಯಾಕೆ? ಸಂಘಟನೆಗಳ ತೀರ್ಮಾನ ಜನರಲ್ಲಿ ಅನೇಕ ಸಂಶಯಗಳನ್ನು ಹುಟ್ಟಿಸಿದೆ.
ಬಂದ್ ಮಾಡಿದರೆ ನಷ್ಟ ಯಾರಿಗೆ?
- ಬಂದ್ ಎಂಬುದು ಸರ್ಕಾರಕ್ಕೆ ಮತ್ತು ಕನ್ನಡಿಗರ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಹೊಡೆತ ನೀಡುತ್ತದೆ.
- ಅಂಗಡಿ, ಹೋಟೆಲ್, ಬಾರ್ ಮುಚ್ಚಿದ್ದರೆ ವ್ಯಾಪಾರಿಗಳಿಗೆ ನಷ್ಟ.
- ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೇ ಇರುವುದರಿಂದ ನಷ್ಟ.
- ಆಟೋ, ಕ್ಯಾಬ್ ಚಾಲಕರು ದಿನದ ಕೂಲಿ ಕಳೆದುಕೊಳ್ಳುತ್ತಾರೆ.
- ವೀಕೆಂಡ್ನಲ್ಲಿ ಉತ್ತಮ ವ್ಯವಹಾರ ನಡೆಸುವ ಉದ್ಯಮಗಳು ದೊಡ್ಡ ನಷ್ಟವನ್ನು ಎದುರಿಸುತ್ತವೆ.
- ಥಿಯೇಟರ್, ಸಿನಿಮಾ ಹಾಲ್ಗಳು ಬಂದ್ ಮಾಡಿದರೆ ಕೋಟಿಗಟ್ಟಲೆ ನಷ್ಟ.
- ಸರ್ಕಾರಕ್ಕೂ ಜಿಎಸ್ಟಿ, ಕಮರ್ಷಿಯಲ್ ಟ್ಯಾಕ್ಸ್, ಅಬಕಾರಿ ತೆರಿಗೆಯಲ್ಲಿ ನಷ್ಟ.
4ನೇ ಶನಿವಾರ ಬಂದ್ ಏಕೆ?
4 ನೇ ಶನಿವಾರ ಬಹುತೇಕ ಬ್ಯಾಂಕ್ಗಳಿಗೆ ರಜೆ. ಅಲ್ಲದೆ, ಸರ್ಕಾರಿ ಕಚೇರಿಗಳು ಕೂಡಾ ಕಾರ್ಯನಿರ್ವಹಿಸುತ್ತಿಲ್ಲ. ಟೆಕ್ಕಿಗಳು ಸೇರಿದಂತೆ ಬಹುತೇಕ ಖಾಸಗಿ ಕಂಪನಿಗಳಿಗೆ ರಜೆ. ಶಾಲೆಗಳು ಸಹ ಅರ್ಧ ದಿನ ನಡೆಯುತ್ತದೆ. ಆದ್ದರಿಂದ, ಈ ದಿನ ಬಂದ್ ಮಾಡಿದರೆ, ಜನರ ಮೇಲೆ ಪರಿಣಾಮ ಕಡಿಮೆಯಾಗಬಹುದು. ಆದರೆ ಇದರಿಂದ ಸರ್ಕಾರಕ್ಕೆ ಹಾಗೂ ಖಾಸಗಿ ಉದ್ಯಮಗಳಿಗೆ ಮಾತ್ರ ನಷ್ಟ ಆಗುತ್ತದೆ. ಬಂದ್ ಮಾಡಿದರೆ ಕನ್ನಡಿಗರೇ ಸಂಕಟಕ್ಕೆ ಸಿಲುಕುತ್ತಾರೆ. ಮರಾಠಿಗರಿಗೆ ಪಾಠ ಕಲಿಸಲು ಕನ್ನಡಿಗರಿಗೂ ಕಷ್ಟ ಎದುರಾಗುವುದು ನಿಶ್ಚಿತ ಎನ್ನಲಾಗ್ತಿದೆ.
ಕರ್ನಾಟಕ ಬಂದ್ ಮಾಡಿದ್ರೆ ಕನ್ನಡಿಗರಿಗೇ ಲಾಸ್
ಕರ್ನಾಟಕ ಬಂದ್ ಮಾಡಿದ್ರೆ ಎಲ್ಲಾ ರೀತಿಯಲ್ಲೂ ನಷ್ಟವಾಗುತ್ತದೆ. ವೀಕೆಂಡ್ ನಲ್ಲಿ ಜನರು ಉರಿಂದ ಉರಿಗೆ ಪ್ಲಾನ್ ಗೆ ಬ್ರೇಕ್ ಹಾಕಿದಂತಾಗುತ್ತದೆ. ಶಾಲಾ-ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗೆ ಹೊಡೆತ, ಶಾಲಾ ಮಕ್ಕಳಿಗೆ ಪರೀಕ್ಷೆ ಹಾಗೂ ಸರಕು ಅಮದು ಮತ್ತು ರಫ್ತುಗೆ ಶನಿವಾರ ಪ್ರಮುಖ ದಿನ ಬಂದ್ ಆದ್ರೆ ರಫ್ತು – ಆಮದು ಸಂಪೂರ್ಣ ಬಂದ್ ಆಗುತ್ತದೆ. ಇದರಿಂದ ಕರ್ನಾಟಕಕ್ಕೆ ಭಾರೀ ನಷ್ಟ ಉಂಟಾಗುತ್ತದೆ.
ಪ್ರವಾಸಿ ತಾಣಗಳಿಂದ ಬರುವ ಆದಾಯಕ್ಕೂ ಬ್ರೇಕ್..!
ಕರ್ನಾಟಕ ಬಂದ್ ಮಾಡಿದ್ರೆ, ರಾಜ್ಯಕ್ಕೆ ಕೋಟಿ ಕೋಟಿ ನಷ್ಟವಾಲಿದ್ದು, ಪ್ರವಾಸಿ ತಾಣಗಳಿಂದ ಬರುವ ಆದಾಯಕ್ಕೂ ತೀವ್ರ ಹೊಡೆತ ಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಬಂದ್ ಮಾಡುವುದು ಸರಿಯೇ ಎಂಬ ಪ್ರಶ್ನೆ ಮೂಡಿದೆ.
ಮಾರಾಠಿ ಪುಂಡಾಟ ಮತ್ತು ಸರ್ಕಾರದ ನಿರ್ಲಕ್ಷ್ಯ
ತಿಂಗಳ ಹಿಂದೆ ಮಹಾರಾಷ್ಟ್ರ ಗಡಿಯಲ್ಲಿ ಮರಾಠಿ ಸಂಘಟನೆಗಳ ಪುಂಡಾಟ ನಡೆಯಿತು. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್ ಗಡಿಯಲ್ಲಿ ಕನ್ನಡಿಗರು ದಿನನಿತ್ಯ ಮರಾಠಿ ಪುಂಡಾಟಕ್ಕೆ ತುತ್ತಾಗುತ್ತಿದ್ದಾರೆ. ಈ ಘಟನೆಗಳು ಹಸಿಯಾಗಿರುವಾಗಲೇ ಬಂದ್ ಮಾಡಲಿಲ್ಲ ಏಕೆ..? ಆದರೆ, ಸರ್ಕಾರಗಳು ಮತ್ತು ಕನ್ನಡಪರ ಸಂಘಟನೆಗಳು ಈ ಸ್ಥಳಗಳಿಗೆ ತೆರಳಿ ತಕ್ಷಣ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಿರುವಾಗ ಬೆಂಗಳೂರು ಸೇರಿದಂತೆ ಇಡೀ ರಾಜ್ಯ ಬಂದ್ ಮಾಡುವುದು ಎಷ್ಟು ಸರಿ? ಎಂಬ ಪ್ರಶ್ನೆ ಎದ್ದಿದೆ.
ಬಂದ್ ಮಾಡುವ ಬದಲು ಮರಾಠಿಗರಿಗೆ ಬಿಸಿ ಮುಟ್ಟಿಸಿ
- ಮಹಾರಾಷ್ಟ್ರಕ್ಕೆ ಅಗತ್ಯ ವಸ್ತುಗಳ ಸಾಗಣೆ ತಡೆದು ಬಿಸಿ ಮುಟ್ಟಿಸುವುದು
- ಬೆಳಗಾವಿ ಮತ್ತು ಗಡಿ ಭಾಗದಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದು
- ಮಹಾರಾಷ್ಟ್ರದಲ್ಲಿ ಕನ್ನಡಿಗರ ಹಿತರಕ್ಷಣೆಗೆ ಪ್ರಾಮಾಣಿಕ ಶ್ರಮ ಹೂಡುವುದು
- ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಆಕ್ರೋಶ ವ್ಯಕ್ತಪಡಿಸುವುದಕ್ಕಿಂತ ಹೋರಾಟವನ್ನು ಗಡಿ ಜಿಲ್ಲೆಗಳತ್ತ ಕೇಂದ್ರೀಕರಿಸುವುದು
ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡದ ಹೆಸರಲ್ಲಿ ಹೋರಾಟ ಮಾಡುವುದು ಒಳ್ಳೆಯದು, ಆದರೆ ಅದು ಕನ್ನಡಿಗರಿಗೇ ಹೊಡೆತವಾಗಬಾರದು. ರಾಜ್ಯದ ಹಿತವನ್ನೂ ಪರಿಗಣಿಸದೇ ನಡೆಸುವ ಬಂದ್ಗಳಿಂದ ಕನ್ನಡಿಗರಿಗೇ ನಷ್ಟವಾಗುತ್ತದೆ ಎಂಬುದು ಬಹುತೇಕ ಜನರ ಅಭಿಪ್ರಾಯವಾಗಿದೆ.