ಬೆಂಗಳೂರು, ಸೆ.14: ಅವಾಚ್ಯವಾಗಿ ನಿಂದಿಸಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ಯುವಕನೊಬ್ಬನ ಮೇಲೆ ನಡೆದ ಮಾರಣಾಂತಿಕ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮೂರು ದಿನಗಳ ಬಳಿಕ ಸಾವನ್ನಪ್ಪಿದ್ದಾನೆ. ಈ ಘಟನೆಯ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮೃತ ಯುವಕನನ್ನು ಭೀಮಕುಮಾರ್ (25) ಎಂದು ಗುರುತಿಸಲಾಗಿದೆ.
ಬಿಹಾರದ ಬೆಗುಸರಾಯ್ ಮೂಲದ ಭೀಮಕುಮಾರ್, ಬೆಂಗಳೂರಿನ ಅರೆಕೆರೆ ಭಾಗದಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ಸ್ನೇಹಿತರೊಂದಿಗೆ ಬಂದಿದ್ದ. ಸೆಪ್ಟೆಂಬರ್ 07 ರಂದು, ಭೀಮಕುಮಾರ್ ತನ್ನ ಸ್ನೇಹಿತರಾದ ಧೀರಜ್ ಮತ್ತು ಅರವಿಂದ್ ಕುಮಾರ್ರೊಂದಿಗೆ ಯೋಗಕ್ಷೇಮ ವಿಚಾರಿಸಲು ಭೇಟಿಯಾಗಿದ್ದ. ಭೇಟಿಯ ಬಳಿಕ, ಅವರನ್ನು ಬಿಡಲು ಭೀಮಕುಮಾರ್ ಮತ್ತು ಇನ್ನೊಬ್ಬ ಸ್ನೇಹಿತ ಅಂಜನ್ ಜೊತೆಗೆ ಹೊರಟಿದ್ದರು. ರ್ಯಾಪಿಡೋ ಬುಕ್ ಮಾಡಿ, ಅರೆಕೆರೆಯ ಪಾನಿಪುರಿ ಅಂಗಡಿಯ ಬಳಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ.
ಪಾನಿಪುರಿ ತಿನ್ನುತ್ತಿದ್ದ ಸ್ಥಳೀಯ ನಿವಾಸಿಯಾದ ಸಲ್ಮಾನ್ ಎಂಬಾತ, ಭೀಮಕುಮಾರ್ ಮತ್ತು ಸ್ನೇಹಿತರನ್ನು ಅವಾಚ್ಯವಾಗಿ ನಿಂದಿಸಿದ್ದಾನೆ. “ಸುವ** ಮಾ** ಚ್ಯೂ**, ಇಲ್ಲಿಂದ ಹೋಗಿ” ಎಂದು ಕೆಟ್ಟದಾಗಿ ಬೈದಿದ್ದ ಸಲ್ಮಾನ್ನ ವರ್ತನೆಯನ್ನು ಭೀಮಕುಮಾರ್ ಪ್ರಶ್ನಿಸಿದ್ದಾನೆ. ಇದರಿಂದ ಕೆರಳಿದ ಸಲ್ಮಾನ್, ಭೀಮಕುಮಾರ್ನೊಂದಿಗೆ ಗಲಾಟೆಗೆ ಇಳಿದಿದ್ದಾನೆ. ಆರಂಭದಲ್ಲಿ ಜಗಳ ಮಾತಿನಲ್ಲಿಯೇ ಮುಗಿದಿತ್ತು. ಆದರೆ, ಭೀಮಕುಮಾರ್ ಮತ್ತು ಸ್ನೇಹಿತರು ವಾಪಸ್ ಹೊರಟಾಗ, ಸಲ್ಮಾನ್ ಅವರನ್ನು ಹಿಂಬಾಲಿಸಿದ್ದಾನೆ.
ಹಿಂದಿನಿಂದ ಬಂದ ಸಲ್ಮಾನ್, ಮೊದಲು ಧೀರಜ್ನ ಮುಖಕ್ಕೆ ಮುಷ್ಠಿಯಿಂದ ಹಲ್ಲೆ ಮಾಡಿದ್ದಾನೆ. ನಂತರ ಭೀಮಕುಮಾರ್ನ ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾನೆ. ಭೀಮಕುಮಾರ್ ಕುತ್ತಿಗೆಗೆ ಗಂಭೀರ ಪೆಟ್ಟು ಬಿದ್ದು, ರಸ್ತೆಯ ಮೇಲೆಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಪ್ರಜ್ಞೆಯನ್ನು ಮರಳಿ ಪಡೆದ ಬಳಿಕ, ಸ್ನೇಹಿತರು ಭೀಮಕುಮಾರ್ನನ್ನು ಮನೆಗೆ ಕರೆದೊಯ್ದು ಮಲಗಿಸಿದ್ದರು.
ಆದರೆ, ಮೂರು ದಿನಗಳ ಕಾಲ ಭೀಮಕುಮಾರ್ ಅರೆಪ್ರಜ್ಞಾವಸ್ಥೆಯಲ್ಲಿದ್ದ. ಸೆಪ್ಟೆಂಬರ್ 10 ರಂದು ಸ್ನೇಹಿತರು ಎಬ್ಬಿಸಲು ಪ್ರಯತ್ನಿಸಿದಾಗ, ಭೀಮಕುಮಾರ್ ಈಗಾಗಲೇ ಮೃತಪಟ್ಟಿದ್ದನು. ಈ ಘಟನೆಯ ಬಗ್ಗೆ ಸ್ನೇಹಿತ ಅಂಜನ್, ಮೈಕೋ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪುಟ್ಟೇನಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ, ಆರೋಪಿ ಸಲ್ಮಾನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.