ಬೆಂಗಳೂರು, ಆ. 15: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಅಂಗವಾಗಿ ರಾಜಧಾನಿ ಬೆಂಗಳೂರಿನ ವಿಧಾನಸೌಧದ ಮುಂಭಾಗ ಇಂದು ಅದ್ಧೂರಿ ‘ಫ್ರೀಡಂ ಹಬ್ಬ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸತತ 10 ಗಂಟೆಗಳ ಕಾಲ ನಡೆಯಲಿರುವ ಈ ಉತ್ಸವವು ಒಟ್ಟು 3 ಪ್ರಮುಖ ಭಾಗಗಳಲ್ಲಿ ಜರುಗಲಿದೆ.
ಸ್ವಾತಂತ್ರ್ಯ ದಿನಾಚರಣೆಯ ದಿನವೇ ವಿಧಾನಸೌಧದ ಆವರಣದಲ್ಲಿ ಈ ಮಹೋತ್ಸವ ಆಯೋಜಿಸಿರುವುದು ವಿಶೇಷವಾಗಿದೆ. ಮೊದಲ ಭಾಗದಲ್ಲಿ ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಶಾಲಾ ಮಕ್ಕಳಿಗಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿವಿಧ ಶಾಲೆಗಳ ಲಕ್ಷಾಂತರ ಮಕ್ಕಳು ದೇಶಭಕ್ತಿ ಗೀತೆಗಳು, ದೇಶೀಯ ನೃತ್ಯಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಸ್ವಾತಂತ್ರ್ಯ ಉತ್ಸವಕ್ಕೆ ಮಕ್ಕಳು ತಮ್ಮ ಕಲೆಯ ಮೂಲಕ ರಂಗು ತುಂಬುವುದು ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದೆ.
ಎರಡನೇ ಭಾಗದಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5.30 ರವರೆಗೆ ವಿಧಾನಸೌಧ ಮತ್ತು ಉಚ್ಚ ನ್ಯಾಯಾಲಯದ ಮಧ್ಯದಲ್ಲಿರುವ ಅಂಬೇಡ್ಕರ್ ರಸ್ತೆಯಲ್ಲಿ ಕಣ್ಣು ಕೋರೈಸುವ ‘ಫ್ರೀಡಂ ಪರೇಡ್’ ನಡೆಯಲಿದೆ. ವಿಧಾನಸೌಧದ ಮುಂಭಾಗದ ಐಪಿಒ ಸರ್ಕಲ್ (ಗೋಪಾಲಗೌಡ ಸರ್ಕಲ್) ನಿಂದ ಆರಂಭವಾಗುವ ಈ ಪರೇಡ್ ತಿಮ್ಮಯ್ಯ ವೃತ್ತದವರೆಗೆ ಸಾಗಲಿದೆ. ಈ ಪರೇಡ್ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 15 ತಂಡಗಳು ಹಾಗೂ ವಿವಿಧ ರಾಜ್ಯಗಳ 10 ಪ್ರಮುಖ ಕಲಾತಂಡಗಳು ತಮ್ಮ ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶಿಸಲಿವೆ. ಕರ್ನಾಟಕದ ಜಾನಪದ ಕಲೆ, ಭರತನಾಟ್ಯ ಮತ್ತು ಇತರ ಸಾಂಪ್ರದಾಯಿಕ ಕಲಾ ಪ್ರಕಾರಗಳು ವೀಕ್ಷಕರನ್ನು ಸೆಳೆಯಲಿವೆ.
ಮೂರನೇ ಮತ್ತು ಅತ್ಯಂತ ಆಕರ್ಷಕ ಭಾಗವೆಂದರೆ ಸಂಜೆ 5.30 ರಿಂದ ರಾತ್ರಿ 10 ಗಂಟೆಯವರೆಗೆ ವಿಧಾನಸೌಧದ ಮುಂದಿನ ಬೃಹತ್ ವೇದಿಕೆಯಲ್ಲಿ ನಡೆಯಲಿರುವ ಅದ್ಧೂರಿ ‘ಸಂಗೀತ ರಸಸಂಜೆ’ ಮತ್ತು ನೃತ್ಯ ಕಾರ್ಯಕ್ರಮಗಳು. ಖ್ಯಾತ ಗಾಯಕರಾದ ಎಂ.ಡಿ. ಪಲ್ಲವಿ, ಸಂಜಿತ್ ಹೆಗ್ಡೆ, ರಘು ದೀಕ್ಷಿತ್ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಪ್ರಖ್ಯಾತ ಕಲಾವಿದರು ತಮ್ಮ ಗಾಯನದ ಮೂಲಕ ಜನರನ್ನು ರಂಜಿಸಲಿದ್ದಾರೆ. ದೇಶಭಕ್ತಿ ಗೀತೆಗಳು, ಚಲನಚಿತ್ರ ಹಾಡುಗಳು ಮತ್ತು ಪ್ರೇಕ್ಷಕರ ಬೇಡಿಕೆಯ ಹಾಡುಗಳ ಮೂಲಕ ಇಡೀ ವಾತಾವರಣವನ್ನು ಸಂಗೀತದ ಮೈಕೊಳೆಯಾಗಿಸುವ ತಯಾರಿಯಲ್ಲಿದ್ದಾರೆ ಕಲಾವಿದರು.
ಈ ಬಾರಿಯ ‘ಫ್ರೀಡಂ ಹಬ್ಬ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂಚಿತವಾಗಿ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 20 ಸಾವಿರಕ್ಕೂ ಅಧಿಕ ಜನರು ತಮ್ಮ ನೋಂದಣಿಯನ್ನು ಮಾಡಿಕೊಂಡಿದ್ದು, ಜನರ ಆಸಕ್ತಿ ಅಪಾರವಾಗಿದೆ. ಕಾರ್ಯಕ್ರಮದ ಯಶಸ್ವಿ ನಿರ್ವಹಣೆ ಮತ್ತು ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಡಿಸಿಪಿ, ಎಸಿಪಿ ದರ್ಜೆಯ ಅಧಿಕಾರಿಗಳು ಸೇರಿದಂತೆ ಸುಮಾರು 3,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸರು ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದು, ಅಂಬೇಡ್ಕರ್ ರಸ್ತೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚಾರಿ ನಿರ್ಬಂಧಗಳನ್ನು ಹೇರಲಾಗಿದೆ.





