ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಜೀವನ ಸಂಗಾತಿ ಚೆನ್ನಮ್ಮ ಅವರಿಗೆ ಇಂದು ಅವರ ಹುಟ್ಟೂರು ಹರದನಹಳ್ಳಿಯ ಸಮೀಪದ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಈ ವೇಳೆ ಪತ್ನಿಯನ್ನು ನೆನೆದು ದೇವೇಗೌಡರು ಭಾವುಕರಾಗಿ ಮಾತನಾಡಿದರು.
ಅಂತಿಮ ವಿಧಿವಿಧಾನಗಳ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡರು, “ನನ್ನ ಪತ್ನಿ ಅನ್ನಪೂರ್ಣೆ. ಅವರನ್ನು ಇಂದು ರಂಗನಾಥಸ್ವಾಮಿಯ ಪಾದಕ್ಕೆ ಕಳುಹಿಸುತ್ತಿದ್ದೇನೆ. ಇದನ್ನು ಉತ್ಪ್ರೇಕ್ಷೆಯಿಂದ ಹೇಳುತ್ತಿಲ್ಲ. ನನ್ನ ಬದುಕಿನ ಪ್ರತಿಯೊಂದು ಹಂತದಲ್ಲೂ ಅವರು ನೀಡಿದ ಬೆಂಬಲವನ್ನು ಮರೆಯಲು ಸಾಧ್ಯವಿಲ್ಲ,” ಎಂದು ಕಣ್ಣೀರಿಟ್ಟರು.
ಚೆನ್ನಮ್ಮ ಅವರು ಕೇವಲ ಪತ್ನಿಯಾಗಿರಲಿಲ್ಲ, ಕುಟುಂಬದ ಆಧಾರಸ್ತಂಭವಾಗಿದ್ದರು ಎಂದು ದೇವೇಗೌಡರು ಸ್ಮರಿಸಿದರು. ತಮ್ಮ ರಾಜಕೀಯ ಜೀವನದ ಏಳುಬೀಳುಗಳ ನಡುವೆ ಸದಾ ಧೈರ್ಯ ತುಂಬಿ ನಿಂತವರು ಚೆನ್ನಮ್ಮ ಎಂದು ಅವರು ಹೇಳಿದರು. ಕುಟುಂಬದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ತಮ್ಮ ರಾಜಕೀಯ ಪಯಣಕ್ಕೆ ಅಗತ್ಯವಾದ ಮಾನಸಿಕ ಬಲವನ್ನು ನೀಡಿದ್ದು ಅವರೇ ಎಂದು ನೆನಪಿಸಿಕೊಂಡರು.
ಚೆನ್ನಮ್ಮ ಅವರ ಅಂತ್ಯಕ್ರಿಯೆ ಎಲ್ಲಿ ನಡೆಯಬೇಕು ಎಂಬ ವಿಚಾರದಲ್ಲಿಯೂ ಕುಟುಂಬದೊಳಗೆ ಚರ್ಚೆ ನಡೆದಿತ್ತು. ಈ ಕುರಿತು ಮಾತನಾಡಿದ ದೇವೇಗೌಡರು, “ಈ ಜಮೀನನ್ನು ಖರೀದಿಸಿಕೊಂಡು ಪಡವಲಹಿಪ್ಪೆಯಲ್ಲಿ ಅಂತ್ಯಕ್ರಿಯೆ ನಡೆಸಬೇಕೆಂಬುದು ನನ್ನ ಇಚ್ಛೆಯಾಗಿತ್ತು. ಆದರೆ ಮಕ್ಕಳು, ಅಳಿಯಂದಿರು ಮತ್ತು ಕುಟುಂಬದ ಎಲ್ಲ ಸದಸ್ಯರು ಸೇರಿ ರಂಗನಾಥಸ್ವಾಮಿಯ ಸಾನಿಧ್ಯದಲ್ಲೇ ಅಂತ್ಯಕ್ರಿಯೆ ನಡೆಸೋಣ ಎಂದು ತೀರ್ಮಾನಿಸಿದರು. ಅವರ ನಿರ್ಧಾರವನ್ನು ನಾನು ಒಪ್ಪಿಕೊಂಡೆ,” ಎಂದರು.
ತಮ್ಮ ರಾಜಕೀಯ ಜೀವನದಲ್ಲಿ ರಂಗನಾಥಸ್ವಾಮಿಯ ಆಶೀರ್ವಾದಕ್ಕೆ ವಿಶೇಷ ಸ್ಥಾನವಿದೆ ಎಂದು ಹೇಳಿದ ಅವರು, “ನಾನು ದೇಶದ ಪ್ರಧಾನಿಯಾಗುವ ಮಟ್ಟಕ್ಕೆ ಬೆಳೆಯಲು ರಂಗನಾಥಸ್ವಾಮಿಯ ಕೃಪೆಯೇ ಕಾರಣ. ಅದೇ ಸಮಯದಲ್ಲಿ ನನ್ನ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಜೊತೆ ನಿಂತು ಶಕ್ತಿ ತುಂಬಿದ್ದು ಚೆನ್ನಮ್ಮ. ನನ್ನ ಯಶಸ್ಸಿನ ಹಿಂದೆ ಅವರ ತ್ಯಾಗ ಮತ್ತು ಸಹಕಾರ ಅಪಾರವಾಗಿದೆ,” ಎಂದು ಭಾವುಕರಾದರು.
ಕುಟುಂಬದ ಎಲ್ಲ ಸದಸ್ಯರು ತಮ್ಮ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದು ಹೇಳಿದ ದೇವೇಗೌಡರು, ಚೆನ್ನಮ್ಮ ಅವರ ಸರಳ ಜೀವನ, ಕುಟುಂಬದ ಮೇಲಿನ ಪ್ರೀತಿ ಹಾಗೂ ಎಲ್ಲರನ್ನು ಒಗ್ಗೂಡಿಸಿಕೊಂಡು ಸಾಗಿದ ಗುಣವನ್ನು ಸ್ಮರಿಸಿದರು. ರಾಜಕೀಯದ ಒತ್ತಡದ ನಡುವೆಯೂ ಕುಟುಂಬದ ನೆಮ್ಮದಿಯನ್ನು ಕಾಪಾಡಿಕೊಂಡು ಬಂದಿದ್ದ ಚೆನ್ನಮ್ಮ ಅವರ ಸೇವೆಯನ್ನು ಅವರು ಕೃತಜ್ಞತೆಯಿಂದ ನೆನೆದರು.
ಅಂತ್ಯಕ್ರಿಯೆ ವೇಳೆ ಮಳೆ ಬೀಳುವ ಸಾಧ್ಯತೆ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ್ದರೂ ಯಾವುದೇ ಅಡಚಣೆ ಉಂಟಾಗಲಿಲ್ಲ ಎಂದು ದೇವೇಗೌಡರು ಹೇಳಿದರು. “ಮಳೆ ಬಂದರೆ ಇಲ್ಲಿ ಅಂತ್ಯಕ್ರಿಯೆ ನಡೆಸುವುದು ಕಷ್ಟವಾಗಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಆದರೆ ರಂಗನಾಥಸ್ವಾಮಿಯ ಕೃಪೆಯಿಂದ ಯಾವುದೇ ತೊಂದರೆಯಾಗಲಿಲ್ಲ. ಎಲ್ಲವೂ ಶಾಂತಿಯುತವಾಗಿ ನೆರವೇರಿತು,” ಎಂದು ಅವರು ಹೇಳಿದರು.




