ಬೆಂಗಳೂರು, ಮೇ 5: ಬಿಜೆಪಿಯ ನಾಯಕ ಛಲವಾದಿ ನಾರಾಯಣಸ್ವಾಮಿ ಸದಾ ಹಿಟ್ ಅಂಡ್ ರನ್ ಅರೋಪ ಮಾಡುತ್ತಾರೆ. ಅವರ ಹೇಳಿಕೆಗಳಲ್ಲಿ ಹುರುಳುರಿಲ್ಲ. ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯ ಇಲ್ಲ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ ತಿಳಿಸಿದ್ದಾರೆ.
ವಿಧಾನಸೌಧ ಆವರಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಛಲವಾದಿ ನಾರಾಯಣಸ್ವಾಮಿ ತಮ್ಮದೇ ಧಾಟಿಯಲ್ಲಿ ಚಳಿ ಬಿಡಿಸಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾಡಿರುವ ಆರೋಪ ಆದಾರರಹಿತವಾಗಿದೆ. ಮಾರ್ಕ್ಸ್ ಕಾರ್ಡ್ ಮುದ್ರಣ ಟೆಂಡರ್ ಅನ್ನು ರದ್ದು ಮಾಡಲಾಗಿದೆ. ಈ ಟೆಂಡರ್ ಬಗ್ಗೆ ಆಕ್ಷೇಪ ಬಂದ ಕೂಡಲೇ ರದ್ದು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಛಲವಾದಿ ಅವರ ಹೇಳಿಕೆಗಳ ಬಗ್ಗೆ ಹೆಚ್ಚು ಸ್ಪಷ್ಟನೆ ಕೊಡುವ ಅಗತ್ಯವೇ ಇಲ್ಲ. ಅವರ ಬಗ್ಗೆ ಅವರ ಪಕ್ಷದವರೇ ಹೆಚ್ಚು ಗಂಭೀರವಾಗಿ ಪರಿಗಣಿಸುವುದಿಲ್ಲ. ನಾವೇಕೆ ತಲೆಕಡಿಸಿಕೊಳ್ಳಬೇಕು ಎಂದು ತಮ್ಮ ಎಂದಿನ ಸಾಫ್ಟ್ ಶೈಲಿಯಲ್ಲಿಯೇ ಕುಟುಕಿದರು.