ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿಡದಿ ಟೌನ್ಶಿಪ್ ಯೋಜನೆ ಮತ್ತೊಮ್ಮೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರ ಇದೀಗ ಪತ್ರ ಸಮರದ ರೂಪ ಪಡೆದುಕೊಂಡಿದೆ. ಸರ್ಕಾರ ಯೋಜನೆಗೆ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಪರ-ವಿರೋಧದ ಚರ್ಚೆಗಳು ತೀವ್ರಗೊಂಡಿವೆ.
ಬಿಡದಿ ಸಮೀಪದ ಸಾವಿರಾರು ಎಕರೆ ಪ್ರದೇಶದಲ್ಲಿ ಟೌನ್ಶಿಪ್ ನಿರ್ಮಾಣಕ್ಕೆ ಸಂಬಂಧಿಸಿದ ಯೋಜನೆಯನ್ನು 2006ರಲ್ಲಿ ಆಗಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮುಂದಿಟ್ಟಿದ್ದರು. ಆದರೆ ರೈತರ ವಿರೋಧ ಹಾಗೂ ಇತರ ಕಾರಣಗಳಿಂದಾಗಿ 2007ರಲ್ಲಿಯೇ ಯೋಜನೆಯನ್ನು ಕೈಬಿಡಲಾಗಿತ್ತು. ಇದೀಗ ರಾಜ್ಯ ಸರ್ಕಾರ ಮತ್ತೆ ಯೋಜನೆಗೆ ಜೀವ ತುಂಬಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಯೋಜನೆ ಕುರಿತಂತೆ ಸಮಗ್ರ ಚರ್ಚೆ ನಡೆಸಲು ವಿಧಾನಸೌಧಕ್ಕೆ ಬರುವಂತೆ ಡಿ.ಕೆ. ಶಿವಕುಮಾರ್ ಅವರು ಹೆಚ್.ಡಿ. ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ. ಯೋಜನೆ ಕುರಿತು ಸರ್ಕಾರದ ನಿಲುವು ಹಾಗೂ ಅಭಿವೃದ್ಧಿಯ ಅಗತ್ಯತೆಯನ್ನು ವಿವರಿಸಲು ಈ ಆಹ್ವಾನ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಹೆಚ್.ಡಿ. ಕುಮಾರಸ್ವಾಮಿ ಕೂಡ ಪತ್ರ ಬರೆದು, ವಿಧಾನಸೌಧದಲ್ಲಿ ಸಭೆ ನಡೆಸುವುದಕ್ಕಿಂತ ರೈತರು ಮತ್ತು ಸ್ಥಳೀಯರ ಅಭಿಪ್ರಾಯ ಕೇಳಲು ಬಿಡದಿಯಲ್ಲಿಯೇ ಸಭೆ ಆಯೋಜಿಸುವಂತೆ ಸಲಹೆ ನೀಡಿದ್ದಾರೆ. ಯೋಜನೆಯಿಂದ ಪರಿಣಾಮ ಬೀಳಲಿರುವ ರೈತರ ನಡುವೆ ಚರ್ಚೆ ನಡೆಸಿದರೆ ವಾಸ್ತವ ಸ್ಥಿತಿ ಸ್ಪಷ್ಟವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದರಿಂದ ಬಿಡದಿ ಟೌನ್ಶಿಪ್ ಯೋಜನೆ ಕೇವಲ ಅಭಿವೃದ್ಧಿ ಯೋಜನೆಯಷ್ಟೇ ಅಲ್ಲದೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವಿನ ರಾಜಕೀಯ ಪ್ರತಿಷ್ಠೆಯ ವಿಷಯವಾಗಿಯೂ ಪರಿಣಮಿಸಿದೆ. ರೈತರ ಹಿತಾಸಕ್ತಿ, ಭೂಸ್ವಾಧೀನ ಪ್ರಕ್ರಿಯೆ ಹಾಗೂ ಅಭಿವೃದ್ಧಿಯ ಅಗತ್ಯತೆಗಳ ನಡುವೆ ನಡೆಯುತ್ತಿರುವ ಈ ಚರ್ಚೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾವೇರುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರದ ಮುಂದಿನ ಕ್ರಮ ಹಾಗೂ ರೈತರ ಪ್ರತಿಕ್ರಿಯೆ ಇದೀಗ ಎಲ್ಲರ ಗಮನ ಸೆಳೆದಿದ್ದು, ಬಿಡದಿ ಟೌನ್ಶಿಪ್ ವಿವಾದ ರಾಜ್ಯ ರಾಜಕೀಯದ ಪ್ರಮುಖ ಲಕ್ಷಣಗಳು ಗೋಚರಿಸುತ್ತಿವೆ. ಹಾಗೂ ಈ ಬಿಡದಿ ಟೌನ್ಶಿಪ್ನಿಂದ ಉಪಯೋಗ ರಿಯಲ್ ಎಸ್ಟೇಟ್ ದನಿಗಳಿಗಾಗಿಯೋ ಅಥವಾ ರೈತರ ಪರವಾಗಿಯೋ ಒಂದೂ ತಿಳಿದುಬರುತ್ತಿಲ್ಲ. ಈ ಎಲ್ಲ ರಾಜಕೀಯ ಚರ್ಚೆಗಳ ನಡುವೆ ಲಾಭಪಡೆಯುತ್ತಿರುವುದು ಯಾರು ಎಂಬುದು ಕುತೂಹಲದ ವಿಷಯವಾಗಿದೆ.





