ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಇತ್ತೀಚೆಗೆ ದೇವಸ್ಥಾನಗಳತ್ತ ಮುಖ ಮಾಡುತ್ತಿದ್ದಾರೆ. ಮೊನ್ನೆ ಹಾಸನಾಂಬ ದೇಗುಲದಲ್ಲಿ ದರ್ಶನ ಪಡೆದಿದ್ದ ಅವರು, ಇಂದು ಕುಟುಂಬ ಸಮೇತ ಆಂಧ್ರಪ್ರದೇಶದ ಮಂತ್ರಾಲಯಕ್ಕೆ ತೆರಳಿ ಶ್ರೀ ರಾಘವೇಂದ್ರ ಸ್ವಾಮಿಯ ಮೂಲ ಬೃಂದಾವನ ದರ್ಶನ ಪಡೆದಿದ್ದಾರೆ.
ರಾಯರ ಮೂಲ ಬೃಂದಾವನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ, ಮೂಲ ರಾಮದೇವರ ಮಹಾಭಿಷೇಕದಲ್ಲಿ ಭಾಗವಹಿಸಿದ ಡಿಕೆಶಿ ಅವರು ಭಕ್ತಿ ಭಾವದಿಂದ ಪೂರ್ಣ ಕಾರ್ಯದಲ್ಲಿ ತೊಡಗಿಕೊಂಡರು. ಇದರ ನಂತರ ಅವರು ಗಾಣದಾಳ ಗ್ರಾಮದ ಪಂಚಮುಖಿ ಆಂಜನೇಯ ದೇವಾಲಯಕ್ಕೂ ಭೇಟಿ ನೀಡಿ ಪುಷ್ಪಾರ್ಚನೆ ಮಾಡಿ ಇಷ್ಟಾರ್ಥ ಪ್ರಾಪ್ತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಪೂಜೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, “ಈ ಹಿಂದೆ ರಾಹುಲ್ ಗಾಂಧಿಯವರ ಭಾರತ ಜೋಡೊ ಯಾತ್ರೆ ವೇಳೆ ನಾವು ಮಂತ್ರಾಲಯ ಮಠಕ್ಕೆ ಬಂದಿದ್ದೆವು. ಮತ್ತೆ ರಾಯರ ದರ್ಶನ ಪಡೆಯಬೇಕೆಂಬ ಆಶೆ ಇತ್ತು. ಆ ಆಸೆ ಇಂದು ಪೂರ್ಣಗೊಂಡಿದೆ. ಎಲ್ಲದಕ್ಕೂ ದೇವರ ಅನುಗ್ರಹ, ಗುರುವಿನ ಆಶೀರ್ವಾದ ಮುಖ್ಯ” ಎಂದು ಹೇಳಿದರು.
ನಂತರ ಮಾತನಾಡಿದ ಅವರು, “ಮಠದ ಶ್ರೀಗಳು ಮಠಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ನಿಜಕ್ಕೂ ರಾಯರೇ ಕರೆಸಿಕೊಂಡಿದ್ದಾರೆ ಎಂಬ ಭಾವನೆ ಇದೆ. ಇಂದು ಬಹಳ ವಿಶೇಷ ದಿನ, ಅದಕ್ಕಾಗಿ ಕುಟುಂಬ ಸಮೇತ ಬಂದು ದರ್ಶನ ಪಡೆದು ಆಶೀರ್ವಾದ ಪಡೆದಿದ್ದೇನೆ” ಎಂದು ಹೇಳಿದರು.
ಡಿಕೆಶಿ ತಮ್ಮ ಹಿಂದಿನ ಸಂಕಲ್ಪದ ಕುರಿತು ಪ್ರಸ್ತಾಪಿಸಿದರು. “ಕಳೆದ ಬಾರಿ ನಾನು ರಾಯರ ಬಳಿಯಲ್ಲಿ ಸಂಕಲ್ಪ ಮಾಡಿದ್ದೆ. ಅದಾದ ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿತು. ಈಗ ಮತ್ತೆ ರಾಯರ ಆಶೀರ್ವಾದ ಪಡೆಯಲು ಬಂದಿದ್ದೇನೆ. ಒಳ್ಳೆಯದಾಗಲಿ, ನಾಡಿಗೆ ಶಾಂತಿ, ಸುಖ ಸಿಗಲಿ ಅಂತ ಪ್ರಾರ್ಥಿಸಿದ್ದೇನೆ” ಎಂದು ಹೇಳಿದರು.





