ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಸಂಜೆ 4:05ಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಾರಿ ಸಮಾರಂಭವು ವಿಶೇಷ ಮಹತ್ವ ಪಡೆದಿದೆ. ರಾಜ್ಯ ಇತಿಹಾಸದಲ್ಲಿ ಮೊದಲ ಬಾರಿಗೆ ಎಲ್ಲಾ ಧರ್ಮಗಳ ಸ್ವಾಮೀಜಿಗಳು, ಮಠಾಧಿಪತಿಗಳು, ಫಾದರ್ಗಳು ಮತ್ತು ಮೌಲ್ವಿಗಳ ಸಮ್ಮುಖದಲ್ಲಿ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಲಿದ್ದಾರೆ.
ಈವರೆಗೆ ಯಾವುದೇ ಮುಖ್ಯಮಂತ್ರಿ ಸರ್ವಧರ್ಮ ಸ್ವಾಮೀಜಿಗಳ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿಲ್ಲ. ಡಿ.ಕೆ.ಶಿವಕುಮಾರ್ ಅವರು ಈ ಮೂಲಕ ಸರ್ವ ಧರ್ಮ ಸಹಿಷ್ಣುತೆ, ಪರಸ್ಪರ ಸಹಬಾಳ್ವೆ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಬಲವಾಗಿ ಸಾರುತ್ತಿದ್ದಾರೆ. ಈ ಸಂದೇಶಕ್ಕೆ ಅನುಗುಣವಾಗಿ ಎಲ್ಲಾ ಧರ್ಮ ಮತ್ತು ಜಾತಿಗಳ ಸುಮಾರು 55 ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗಿದೆ.
ಪ್ರಮುಖ ಧಾರ್ಮಿಕ ನಾಯಕರಲ್ಲಿ ಕೆಲವರು:
- ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು (ಆದಿಚುಂಚನಗಿರಿ ಮಹಾಸಂಸ್ಥಾನ)
- ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು (ಸುತ್ತೂರು ಮಠ, ಮೈಸೂರು)
- ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು (ಸಿದ್ಧಗಂಗಾ ಮಠ, ತುಮಕೂರು)
- ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿಗಳು (ವಿಶ್ವ ಒಕ್ಕಲಿಗ ಮಹಾಸಂಸ್ಥಾನ)
- ಶ್ರೀ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮಿಗಳು (ಪೇಜಾವರ ಮಠ, ಉಡುಪಿ)
- ಶ್ರೀ ಸ್ವಸ್ತಿಶ್ರೀ ಆಗಮಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು (ದಿಗಂಬರ ಜೈನ ಮಠ, ಶ್ರವಣಬೆಳಗೊಳ)
- ಆರ್ಚ್ಬಿಷಪ್ ಡಾ. ಪೀಟರ್ ಮಚಾಡೋ (ಕ್ಯಾಥೋಲಿಕ್ ಚರ್ಚ್)
- ಹಜರತ್ ಹಫೀಜ್ ಡಾ. ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನ್ (ದರ್ಗಾ ಹಜರತ್ ಖ್ವಾಜಾ ಬಂದೆನವಾಜ್, ಕಲಬುರಗಿ)
ಇದರ ಜೊತೆಗೆ ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ, ಕೇರಳ ಸಿಎಂ ಸತೀಶನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಭೂಪೇಂದ್ರ ಬಘೇಲ್, ದಿಗ್ವಿಜಯ್ ಸಿಂಗ್, ಭೂಪೇಂದ್ರ ಸಿಂಗ್ ಹೂಡಾ, ಸುಶೀಲ್ ಕುಮಾರ್ ಶಿಂಧೆ ಸೇರಿದಂತೆ ಸುಮಾರು 50 ವಿವಿಐಪಿ ನಾಯಕರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಈ ನಡೆಯು ರಾಜಕೀಯಕ್ಕಿಂತಲೂ ಮೇಲಾಗಿ ಸಾಮಾಜಿಕ ಐಕ್ಯತೆಯನ್ನು ಬಲಪಡಿಸುವ ಕ್ರಮವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಲೋಕಭವನದ ಸುತ್ತಮುತ್ತಲೂ ಭದ್ರತಾ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.
ಇಂದಿನ ಈ ಐತಿಹಾಸಿಕ ಕ್ಷಣವು ಕರ್ನಾಟಕದಲ್ಲಿ ಧಾರ್ಮಿಕ ಸೌಹಾರ್ದತೆಗೆ ಹೊಸ ಮಾದರಿಯನ್ನು ಸೃಷ್ಟಿಸುವ ಸಾಧ್ಯತೆಯಿದೆ. ರಾಜ್ಯದ ಜನತೆ ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಲ್ಲಿ ಹೊಸ ಸರ್ಕಾರದಿಂದ ಉತ್ತಮ ಅಭಿವೃದ್ಧಿ ನಿರೀಕ್ಷಿಸುತ್ತಿದೆ.





