ಚಾಮುಂಡಿ ಬೆಟ್ಟದಲ್ಲಿ ಅಗ್ನಿ ಅವಘಡ: ಕಿಡಿಗೇಡಿಗಳ ಕೃತ್ಯ ಶಂಕೆ

ಚಾಮುಂಡಿ ಬೆಟ್ಟದಲ್ಲಿ ಅಗ್ನಿ ಅವಘಡ: ಕಿಡಿಗೇಡಿಗಳ ಕೃತ್ಯ ಶಂಕೆ

Chamundibetta

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೀಕರ ಬೆಂಕಿ ಅನಾಹುತ ಸಂಭವಿಸಿದ್ದು, ನೂರಾರು ಎಕರೆ ಅರಣ್ಯ ಭಸ್ಮವಾಗಿದೆ. ಕಿಡಿಗೇಡಿಗಳ ದುಷ್ಕೃತ್ಯವೇ ಇದಕ್ಕೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದ್ದು, ಸ್ಥಳೀಯರು ಹಾಗೂ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಟ್ಟದ ರಸ್ತೆಯ ಎರಡೂ ಬದಿಗಳಲ್ಲಿ ಹೊತ್ತಿ ಉರಿದ ಬೆಂಕಿ, ಗಾಳಿಯ ತೀವ್ರತೆಗೆ ಮತ್ತಷ್ಟು ವ್ಯಾಪಕವಾಗಿ ಹಬ್ಬಿ ದೇವಿಕೆರೆ ಸಮೀಪದವರೆಗೂ ಮುಟ್ಟಿತ್ತು.

ಅಗ್ನಿಶಾಮಕ ದಳದ ಹರಸಾಹಸ

ನಿನ್ನೆ ಮಧ್ಯಾಹ್ನದಿಂದಲೇ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ನಿರಂತರ ಪ್ರಯತ್ನ ನಡೆಸಿದರು. ಸಾಯಂಕಾಲ ಹೊತ್ತಿಗೆ ತಗ್ಗಿದ್ದ ಜ್ವಾಲೆಗಳು ರಾತ್ರಿ ಮತ್ತೆ ತೀವ್ರಗೊಂಡವು. ಭಾರೀ ಶ್ರಮದ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸುವಲ್ಲಿ ತಂಡ ಯಶಸ್ವಿಯಾಗಿದೆ.

ಬೆಟ್ಟಕ್ಕೆ ಪ್ರವೇಶ ನಿಷೇಧ

ಅಗ್ನಿ ಅಪಾಯದ ಕಾರಣ ಚಾಮುಂಡಿ ಬೆಟ್ಟಕ್ಕೆ ತೆರಳುವ ಮಾರ್ಗವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ತಾವರೆಕೆರೆ ಗೇಟ್ ಬಳಿ ಸಾರ್ವಜನಿಕರನ್ನು ತಡೆಹಿಡಿಯಲಾಯಿತು. ಬೆಟ್ಟದ ಮೇಲಿರುವ ಮನೆಗಳು ಮತ್ತು ದೇವಸ್ಥಾನಕ್ಕೆ ಬೆಂಕಿ ವ್ಯಾಪಿಸದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಂಡರು.

ಸ್ಥಳೀಯರ ಆಕ್ರೋಶ

ಸ್ಥಳೀಯರು ಹಾಗೂ ಭಕ್ತರು ಈ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ. “ಬೆಂಕಿಯ ಕಿಡಿ ಕಾಣಿಸಿಕೊಂಡ ತಕ್ಷಣವೇ ಕ್ರಮ ಕೈಗೊಂಡಿದ್ದರೆ, ಇಷ್ಟೊಂದು ಅರಣ್ಯ ನಾಶವಾಗುತ್ತಿರಲಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇಂತಹ ಅವಘಡಗಳು ಪುನರಾವೃತ್ತಿಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಕಿಡಿಗೇಡಿಗಳ ಕೃತ್ಯವೋ? ಅಧಿಕಾರಿಗಳ ನಿರ್ಲಕ್ಷ್ಯವೋ?

ಈ ಬೆಂಕಿ ಅನಾಹುತ ನೈಸರ್ಗಿಕವೋ ಅಥವಾ ಮಾನವ ಸೃಷ್ಟಿತೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ, ಪರಿಸರ ನಾಶದ ಪರಿಣಾಮಗಳು ಗಂಭೀರವಾಗಿರುವುದರಿಂದ ಇಂತಹ ಘಟನೆಗಳು ಪುನಃ ಸಂಭವಿಸದಂತೆ ಕಠಿಣ ನಿಯಂತ್ರಣ ಕೈಗೊಳ್ಳಬೇಕಾಗಿದೆ.

Exit mobile version