ಉತ್ತರ ಕನ್ನಡ: ಖಾಸಗಿ ಶಾಲೆಯ ಯುಕೆಜಿ ವಿದ್ಯಾರ್ಥಿಯೊಬ್ಬ ತನ್ನ ಟಿಫಿನ್ ಬಾಕ್ಸ್ನಲ್ಲಿ ತಂದಿದ್ದ ಕ್ರೀಮ್ ಬಿಸ್ಕೆಟ್ನಲ್ಲಿ ಜೀವಂತ ಹುಳುಗಳು ಪತ್ತೆಯಾಗಿವೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ಘಟನೆಯ ವಿವರ
ದಾಂಡೇಲಿಯ ಖಾಸಗಿ ಶಾಲೆಯ ಯುಕೆಜಿ ವಿದ್ಯಾರ್ಥಿಯೊಬ್ಬನಿಗೆ ಪೋಷಕರು ಸ್ನ್ಯಾಕ್ಸ್ಗಾಗಿ ಕ್ರೀಮ್ ಬಿಸ್ಕೇಟ್ ನೀಡಿದ್ದರು. ಆದರೆ ಆ ಬಿಸ್ಕೇಟ್ನೊಳಗೆ ಜೀವಂತ ಹುಳು ಪತ್ತೆಯಾಗಿದ್ದು, ವಿದ್ಯಾರ್ಥಿ ಬೆಚ್ಚಿಬಿದ್ದಿದ್ದಾನೆ. ನಂತರ ವಿದ್ಯಾರ್ಥಿ ತಕ್ಷಣ ಶಿಕ್ಷಕರಿಗೆ ವಿಷಯ ತಿಳಿಸಿದ್ದಾನೆ. ಶಿಕ್ಷಕರು ಪರಿಶೀಲಿಸಿದಾಗ ನಿಜವಾಗಿಯೂ ಬಿಸ್ಕೇಟ್ನಲ್ಲಿ ಹುಳುಗಳು ಪತ್ತೆಯಾಗಿದೆ.
ಘಟನೆಯ ನಂತರ ಶಿಕ್ಷಕರು ಈ ವಿಷಯವನ್ನು ಪೋಷಕರಿಗೆ ತಿಳಿಸಿದರು. ಶಿಕ್ಷಕರು ಪೋಷಕರನ್ನು ಸಂಪರ್ಕಿಸಿ, “ಹೊರಗಿನ ತಿಂಡಿಗಳ ಬದಲು ಮನೆಯಲ್ಲಿ ತಯಾರಿಸಿದ ಆಹಾರವನ್ನು ನೀಡಿ” ಎಂದು ಎಚ್ಚರಿಕೆ ನೀಡಿದ್ದಾರೆ. “ಮನೆಯ ಆಹಾರದಲ್ಲಿ ಮಕ್ಕಳ ಆರೋಗ್ಯ ಮತ್ತು ಪೋಷಕಾಂಶ ಸುರಕ್ಷಿತವಾಗಿರುತ್ತದೆ” ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ವಂದೇ ಭಾರತ್ ರೈಲಿನ ಆಹಾರದಲ್ಲಿ ಹುಳ: ವೈರಲ್ ಆಯ್ತು ಫೋಟೋ
ನವದೆಹಲಿ: ಭಾರತೀಯ ರೈಲ್ವೆಯ ಪ್ರತಿಷ್ಠಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಸರ್ವ್ ಮಾಡಲಾದ ಆಹಾರದಲ್ಲಿ ಹುಳಗಳು ಕಂಡು ಬಂದಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ರೈಲ್ವೆಯ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯ ಬಗ್ಗೆ ತೀವ್ರ ಟೀಕೆಗಳು ಕೇಳಿಬಂದಿವೆ.
ಪ್ರಯಾಣಿಕರೊಬ್ಬರಾದ ಹಾರ್ದಿಕ್ ಪಾಂಚಾಲ್ ಎಂಬವರು ಶ್ರೀ ಮಾತಾ ವೈಷ್ಣೋ ದೇವಿ ಕತ್ರಾದಿಂದ ದೆಹಲಿಗೆ ತೆರಳುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಬಡಿಸಲಾದ ದಾಲ್ನಲ್ಲಿ ಕಪ್ಪು ಹುಳು ತೇಲುತ್ತಿರುವ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅಲ್ಯೂಮಿನಿಯಂ ಕವರ್ನಲ್ಲಿ ಒದಗಿಸಲಾದ ದಾಲ್ನಲ್ಲಿ ಸ್ಪಷ್ಟವಾಗಿ ಕಪ್ಪು ಹುಳು ಕಾಣಿಸುತ್ತಿದೆ. “ಓಹ್! ದಾಲ್ನಲ್ಲಿ ಕಪ್ಪು ಹುಳು!” ಎಂದು ಶೀರ್ಷಿಕೆ ನೀಡಿರುವ ಪಾಂಚಾಲ್, ಈ ಘಟನೆ ಜುಲೈ 22 ರಂದು ಕೋಚ್ C3, ಸೀಟ್ ಸಂಖ್ಯೆ 53 ರಲ್ಲಿ ನಡೆದಿದೆ ಎಂದು ತಿಳಿಸಿದ್ದಾರೆ.
ಈ ಫೋಟೋ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ರೈಲ್ವೆಯ ಆಹಾರದ ಗುಣಮಟ್ಟದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಳಕೆದಾರರು ಈ ಘಟನೆಯನ್ನು ಖಂಡಿಸಿ, ರೈಲ್ವೆ ಇಲಾಖೆಯ ಸ್ವಚ್ಛತೆ ಮತ್ತು ಆಹಾರ ನಿರ್ವಹಣೆಯ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ಕೆಲವರು ತಮ್ಮ ದೂರಿನಲ್ಲಿ ಮೊದಲು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಟ್ಯಾಗ್ ಮಾಡಿದ್ದರೂ, ನಂತರ ತಪ್ಪನ್ನು ಸರಿಪಡಿಸಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ರೈಲ್ವೆ ಇಲಾಖೆಯ ಅಧಿಕೃತ ರೈಲ್ವೆ ಸೇವಾ ಖಾತೆಯು ಈ ಘಟನೆಗೆ ಸಂಬಂಧಿಸಿದಂತೆ ಕ್ಷಮೆಯಾಚಿಸಿದ್ದು, “ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ದಯವಿಟ್ಟು PNR, ಮೊಬೈಲ್ ಸಂಖ್ಯೆ ಮತ್ತು ಇತರ ವಿವರಗಳನ್ನು ಹಂಚಿಕೊಳ್ಳಿ. ತಕ್ಷಣದ ಪರಿಹಾರಕ್ಕಾಗಿ https://railmadad.indianrailways.gov.in ನಲ್ಲಿ ನಿಮ್ಮ ಕಳವಳವನ್ನು ವ್ಯಕ್ತಪಡಿಸಬಹುದು” ಎಂದು ಪ್ರತಿಕ್ರಿಯಿಸಿದೆ.





