ಬೆಂಗಳೂರು: ರಾಜ್ಯದ ಪ್ರಮುಖ ಹಾಲು ಉತ್ಪನ್ನ ಬ್ರ್ಯಾಂಡ್ ‘ನಂದಿನಿ’ ಹೆಸರು ಬಳಸಿ ನಕಲಿ ತುಪ್ಪ ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿದ್ದ ದೊಡ್ಡ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ದಂಧೆಯ ಮುಖ್ಯ ಆರೋಪಿಗಳಾದ ಗಂಡ-ಹೆಂಡತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಕುಮಾರ್ ಮತ್ತು ರಮ್ಯಾ ಎಂಬ ಈ ದಂಪತಿಗಳೇ ಈ ಕಲಬೆರಕೆ ದಂಧೆಯ ಕಿಂಗ್ಪಿನ್ಗಳು ಎಂದು ತನಿಖೆಯಲ್ಲಿ ಬಯಲಾಗಿದೆ.
ಬಂಧಿತ ಆರೋಪಿಗಳು ತಮಿಳುನಾಡು ಮೂಲದ ಶಿವಕುಮಾರ್ ಮತ್ತು ಅವರ ಪತ್ನಿ ರಮ್ಯಾ. ಈ ದಂಪತಿಗಳು ತಮಿಳುನಾಡಿನಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ದೊಡ್ಡ ಪ್ರಮಾಣದ ನಕಲಿ ತುಪ್ಪ ತಯಾರಿಕಾ ಘಟಕವನ್ನು ನಡೆಸುತ್ತಿದ್ದರು. ನಂದಿನಿ ತುಪ್ಪದ ಒರಿಜಿನಲ್ ಪ್ಯಾಕೇಜಿಂಗ್, ಲೇಬಲ್, ಹಾಲೋಗ್ರಾಂ ಸ್ಟಿಕ್ಕರ್ ಸಹಿತ ಪೂರ್ತಿ ನಕಲಿ ಉತ್ಪನ್ನಗಳನ್ನು ತಯಾರಿಸುತ್ತಿದ್ದರು.
ಸಿಸಿಬಿ ದಾಳಿಯ ವೇಳೆ ಘಟಕದಿಂದ ಸುಮಾರು 1500 ಕೆ.ಜಿ.ಗೂ ಅಧಿಕ ನಕಲಿ ನಂದಿನಿ ತುಪ್ಪ, ಸಾವಿರಾರು ಖಾಲಿ ಟಿನ್ಗಳು, ನಕಲಿ ಲೇಬಲ್ಗಳು, ಹಾಲೋಗ್ರಾಂ ಸ್ಟಿಕ್ಕರ್ಗಳು ಮತ್ತು ಅತ್ಯಾಧುನಿಕ ಪ್ಯಾಕೇಜಿಂಗ್ ಯಂತ್ರಗಳನ್ನು ಜಪ್ತಿ ಮಾಡಲಾಗಿದೆ.
ಈ ನಕಲಿ ತುಪ್ಪವನ್ನು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಜಾಲದಲ್ಲಿ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದ ಮಹೇಂದ್ರ ಎಂಬುವವರು ಅವರ ಮಗ ದೀಪಕ್ ಮತ್ತು ಮುನಿರಾಜು ಎಂಬುವವರನ್ನು ಈಗಾಗಲೇ ಸಿಸಿಬಿ ಬಂಧಿಸಿ ಜೈಲಿಗೆ ಕಳುಹಿಸಿದ್ದು, ಇವರು ನಂದಿನಿ ಬೂತ್ಗಳಿಗೆ ನಕಲಿ ತುಪ್ಪವನ್ನು ಸರಬರಾಜು ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತ ದಂಪತಿಗಳಿಂದ ಮಹತ್ವದ ಸುಳಿವುಗಳು ಲಭಿಸಿರುವ ಹಿನ್ನೆಲೆಯಲ್ಲಿ, ಈ ಜಾಲದಲ್ಲಿ ಇನ್ನೂ ಯಾರು ಯಾರಿದ್ದಾರೆ ಎಂಬುದರ ಬಗ್ಗೆ ಸಿಸಿಬಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ನಂದಿನಿ ಹೆಸರಲ್ಲಿ ನಕಲಿ ತುಪ್ಪ ಮಾರಾಟ: ನಾಲ್ವರು ಅರೆಸ್ಟ್
ಬೆಂಗಳೂರು: ಕರ್ನಾಟಕದ ಹೆಮ್ಮೆಯ ನಂದಿನಿ ಬ್ರಾಂಡ್ನ ಹೆಸರನ್ನು ಬಳಸಿಕೊಂಡು ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವನ್ನು ಬೆಂಗಳೂರು ನಗರದ ಸಿಸಿಬಿ (ಸೆಂಟ್ರಲ್ ಕ್ರೈಮ್ ಬ್ರಾಂಚ್) ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ. ಈ ಪ್ರಕರಣದಲ್ಲಿ ಕೆಎಂಎಫ್ (ಕರ್ನಾಟಕ ಮಿಲ್ಕ್ ಫೆಡರೇಶನ್) ನ ಡಿಸ್ಟ್ರಿಬ್ಯೂಟರ್ ಮಹೇಂದ್ರ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ..
ಆರೋಪಿಗಳು ಮೊದಲು ಕೆಎಂಎಫ್ನಿಂದ ಅಧಿಕೃತ ನಂದಿನಿ ತುಪ್ಪವನ್ನು ಖರೀದಿಸುತ್ತಿದ್ದರು. ಈ ಖರೀದಿಸಿದ ತುಪ್ಪವನ್ನು ಅವರು ತಮಿಳುನಾಡಿಗೆ ಸಾಗಿಸುತ್ತಿದ್ದರು. ಅಲ್ಲಿನ ಒಂದು ಯೂನಿಟ್ನಲ್ಲಿ ನಕಲಿ ತುಪ್ಪವನ್ನು ತಯಾರಿಸಿ, ಅದನ್ನು ಅಸಲಿ ನಂದಿನಿ ತುಪ್ಪದೊಂದಿಗೆ ಬೆರೆಸುತ್ತಿದ್ದರು. ನಂತರ, ನಂದಿನಿ ಬ್ರಾಂಡ್ನ ಲೇಬಲ್ಗಳನ್ನು ಅಂಟಿಸಿ, ಅದನ್ನು ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದರು. ಈ ರೀತಿ ಅಸಲಿ ಬ್ರಾಂಡ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ದೊಡ್ಡ ಪ್ರಮಾಣದಲ್ಲಿ ಲಾಭ ಗಳಿಸುತ್ತಿದ್ದರು. ನಕಲಿ ತುಪ್ಪದಲ್ಲಿ ಬಳಸುತ್ತಿದ್ದ ವಸ್ತುಗಳು ಯಾವುದು ಎಂಬುದು ಇನ್ನು ಪರೀಕ್ಷೆಯಲ್ಲಿ ತಿಳಿಯಬೇಕಿದೆ, ಆದರೆ ಸಾಮಾನ್ಯವಾಗಿ ಇಂತಹ ನಕಲಿ ಉತ್ಪನ್ನಗಳಲ್ಲಿ ಕಡಿಮೆ ಗುಣಮಟ್ಟದ ತೈಲಗಳು ಅಥವಾ ಕಲಬೆರಕೆ ವಸ್ತುಗಳನ್ನು ಬಳಸುವುದು ಸಾಮಾನ್ಯ.
ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ವಿಶೇಷ ವಿಚಾರಣಾ ದಳ ಹಾಗೂ ಕೆಎಂಎಫ್ನ ಜಾಗೃತ ದಳವು ಜಂಟಿ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ತಮಿಳುನಾಡಿನ ನಕಲಿ ತುಪ್ಪ ತಯಾರಿಕಾ ಯೂನಿಟ್ ಮೇಲೆ ದಾಳಿ ನಡೆಸಲಾಯಿತು. ದಾಳಿಯ ಸಮಯದಲ್ಲಿ ಡಿಸ್ಟ್ರಿಬ್ಯೂಟರ್ ಮಹೇಂದ್ರ ಸೇರಿದಂತೆ ನಾಲ್ವರು ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಲಾಯಿತು. ಆರೋಪಿಗಳು ತಮಿಳುನಾಡಿನಲ್ಲಿ ಈ ಯೂನಿಟ್ ಅನ್ನು ನಡೆಸುತ್ತಿದ್ದರು. ಅಲ್ಲಿಂದಲೇ ನಕಲಿ ಉತ್ಪನ್ನಗಳನ್ನು ಕರ್ನಾಟಕಕ್ಕೆ ಮತ್ತು ಇತರ ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದರು.
ದಾಳಿಯ ಸಮಯದಲ್ಲಿ ಪೊಲೀಸರು ನಾಲ್ಕು ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಈ ವಾಹನಗಳನ್ನು ನಕಲಿ ತುಪ್ಪ ಸಾಗಣೆಗೆ ಬಳಸುತ್ತಿದ್ದರು ಎಂದು ಹೇಳಲಾಗಿದೆ. ಅಲ್ಲದೆ, ನಕಲಿ ತುಪ್ಪ ತಯಾರಿಕೆಗೆ ಬಳಸುತ್ತಿದ್ದ ಒಂದು ಮೆಷಿನ್ ಯೂನಿಟ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಯೂನಿಟ್ನಲ್ಲಿ ತುಪ್ಪ ಬೆರೆಸುವ, ಲೇಬಲ್ ಅಂಟಿಸುವ ಮತ್ತು ಪ್ಯಾಕಿಂಗ್ ಮಾಡುವ ಯಂತ್ರಗಳಿದ್ದವು. ಇದಲ್ಲದೆ, ಸುಮಾರು 1.26 ಕೋಟಿ ರೂಪಾಯಿ ಮೌಲ್ಯದ ನಕಲಿ ತುಪ್ಪವನ್ನು ವಶಪಡಿಸಿಕೊಳ್ಳಲಾಗಿದೆ. ಈ ತುಪ್ಪವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿರುವ ಕಲಬೆರಕೆಯ ಮಟ್ಟವನ್ನು ಪರಿಶೀಲಿಸಲಾಗುತ್ತಿದೆ.





