ವರದಿ: ಮೂರ್ತಿ,ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ
ಹಣಕಾಸಿನ ವಿಚಾರಕ್ಕೆ ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಅಪಹರಿಸಿ, ರಾಮನಗರ ಜಿಲ್ಲೆಯ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಾಳು ಗ್ರಾಮದ ಚಿರಂತ್ ಶಾಲೆ ಬಳಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಬೆಂಗಳೂರಿನ ಚಿಕ್ಕಬ್ಯಾಲಕೆರೆ ಗ್ರಾಮದ ನಿವಾಸಿ ಚಂದ್ರಶೇಖರ್ (40) ಕೊಲೆಯಾದ ದುರ್ದೈವಿ. ಇಂದು ಬೆಳಿಗ್ಗೆ ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಸಾತನೂರು ಠಾಣೆಯ ಪೊಲೀಸರು ಮಹಜರು ನಡೆಸಿ ಪರಿಶೀಲನೆ ಕೈಗೊಂಡರು. ನಂತರ ಸುತ್ತಲಿನ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಯಿತು. ಮೃತನ ಪೋಷಕರಿಗೆ ಕೂಡ ಮಾಹಿತಿ ನೀಡಲಾಯಿತು.
ಚಂದ್ರಶೇಖರ್ ಅವರ ಬಟ್ಟೆ ಮತ್ತು ಮೃತದೇಹದ ಚಹರೆಯಿಂದ ಗುರುತಿಸಲು ಸಾಧ್ಯವಾಯಿತು. ಅಪಹರಣ ಮಾಡಿದ ಕಾರಿನಲ್ಲಿ ದುಷ್ಕರ್ಮಿಗಳು ಚಾಕು ಹಾಗೂ ಕಲ್ಲುಗಳನ್ನು ಉಪಯೋಗಿಸಿ ಬರ್ಬರವಾಗಿ ಹತ್ಯೆ ನಡೆಸಿರುವುದು ಪತ್ತೆಯಾಗಿದೆ.
ಹತ್ಯೆಗೆ ಮುಂಚೆಯೇ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ್ ಪೋಷಕರು ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಹುಡುಕಾಟದ ಸಂದರ್ಭದಲ್ಲಿ ಈ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಅರೋಪಿಗಳ ಪತ್ತೆಗೆ ಸೋಲದೇವನಹಳ್ಳಿ ಹಾಗೂ ಸಾತನೂರು ಪೊಲೀಸರು ಎರಡು ಪ್ರತ್ಯೇಕ ತಂಡಗಳನ್ನು ನೇಮಿಸಿ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ.