ಬೆಂಗಳೂರು, ರಾಜ್ಯ ರಾಜಧಾನಿ ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ರಾಜ್ಯ ಸಚಿವ ಸಂಪುಟವು ಸಮ್ಮತಿ ನೀಡಿದೆ. ಆದರೆ, ಪಂದ್ಯ ನಡೆಸಲು ಕೆಲವು ಕಟ್ಟನಿಟ್ಟಿನ ಷರತ್ತುಗಳನ್ನ ಹಾಕಲಾಗಿದ್ದು ಅದರೊಟ್ಟಿಗೆ ಪಂದ್ಯ ನಡೆಸಲು ಸೂಚನೆ ನೀಡಲಾಗಿದೆ.
ಈ ಬಾರಿ ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದಿದ್ದ ಕಾಲ್ತುಳಿತ ಉಂಟಾಗಿ ಹಲವಾರು ಕ್ರಿಕೇಟ್ ಅಭಿಮಾನಿಗಳು ಸಾವನಪ್ಪಿದ್ದರು ಅದರ ಪರಿಣಾಮವಾಗಿ, ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಾತ್ಕಾಲಿಕ ಕ್ರಮವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಮತ್ತು ಇತರೆ ದೊಡ್ಡ ಸಮಾರಂಭಗಳನ್ನು ನಡೆಸುವುದನ್ನು ಸರ್ಕಾರ ಸ್ಥಗಿತಗೊಳಿಸಿತ್ತು.
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪ್ರಮುಖ ಕ್ರಿಕೆಟ್ ಪಂದ್ಯಗಳು, ವಿಶೇಷವಾಗಿ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಾವಳಿಯ ಮೇಲೂ ಇದು ನೇರ ಪರಿಣಾಮ ಬೀರುವ ಆತಂಕ ಎದುರಾಗಿತ್ತು. ಈಗ ಸಚಿವ ಸಂಪುಟ ನೀಡಿರುವ ಒಪ್ಪಿಗೆಯಿಂದಾಗಿ ಈ ಕ್ರಿಕೆಟ್ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಪಂದ್ಯಗಳ ಪುನರಾರಂಭಕ್ಕೆ ಒಪ್ಪಿಗೆ ನೀಡಲು ಸಚಿವ ಸಂಪುಟವು ಪ್ರಮುಖವಾಗಿ ಕುನ್ಹಾ ವರದಿ (Kunha Report) ಯ ಶಿಫಾರಸುಗಳನ್ನು ಆಧರಿಸಿದೆ. ಕಾಲ್ತುಳಿತದ ಘಟನೆಯ ನಂತರ, ಕ್ರೀಡಾಂಗಣದ ಸುರಕ್ಷತಾ ಲೋಪಗಳನ್ನು ಪರಿಶೀಲಿಸಲು ಸರ್ಕಾರವು ಕುನ್ಹಾ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಸ್ಟೇಡಿಯಂನ ವಿನ್ಯಾಸ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳು, ತುರ್ತು ನಿರ್ವಹಣಾ ವ್ಯವಸ್ಥೆಗಳು, ಪ್ರೇಕ್ಷಕರ ಸಾಮರ್ಥ್ಯ ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ಕೂಲಂಕುಷವಾಗಿ ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಿತ್ತು.
ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ಪ್ರಮುಖ ತಿರ್ಮಾನವೆಂದರೆ:
-
ಕುನ್ಹಾ ವರದಿ ಶಿಫಾರಸುಗಳ ಅನುಷ್ಠಾನ: ಈ ವರದಿಯಲ್ಲಿ ಸ್ಟೇಡಿಯಂನ ಭದ್ರತೆ ಮತ್ತು ಮೂಲಸೌಕರ್ಯ ಸುಧಾರಣೆಗಳ ಬಗ್ಗೆ ನೀಡಿರುವ ಎಲ್ಲ ಸಲಹೆಗಳನ್ನು ಕಡ್ಡಾಯವಾಗಿ ಇಂಪ್ಲಿಮೆಂಟ್ ಮಾಡಬೇಕು.
-
ಷರತ್ತುಗಳ ಅನುಸರಣೆ: ಕುನ್ಹಾ ವರದಿಯಲ್ಲಿರುವ ಸುರಕ್ಷತಾ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಇರುವ ಮುಖ್ಯ ಷರತ್ತು.
-
ಗೃಹ ಇಲಾಖೆಗೆ ಅಂತಿಮ ಅಧಿಕಾರ: ಈ ಹೊಸ ಷರತ್ತುಗಳೊಂದಿಗೆ ಪಂದ್ಯಗಳನ್ನು ನಡೆಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಸಂಪೂರ್ಣ ಅಧಿಕಾರವನ್ನು ಗೃಹ ಇಲಾಖೆಗೆ ನೀಡಲಾಗಿದೆ. ಅಂದರೆ, ಕ್ರೀಡಾಂಗಣದ ಅಧಿಕಾರಿಗಳು ಕುನ್ಹಾ ವರದಿ ಶಿಫಾರಸುಗಳನ್ನು ಅನುಷ್ಠಾನಗೊಳಿಸಿದ ಬಗ್ಗೆ ಗೃಹ ಇಲಾಖೆಯು ಪರಿಶೀಲಿಸಿ, ತೃಪ್ತಿಯಾದ ನಂತರವಷ್ಟೇ ಪಂದ್ಯಗಳಿಗೆ ಶಾಶ್ವತ ಅನುಮತಿ ದೊರೆಯಲಿದೆ.
ಬೆಂಗಳೂರು ಮತ್ತು ಚಿನ್ನಸ್ವಾಮಿ ಕ್ರೀಡಾಂಗಣವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ತವರು ಮೈದಾನವಾಗಿರುವುದರಿಂದ, ಈ ಅನುಮತಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಇದ್ದ ಅಡೆತಡೆಯನ್ನ ನಿವಾರಿಸಿದೆ. ಮುಂಬರುವ ಕ್ರಿಕೆಟ್ ಸರಣಿಗಳು ಮತ್ತು ಐಪಿಎಲ್ ಸೀಸನ್ ಅನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಆಯೋಜಿಸಲು ಅನುಮತಿ ನೀಡಿರುವುದರಿಂದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.





