ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಮಹಾಲೆಕ್ಕಪರಿಶೋಧಕರ (CAG) ವರದಿಯಲ್ಲಿ ಹಲವು ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ಈಗಾಗಲೇ ₹75 ಸಾವಿರ ಕೋಟಿಗೂ ಅಧಿಕ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗಿರುವ ಈ ಯೋಜನೆಯಲ್ಲಿ ಬ್ಯಾಂಕ್ ಖಾತೆ ಹಾಗೂ ಫಲಾನುಭವಿಗಳ ಮಾಹಿತಿಗೆ ಸಂಬಂಧಿಸಿದ ಗಂಭೀರ ಲೋಪಗಳು ಪತ್ತೆಯಾಗಿವೆ ಎನ್ನಲಾಗಿದೆ.
ಸಿಎಜಿ ಡೇಟಾ ಅನಾಲಿಟಿಕ್ಸ್ ವಿಭಾಗ ನಡೆಸಿದ ಆಡಿಟ್ನಲ್ಲಿ ಒಂದೇ ಬ್ಯಾಂಕ್ ಖಾತೆಯನ್ನು ಸಾವಿರಾರು ಫಲಾನುಭವಿಗಳು ಬಳಸಿರುವ ಪ್ರಕರಣಗಳು ಪತ್ತೆಯಾಗಿವೆ. ವರದಿ ಪ್ರಕಾರ, 19,020 ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆ ಸಂಖ್ಯೆ ಜೋಡಣೆಯಾಗಿರುವುದು ಕಂಡುಬಂದಿದೆ. ಅಲ್ಲದೆ, 8,995 ಬ್ಯಾಂಕ್ ಖಾತೆಗಳಿಗೆ ಸುಮಾರು ₹1.80 ಕೋಟಿ ಮೊತ್ತವನ್ನು ಪುನರಾವರ್ತಿತವಾಗಿ ಜಮೆ ಮಾಡಲಾಗಿದೆ ಎಂಬ ಅಂಶವೂ ವರದಿಯಲ್ಲಿ ಉಲ್ಲೇಖವಾಗಿದೆ.
ಇದರ ಜೊತೆಗೆ, 10,36,308 ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಬದಲಾಯಿಸಿರುವುದು ಕೂಡ ಗಮನಕ್ಕೆ ಬಂದಿದೆ. ಮತ್ತೊಂದೆಡೆ, ಬ್ಯಾಂಕ್ ಖಾತೆ ಇಲ್ಲದ 23,262 ಫಲಾನುಭವಿಗಳಿಗೆ ಸುಮಾರು ₹46.52 ಕೋಟಿ ಹಣ ವರ್ಗಾವಣೆ ಆಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಡಿಬಿಟಿ (Direct Benefit Transfer) ವ್ಯವಸ್ಥೆಯ ಮೂಲಕ ಬ್ಯಾಂಕ್ ಖಾತೆಗೆ ಮಾತ್ರ ಹಣ ಜಮೆಯಾಗಬೇಕಾದ ಸಂದರ್ಭದಲ್ಲಿ, ಖಾತೆ ಇಲ್ಲದವರ ಹೆಸರಿಗೆ ಹಣ ಸಂದಾಯವಾಗಿರುವುದು ಹೇಗೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಪ್ರಸ್ತುತ ರಾಜ್ಯದಲ್ಲಿ ಸುಮಾರು 1.30 ಕೋಟಿ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇಂತಹ ದೊಡ್ಡ ಯೋಜನೆಯಲ್ಲಿ ಪತ್ತೆಯಾಗಿರುವ ಲೋಪಗಳು ಸರ್ಕಾರಕ್ಕೆ ಮುಜುಗರ ಉಂಟುಮಾಡಿವೆ. ಸಿಎಜಿ ವರದಿಯ ಅಂಶಗಳು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಚರ್ಚೆಗೆ ಬಂದಿದ್ದು, ಅನರ್ಹ ಫಲಾನುಭವಿಗಳ ಪತ್ತೆ ಹಾಗೂ ದಾಖಲೆಗಳ ಮರುಪರಿಶೀಲನೆಗೆ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಎಜಿ ವರದಿಯಲ್ಲಿ ಪ್ರಮುಖ ಅಂಶಗಳು
- ಒಂದೇ ಬ್ಯಾಂಕ್ ಖಾತೆ ಹೊಂದಿರುವ 19,020 ಫಲಾನುಭವಿಗಳು
- 8,995 ಖಾತೆಗಳಿಗೆ ಪುನರಾವರ್ತಿತವಾಗಿ ಹಣ ಜಮೆ
- 10,36,308 ಫಲಾನುಭವಿಗಳು ಬ್ಯಾಂಕ್ ಖಾತೆ ಬದಲಾವಣೆ
- ಬ್ಯಾಂಕ್ ಖಾತೆ ಇಲ್ಲದ 23,262 ಮಂದಿಗೆ ಹಣ ವರ್ಗಾವಣೆ
- ಡಿಬಿಟಿ ವ್ಯವಸ್ಥೆಯಲ್ಲಿ ಖಾತೆ ಇಲ್ಲದೆ ಹಣ ಜಮೆಯಾಗಿರುವ ಬಗ್ಗೆ ಅನುಮಾನ
- ಫಲಾನುಭವಿಗಳ ಮಾಹಿತಿ ಪರಿಶೀಲನೆಗೆ ಶಿಫಾರಸು
ಈ ಮಧ್ಯೆ, ಸಿಎಜಿ ವರದಿಯ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಕೇಳಿದರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸ್ಪಷ್ಟ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ವರದಿಯಲ್ಲಿನ ಅಂಶಗಳ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಈಗ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.





