ಆಷಾಢ ಶುಕ್ರವಾರದ ವಿಶೇಷತೆ: ತರಕಾರಿಗಳ ಮಧ್ಯೆ ಕಂಗೊಳಿಸಿದ ಚಾಮುಂಡೇಶ್ವರಿ

ಆಷಾಢ

ಮಂಡ್ಯ,(ಜುಲೈ.17) : ದೇವಾಲಯಗಳಲ್ಲಿ ಹೂವಿನ ಅಲಂಕಾರ ಸಾಮಾನ್ಯ. ಆದರೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಷಾಢ ಮಾಸದ ಮೊದಲ ಶುಕ್ರವಾರದ ಅಂಗವಾಗಿ ನಡೆದ ವಿಶೇಷ ಅಲಂಕಾರ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು. ಎಲೆಕೋಸು, ಕ್ಯಾಪ್ಸಿಕಂ, ಸೌತೆಕಾಯಿ, ಬದನೆಕಾಯಿ ಸೇರಿದಂತೆ 15ಕ್ಕೂ ಹೆಚ್ಚು ಬಗೆಯ ತರಕಾರಿಗಳನ್ನು ಬಳಸಿ ತಾಯಿ ಚಾಮುಂಡೇಶ್ವರಿಗೆ ವಿಶಿಷ್ಟ ‘ಶಾಕಾಂಬರಿ’ ಅಲಂಕಾರ ಮಾಡಲಾಗಿದ್ದು, ಸಾವಿರಾರು ಭಕ್ತರು ದರ್ಶನ ಪಡೆದರು.

ಆಷಾಢ ಮಾಸದಲ್ಲಿ ದೇವಿಗೆ ವಿಶೇಷ ಪೂಜೆ ಮತ್ತು ಅಲಂಕಾರ ಮಾಡುವ ಸಂಪ್ರದಾಯವಿದೆ. ಅದರಂತೆ ಈ ಬಾರಿ ದೇವಸ್ಥಾನದಲ್ಲಿ ಸುಮಾರು 100 ಕೆಜಿ ತರಕಾರಿಗಳನ್ನು ಬಳಸಿ ದೇವಿಯನ್ನು ಅಲಂಕರಿಸಲಾಯಿತು. ಹಸಿರು, ಕೆಂಪು, ಹಳದಿ ಬಣ್ಣದ ವಿವಿಧ ತರಕಾರಿಗಳ ಸಂಯೋಜನೆಯಿಂದ ಸಿದ್ಧಗೊಂಡ ಈ ಅಲಂಕಾರ ದೇವಾಲಯದ ಪ್ರಮುಖ ಆಕರ್ಷಣೆಯಾಯಿತು. ಅಂದಾಜು ₹45 ಸಾವಿರ ವೆಚ್ಚದಲ್ಲಿ ಈ ವಿಶೇಷ ಅಲಂಕಾರ ರೂಪುಗೊಂಡಿದೆ.

ಶಾಕಾಂಬರಿ ರೂಪದಲ್ಲಿ ಕಂಗೊಳಿಸಿದ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕಾಗಿ ಬೆಳಗ್ಗಿನಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ದೇವಿಯ ಈ ಅಪರೂಪದ ರೂಪವನ್ನು ಕಣ್ತುಂಬಿಕೊಂಡ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ದೇವಸ್ಥಾನದ ಆವರಣದಲ್ಲೂ ಭಕ್ತಿಭಾವದ ವಾತಾವರಣ ಸೃಷ್ಟಿಯಾಗಿತ್ತು.

‘ದೇವಾಲಯದ ಪ್ರಧಾನ ಅರ್ಚಕ ಲಕ್ಷ್ಮೀಶ್ ಶರ್ಮಾ ಅವರ ಪ್ರಕಾರ, ಆಷಾಢ ಮಾಸದಲ್ಲಿ ದೇವಿಗೆ ಸೊಪ್ಪು, ತರಕಾರಿ ಹಾಗೂ ಇತರ ಸಸ್ಯಾಹಾರ ಪದಾರ್ಥಗಳನ್ನು ನೈವೇದ್ಯವಾಗಿ ಅರ್ಪಿಸುವುದು ವಿಶೇಷ ಮಹತ್ವ ಹೊಂದಿದೆ. ಈ ಸಮಯದಲ್ಲಿ ಶಾಕಾಂಬರಿ ಅಲಂಕಾರ ಮಾಡುವುದರಿಂದ ಸಮೃದ್ಧಿ, ಆರೋಗ್ಯ ಮತ್ತು ಅನ್ನಪೂರ್ಣೆಯ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಶಾಕಾಂಬರಿ ದೇವಿ ಯಾರು ?

ಪುರಾಣಗಳ ಪ್ರಕಾರ ಶಾಕಾಂಬರಿ ದೇವಿಯು ಆದಿಪರಾಶಕ್ತಿಯ ಪ್ರಕೃತಿ ಸ್ವರೂಪ. ದೇವಿ ಭಾಗವತ ಪುರಾಣದಲ್ಲಿ ಉಲ್ಲೇಖವಾಗಿರುವಂತೆ, ದುರ್ಗಮಾಸುರನು ವೇದಗಳನ್ನು ಅಪಹರಿಸಿದ ಪರಿಣಾಮ ಭೂಮಿಯಲ್ಲಿ ಭೀಕರ ಬರಗಾಲ ಉಂಟಾಯಿತು. ಆಗ ದೇವಿಯು ತನ್ನ ಸಾವಿರ ಕಣ್ಣುಗಳಿಂದ ಕಣ್ಣೀರು ಸುರಿಸಿ ನದಿಗಳನ್ನು ಹರಿಯುವಂತೆ ಮಾಡಿದಳು. ಬಳಿಕ ತನ್ನ ದೇಹದಿಂದ ಧಾನ್ಯ, ಸೊಪ್ಪು, ತರಕಾರಿ ಮತ್ತು ಹಣ್ಣುಗಳನ್ನು ಸೃಷ್ಟಿಸಿ ಜೀವ ಜಗತ್ತಿನ ಹಸಿವು ನೀಗಿಸಿದಳು. ಈ ಕಾರಣದಿಂದಲೇ ಆಕೆಗೆ ‘ಶಾಕಾಂಬರಿ’ ಎಂಬ ಹೆಸರು ಬಂದಿದೆ.

ಭಕ್ತರು ಇಂದು ಕೂಡ ಕೃತಜ್ಞತೆಯ ಸಂಕೇತವಾಗಿ ದೇವಿಗೆ ಹಣ್ಣು, ತರಕಾರಿ ಮತ್ತು ಸೊಪ್ಪುಗಳನ್ನು ಅರ್ಪಿಸುತ್ತಾರೆ. ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದ ಈ ಅಪರೂಪದ ಶಾಕಾಂಬರಿ ಅಲಂಕಾರ ಆಷಾಢ ಮಾಸದ ಮೊದಲ ಶುಕ್ರವಾರದ ಪ್ರಮುಖ ಆಕರ್ಷಣೆಯಾಗಿ ಭಕ್ತರ ಮನ ಗೆದ್ದಿದೆ.

Exit mobile version