ಡೈರೆಕ್ಟರ್ ಕಿಡ್ನಾಪ್ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್: ಭೀಮಾ ಸಿನಿಮಾ ನಟಿ ಐಶ್ವರ್ಯಾ ಅರೆಸ್ಟ್

ಕನ್ನಡ ಚಿತ್ರರಂಗದ ನಿರ್ದೇಶಕ ಅನೀಶ್ ಅವರನ್ನು ಕಿಡ್ನಾಪ್ ಮಾಡಿ ಚಿನ್ನಾಭರಣ ಮತ್ತು ಹಣ ಸುಲಿಗೆ ಮಾಡಿದ ಘಟನೆಯಲ್ಲಿ ದೊಡ್ಡ ಟ್ವಿಸ್ಟ್. ದುನಿಯಾ ವಿಜಯ್ ಅಭಿನಯದ ‘ಭೀಮಾ’ ಸಿನಿಮಾದಲ್ಲಿ ನಟಿಸಿದ್ದ ನಟಿ ಐಶ್ವರ್ಯಾ ಸೇರಿದಂತೆ 11 ಜನರ ಗ್ಯಾಂಗ್ ಅನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ನಿರ್ದೇಶಕನೊಂದಿಗಿನ ಹಣದ ವ್ಯಾಪಾರದ ಜಗಳವೇ ಈ ಕಿಡ್ನಾಪ್‌ಗೆ ಮೂಲ ಕಾರಣ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಘಟನೆಯ ವಿವರ :

ಇತ್ತೀಚೆಗೆ ‘ಜೀವನದ ಭಾಷೆ’ ಎಂಬ ಹೊಸ ಸಿನಿಮಾ ಶುರು ಮಾಡಿದ್ದ ನಿರ್ದೇಶಕ ಅನೀಶ್ ಅವರು, ಕಾರಣಾಂತರಗಳಿಂದ ಸಿನಿಮಾ ನಿಲ್ಲಿಸಿ ಮುಂಬೈಗೆ ಶಿಫ್ಟ್ ಆಗಿದ್ದರು. ಅವರು ತಮ್ಮ ಕಾರನ್ನು ಮಾರಾಟ ಮಾಡುವ ಬಗ್ಗೆ ನಟಿ ಐಶ್ವರ್ಯಾ ಅವರಿಗೆ ತಿಳಿಸಿದ್ದರು. ಆ ಮಾಹಿತಿಯನ್ನು ಬಳಸಿಕೊಂಡು ಆರೋಪಿಗಳು ನಟಿಯ ಮೂಲಕ ನಿರ್ದೇಶಕನನ್ನು ಸಂಪರ್ಕಿಸಿ, ಕಾರು ಖರೀದಿಸುವ ನೆಪದಲ್ಲಿ ಬೆಂಗಳೂರಿಗೆ ಕರೆಸಿದ್ದರು.

ಆಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನಿರ್ದೇಶಕನನ್ನು ಕರೆತಂದು ಕಾರಿನಲ್ಲೇ ಕಿಡ್ನಾಪ್ ಮಾಡಲಾಯಿತು. ಬ್ಯಾಡರಹಳ್ಳಿ ಎಂಬ ಮನೆಯೊಂದರಲ್ಲಿ ಅವರನ್ನು ಇರಿಸಿ ಕ್ರಿಕೆಟ್ ಸ್ಟಂಪ್ ಮತ್ತು ಹಾಕಿ ಸ್ಟಿಕ್‌ನಿಂದ ಹಲ್ಲೆ ಮಾಡಿ, ಬಳಿಯಿದ್ದ ಚಿನ್ನಾಭರಣ ಮತ್ತು ಹಣವನ್ನು ಕಸಿದುಕೊಂಡರು. ನಂತರ ತುಮಕೂರು ಜಿಲ್ಲೆಯ ಮಧುಗಿರಿ ಬಳಿ ಬಿಟ್ಟು ತಪ್ಪಿಸಿಕೊಂಡಿದ್ದರು.

ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದ ಸತ್ಯ : ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆಯಲ್ಲಿ ಪ್ರಮುಖ ಆರೋಪಿ ಆಶೀರ್ವಾದ್ ಎಂಬಾತನ ಪ್ಲಾನ್ ಎಂದು ಪತ್ತೆಯಾಗಿದೆ. ನಿರ್ದೇಶಕ ಅನೀಶ್ ಅವರ ಜೊತೆಗಿನ 5 ಲಕ್ಷ ರೂಪಾಯಿ ಹಣದ ಜಗಳವೇ ಈ ಕಿಡ್ನಾಪ್‌ಗೆ ಕಾರಣ ಎಂದು ತಿಳಿದುಬಂದಿದೆ. ನಟಿ ಐಶ್ವರ್ಯಾ ಮೂಲಕವೇ ನಿರ್ದೇಶಕನನ್ನು ಕರೆಸಿ ಪ್ಲಾನ್ ರೂಪಿಸಲಾಗಿತ್ತು.

ಬಂಧಿತರು : ಒಟ್ಟು 11 ಜನರ ಗ್ಯಾಂಗ್ ಅನ್ನು ಬಂಧಿಸಲಾಗಿದ್ದು, ಇದರಲ್ಲಿ ನಟಿ ಐಶ್ವರ್ಯಾ ಸಹ ಸೇರಿದ್ದಾರೆ. ತನಿಖೆ ಮುಂದುವರೆದಿದ್ದು, ಹೆಚ್ಚಿನ ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ನಿರ್ದೇಶಕ ಅನೀಶ್ ಅವರು ಮೊದಲು ‘ಬರವಸೆಯ ಜೀವನ’ ಎಂಬ ಶಾರ್ಟ್ ಫಿಲ್ಮ್ ಮಾಡಿದ್ದರು. ಇದೀಗ ‘ಜೀವನದ ಭಾಷೆ’ ಎಂಬ ಸಿನಿಮಾ ಶುರು ಮಾಡಿದ್ದರು. ಈ ಘಟನೆಯಿಂದ ಚಿತ್ರರಂಗದಲ್ಲಿ ಆತಂಕ ಮತ್ತು ಚರ್ಚೆಯಾಗಿದೆ.

Exit mobile version