ಬೆಂಗಳೂರು: ರಾಜಧಾನಿಯ ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್. ಪುರಂ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ಅಧಿಕೃತವಾಗಿ ವಶಕ್ಕೆ ಪಡೆದಿದ್ದಾರೆ. ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಶಾಸಕರು, ಗುಜರಾತ್ನ ಅಹಮದಾಬಾದ್ನಿಂದ ಬೆಂಗಳೂರಿಗೆ ಹಿಂದಿರುಗುತ್ತಿದ್ದಂತೆಯೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ನ್ಯಾಯಾಲಯದಲ್ಲಿ ಹಿನ್ನಡೆ
ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಎ5 ಆರೋಪಿಯಾಗಿರುವ ಭೈರತಿ ಬಸವರಾಜ್ ಅವರಿಗೆ ಕಾನೂನಿನ ಅಡಿ ಯಾವುದೇ ರಕ್ಷಣೆ ಸಿಕ್ಕಿರಲಿಲ್ಲ. ಮೊದಲು ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿತ್ತು. ಅದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಸುಪ್ರೀಂ ಕೋರ್ಟ್ ಕೂಡ ಅವರ ಅರ್ಜಿಯನ್ನು ವಜಾಗೊಳಿಸಿದ್ದಲ್ಲದೆ, ತನಿಖಾ ಸಂಸ್ಥೆಯ ಮುಂದೆ ಶರಣಾಗುವಂತೆ ಖಡಕ್ ಸೂಚನೆ ನೀಡಿತ್ತು. ಇದೇ ಕಾರಣಕ್ಕೆ ಶಾಸಕರು ಶರಣಾಗಲು ಬೆಂಗಳೂರಿಗೆ ಆಗಮಿಸಿದ್ದರು ಎನ್ನಲಾಗಿದೆ.
ಏರ್ಪೋರ್ಟ್ನಲ್ಲಿ ಹೈಡ್ರಾಮಾ
ಶಾಸಕರು ಇಂಡಿಗೋ ವಿಮಾನದ ಮೂಲಕ ಅಹಮದಾಬಾದ್ನಿಂದ ಬೆಂಗಳೂರಿಗೆ ಬರುತ್ತಿರುವ ಖಚಿತ ಮಾಹಿತಿ ಆಧರಿಸಿ ಸಿಐಡಿ ತಂಡ ಕಾರ್ಯಾಚರಣೆಗೆ ಇಳಿಯಿತು. ದೇವನಹಳ್ಳಿ ಎಸಿಪಿ ಹರ್ಷ ಅವರ ನೇತೃತ್ವದ ವಿಶೇಷ ತಂಡವು ವಿಮಾನ ನಿಲ್ದಾಣದ ಒಳಭಾಗದಲ್ಲಿ ಇಮಿಗ್ರೇಷನ್ ಕೌಂಟರ್ ಬಳಿಯೇ ಶಾಸಕರನ್ನು ವಶಕ್ಕೆ ಪಡೆಯಿತು. ಏರ್ಪೋರ್ಟ್ನ ಭದ್ರತಾ ವಲಯದೊಳಗೆ ಸಿಐಡಿಗೆ ನೇರ ಪ್ರವೇಶವಿಲ್ಲದ ಕಾರಣ, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಈ ಮಹತ್ವದ ಕಾರ್ಯಾಚರಣೆ ನಡೆಸಲಾಯಿತು.
ಪ್ರಕರಣದ ಹಿನ್ನೆಲೆ
ಬೆಂಗಳೂರಿನ ಭೂಗತ ಲೋಕದಲ್ಲಿ ಚಿರಪರಿಚಿತನಾಗಿದ್ದ ಬಿಕ್ಲು ಶಿವ ಎಂಬ ರೌಡಿಶೀಟರ್ ಹತ್ಯೆ ನಡೆದಾಗ, ಈ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು. ಈ ಹತ್ಯೆಯ ಸಂಚಿನಲ್ಲಿ ಮತ್ತು ಪ್ರಮುಖ ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಆರೋಪ ಭೈರತಿ ಬಸವರಾಜ್ ಅವರ ಮೇಲೆ ಕೇಳಿಬಂದಿತ್ತು. ತನಿಖೆಯ ವೇಳೆ ಲಭ್ಯವಾದ ಡಿಜಿಟಲ್ ಪುರಾವೆಗಳು ಮತ್ತು ಕಾಲ್ ರೆಕಾರ್ಡ್ಗಳ ಆಧಾರದ ಮೇಲೆ ಸಿಐಡಿ ಪೊಲೀಸರು ಅವರನ್ನು ಈ ಪ್ರಕರಣದಲ್ಲಿ 5ನೇ ಆರೋಪಿಯನ್ನಾಗಿ (A5) ಹೆಸರಿಸಿದ್ದರು.
ಸಿಐಡಿ ನೋಟಿಸ್ ನೀಡಿದ ಬೆನ್ನಲ್ಲೇ ಬಂಧನದ ಭೀತಿಯಿಂದ ಶಾಸಕರು ತಲೆಮರೆಸಿಕೊಂಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರಿ ಟೀಕೆಗೆ ಕಾರಣವಾಗಿತ್ತು.
ವಶಕ್ಕೆ ಪಡೆದ ಭೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ಸೀದಾ ಸಿಐಡಿ ಕೇಂದ್ರ ಕಚೇರಿಗೆ ಕರೆದೊಯ್ದಿದ್ದಾರೆ. ಪ್ರಾಥಮಿಕ ವಿಚಾರಣೆಯ ನಂತರ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ತಮ್ಮ ಕಸ್ಟಡಿಗೆ ನೀಡುವಂತೆ ಕೋರುವ ಸಾಧ್ಯತೆಯಿದೆ.





