ಹುಬ್ಬಳ್ಳಿ: ತ್ಯಾಗ & ಶ್ರದ್ಧೆಯಿಂದ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಸೇವೆ ಮಾಡುತ್ತಿದೆ ಎಂದು ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ, ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ಉಪಾಧ್ಯಕ್ಷ ಡಾ.ವಿ.ಎಸ್.ವಿ. ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಶಿರೂರ ಪಾರ್ಕ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ (ಎಎಎಸ್ಎಸ್) ವತಿಯಿಂದ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಬರಿಮಲೈ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬಹಳಷ್ಟು ಭಕ್ತರು ತೆರಳುತ್ತಾರೆ. ಅಲ್ಲಿಯ ಕುಂದುಕೊರತೆ, ಆಗು-ಹೋಗುಗಳನ್ನು ಸೇವಾ ಸಮಾಜಂ ನೋಡಿಕೊಳ್ಳುತ್ತಿದೆ. ತ್ಯಾಗ ಮತ್ತು ಶ್ರದ್ಧೆಯಿಂದ ಸೇವೆ ಮಾಡುತ್ತಿದೆ. ಇಂದು ನಡೆಯುತ್ತಿರುವ ಕಾರ್ಯಕಾರಿಣಿಯಲ್ಲಿ ಚಿಂತನ-ಮಥನ ನಡೆಸಿ, 6 ತಿಂಗಳೊಳಗೆ ಕಾರ್ಯಾನುಷ್ಠಾನ ಆಗಬೇಕು. ಇದರಿಂದ ಸಮಾಜ ಹಾಗೂ ಭಕ್ತರಿಗೆ ಒಳಿತಾಗಲಿದೆ. ಶಿರೂರ ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಕಾರಣೀಭೂತರಾದ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರಿಗೆ ಡಾ. ಪ್ರಸಾದ ಅವರು ಅಭಿನಂದನೆ ಸಲ್ಲಿಸಿದರು.
ಇನ್ನೂ ಇದೇ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 70 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಭಕ್ತರ ಪರವಾದ ಸಂಘಟನೆ ಅಗತ್ಯವಿತ್ತು. ಅಲ್ಲಿಯ ಕುಂದುಕೊರತೆ ನಿವಾರಣೆ, ಭಕ್ತರ ಬಯಕೆ ಈಡೇರಿಕೆಗೆ ಈ ಸಂಘಟನೆ ಕಾರ್ಯತತ್ಪರವಾಗಿದೆ. ಅನೇಕ ಬದಲಾವಣೆಗಳನ್ನು ತರಲಾಗಿದೆ. ಜಗತ್ತಿನಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ಇರುವುದು ಇದೇ ಕಾರಣಕ್ಕೆ. ಹಿಂದೂಗಳಾದ ನಾವೆಲ್ಲ ಒಗ್ಗಟ್ಟಾಗಿರಬೇಕು ಎಂದು ಆಶಿಸಿದರು.
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಮಾತನಾಡಿ, ನಮ್ಮ ಸನಾತನ ಧರ್ಮದ ಮೇಲೆ ಹಲವರಿಂದ ದಾಳಿಗಳಾಗಿವೆ. ಅದರಲ್ಲು ಹಿಂದೂಗಳ ಆತ್ಮವಾಗಿರುವ ದೇವಸ್ಥಾನ ಮತ್ತು ಮಠಗಳ ಮೇಲೆ ದಾಳಿಯಾಗಿವೆ. ಅವರು ಹಿಂದೂ ಧರ್ಮ ಈ ಮೂಲಕ ದಾಳಿ ಮಾಡುತ್ತಿದ್ದಾರೆ. ನಾವೆಲ್ಲ ಹಿಂದೂಗಳು ಜಾಗೃತರಾಗಬೇಕು. ಹಿಂದೂಗಳಿಗೆ ಆಗುತ್ತಿರುವ ಅಪಮಾನ, ಅಪಚಾರ, ಅಕ್ರಮಗಳನ್ನು ತಡೆಯಬೇಕು. ಈ ನಿಟ್ಟಿನಲ್ಲಿ ನಾವು ಸಂಘಟಿತರಾಗಬೇಕು ಎಂದರು.
ಎಸ್ಎಎಸ್ಎಸ್ ಕರ್ನಾಟಕ ಸಂಯೋಜಕ ಪಿ.ಎಸ್. ಪ್ರಕಾಶ ಮಾತನಾಡಿ, ದೇವಸ್ಥಾನಗಳು ನಮ್ಮ ಭಕ್ತಿ ಮತ್ತು ಶಕ್ತಿಯ ಕೇಂದ್ರಗಳು. ಭಾರತೀಯ ಹಿಂದೂ ಸಮಾಜ ಭಕ್ತಿ ಮತ್ತು ಶಕ್ತಿಯ ಸಮ್ಮಿಲನವಾಗಿದೆ. ನಾವು ಎರಡನ್ನೂ ಸಂಘಟಿತಗೊಳಿಸಬೇಕು. ಇದರಿಂದ ನಮ್ಮ ಜೀವನ ಬೆಳಕಿನ ಕಡೆಗೆ ಹೋಗುತ್ತದೆ ಎಂದರು. ಬೆಳಗ್ಗೆ ಎಎಎಸ್ಎಸ್ ರಾಷ್ಟ್ರೀಯ ಉಪಾಧ್ಯಕ್ಷ ಆನಂದ ವಾಮನ ನಾಯಕ್ ಗೋಪೂಜೆ ನೆರವೇರಿಸಿದರು. ಹಿರಿಯ ಮಾರ್ಗದರ್ಶಕ ಸೇತುಮಾಧವನ್ ಧ್ವಜಾರೋಹಣ ನೆರವೇರಿಸಿದರು.
ರಾಷ್ಟ್ರೀಯ ಅಧ್ಯಕ್ಷ ಎಸ್.ಜೆ.ಆರ್. ಕುಮಾರ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಧರ್ಮದರ್ಶಿ ಶ್ರೀ ಆನಂದ ಗುರುಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಮೇಯರ್ ವೀಣಾ ಬರದ್ವಾಡ, ರಾಷ್ಟ್ರೀಯ ಕಾರ್ಯಕಾರಿ ಟಿ.ಬಿ. ಶೇಖರ್, ಪ್ರಮುಖರಾದ ಎ.ಆರ್. ಮೋಹನ, ಸೆಲ್ವನ್ ಮುರುಘನ್, ಪ್ರಕಾಶ ಗಣಪತಿ ಪೈ, ಈರೋಡು ಎನ್. ರಾಜನ್, ದೊರೈಶಂಕರ, ವಿನೋದ, ಡಾ.ಎನ್. ಜಯರಾಂ, ಶರಣಕುಮಾರ ಶೆಟ್ಟಿ, ಪಿ. ದೇವರಾಜು, ಎಂ. ಮುನಿರಾಜು, ಎಚ್.ಆರ್. ಸಂಪತಕುಮಾರ, ಡಾ. ರಮೇಶ ಮುಧೋಳ, ದತ್ತು ಶಿಂತ್ರೆ ಇತರರು ಇದ್ದರು.





