ಆನೇಕಲ್ / ಹೊಸಕೋಟೆ: ನಿಧಿ ಆಸೆಗಾಗಿ ಎಂಟು ತಿಂಗಳ ಗಂಡು ಮಗುವನ್ನು ಬಲಿ ಕೊಡಲು ಯತ್ನಿಸಿದ್ದಾರೆ ಎಂಬ ಭಯಾನಕ ಆರೋಪ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಜನತಾ ಕಾಲೋನಿಯಲ್ಲಿ ಕೇಳಿಬಂದಿದೆ. ದತ್ತು ಪಡೆದ ಮಗುವನ್ನೇ ಬಲಿ ಪೂಜೆಗೆ ಬಳಸಲು ತಯಾರಿ ನಡೆಸಿದ್ದರು ಎನ್ನಲಾಗಿದೆ. ಈ ಘಟನೆ ಬಗ್ಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದ ಹಿನ್ನೆಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಅಧಿಕಾರಿಗಳು ದಾಳಿ ನಡೆಸಿ ಮಗುವನ್ನು ರಕ್ಷಿಸಿದ್ದಾರೆ.
ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿರುವ ಸೈಯದ್ ಇಮ್ರಾನ್ ಎಂಬ ವ್ಯಕ್ತಿಯ ಮನೆಯಲ್ಲಿ ಈ ಘಟನೆ ನಡೆದಿದ್ದು, ನಿಧಿಗಾಗಿ ವಿಶೇಷ ಪೂಜೆ ನಡೆಸಲಾಗುತ್ತಿತ್ತು ಎಂಬ ಆರೋಪ ಇದೆ. ಎಂಟು ತಿಂಗಳ ಹಿಂದೆ ಇಮ್ರಾನ್ ಮತ್ತು ಕುಟುಂಬದವರು ಗಂಡು ಮಗುವನ್ನು ಅಕ್ರಮವಾಗಿ ಖರೀದಿಸಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪವೂ ಕೇಳಿಬಂದಿದೆ.
ಅಪರಿಚಿತರಿಂದ ಕರೆ-ಬಯಲಾದ ಭಯಾನಕ ಸತ್ಯ
ಜನವರಿ 3ರಂದು ಹುಣ್ಣಿಮೆಯ ಹಿನ್ನೆಲೆಯಲ್ಲಿ ಮಗುವನ್ನು ಬಲಿ ಕೊಡಲು ತಯಾರಿ ನಡೆಯುತ್ತಿದೆ ಎಂಬ ಮಾಹಿತಿ ಮಕ್ಕಳ ಸಹಾಯವಾಣಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಮೂಲಕ ಮಾಹಿತಿ ತಿಳಿದಿದೆ. ತಕ್ಷಣವೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ರವಾನೆಯಾಗಿದ್ದು, ಅಧಿಕಾರಿಗಳು ಯಾವುದೇ ವಿಳಂಬವಿಲ್ಲದೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಮನೆಯ ಒಂದು ಕೋಣೆಯಲ್ಲಿ ಗುಂಡಿ ತೆಗೆದು ವಿಶೇಷ ಪೂಜೆ ಮಾಡಿರುವುದು ಪತ್ತೆಯಾಗಿದೆ. ಪೂಜೆಗೆ ಸಂಬಂಧಿಸಿದ ವಸ್ತುಗಳು, ಪೂಜಾ ಸಾಮಗ್ರಿಗಳು ಮತ್ತು ಸಂಶಯಾಸ್ಪದ ಚಟುವಟಿಕೆಗಳ ಗುರುತುಗಳು ಕಂಡುಬಂದಿದ್ದು, ಮಗುವನ್ನು ಬಲಿ ನೀಡಲು ಸಿದ್ಧತೆ ನಡೆದಿರಬಹುದು ಎಂಬ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಈ ದೃಶ್ಯಗಳನ್ನು ಕಂಡ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.
ಮಗು ಸುರಕ್ಷಿತ- ಶಿಶು ಕೇಂದ್ರಕ್ಕೆ ರವಾನೆ
ದಾಳಿ ವೇಳೆ ಮನೆಯಲ್ಲಿದ್ದ ಎಂಟು ತಿಂಗಳ ಗಂಡು ಮಗುವನ್ನು ಅಧಿಕಾರಿಗಳು ತಕ್ಷಣ ವಶಕ್ಕೆ ಪಡೆದು ಸುರಕ್ಷಿತವಾಗಿ ಶಿಶು ಕೇಂದ್ರಕ್ಕೆ ರವಾನಿಸಿದ್ದಾರೆ. ಮಗು ಸುರಕ್ಷಿತವಾಗಿದ್ದು, ವೈದ್ಯಕೀಯ ತಪಾಸಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಗುವಿನ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎನ್ನಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, “ಮಗು ಬಲಿಗೆ ತಯಾರಿ ನಡೆದಿರುವ ಬಗ್ಗೆ ನಮಗೆ ಗಂಭೀರ ಮಾಹಿತಿ ಬಂದಿತ್ತು. ಸ್ಥಳಕ್ಕೆ ದಾಳಿ ನಡೆಸಿದಾಗ ಅನುಮಾನಾಸ್ಪದ ಪೂಜೆ ನಡೆದಿರುವುದು ದೃಢಪಟ್ಟಿದೆ. ಮಗುವಿನ ಸುರಕ್ಷತೆ ನಮ್ಮ ಮೊದಲ ಆದ್ಯತೆ” ಎಂದು ತಿಳಿಸಿದ್ದಾರೆ.
ಕಾನೂನು ಕ್ರಮಕ್ಕೆ ಸಿದ್ಧತೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಲಿಬೆಲೆ ಪೊಲೀಸರು ತನಿಖೆ ಆರಂಭಿಸಿದ್ದು, ಮಗುವನ್ನು ಅಕ್ರಮವಾಗಿ ಖರೀದಿಸಿದ್ದಾರೆಯೇ? ದತ್ತು ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘನೆಯಾಗಿದೆಯೇ? ನಿಜವಾಗಿಯೂ ಬಲಿ ಪೂಜೆ ನಡೆಸುವ ಉದ್ದೇಶ ಇತ್ತೇ? ಎಂಬ ಎಲ್ಲ ಅಂಶಗಳ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ.





