ಬೆಂಗಳೂರು, ಡಿಸೆಂಬರ್ 30: ಮದುವೆ ಎಂಬ ಪವಿತ್ರ ಬಂಧನವನ್ನು ನಂಬಿ ಜೀವನ ಆರಂಭಿಸಿದ ಯುವತಿ, ಕೇವಲ ಮೂರು ತಿಂಗಳಲ್ಲೇ ಭೀಕರ ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೆ ಒಳಗಾದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪತಿಯ ವಿಚಿತ್ರ, ಅಶ್ಲೀಲ ಹಾಗೂ ಅಸಹಜ ವರ್ತನೆಯಿಂದ ಬೇಸತ್ತ ಪತ್ನಿ, ಕೊನೆಗೂ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಹಿಳೆ ಮತ್ತು ಆರೋಪಿತ ಪತಿ ಮಂಜುನಾಥ್ ಇಬ್ಬರೂ ಒಂದೇ ಖಾಸಗಿ ಕಂಪನಿಯಲ್ಲಿ ಸಹೋದ್ಯೋಗಿಗಳಾಗಿದ್ದರು. ಇಬ್ಬರೂ HR ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಪರಿಚಯ ಪ್ರೀತಿಗೆ ತಿರುಗಿತ್ತು. ಯುವತಿ ಕುಟುಂಬದ ಒಪ್ಪಿಗೆ ಪಡೆದು, 2025ರ ಸೆಪ್ಟೆಂಬರ್ 3ರಂದು ಚಿಂತಾಮಣಿಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಇವರ ವಿವಾಹ ನೆರವೇರಿತ್ತು.
ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಮಂಜುನಾಥನ ನಿಜ ಸ್ವಭಾವ ಹೊರಬಂದಿದೆ ಎಂದು ಪತ್ನಿ ಆರೋಪಿಸಿದ್ದಾಳೆ. ಆರಂಭದಲ್ಲಿ ಸಾಮಾನ್ಯವಾಗಿದ್ದ ಗಂಡನ ವರ್ತನೆ, ದಿನದಿಂದ ದಿನಕ್ಕೆ ವಿಚಿತ್ರ, ಅಶ್ಲೀಲ ಮತ್ತು ಅಸ್ವಸ್ಥ ರೀತಿಗೆ ತಿರುಗಿತ್ತು ಎನ್ನಲಾಗಿದೆ.
ಪತಿ ಮೊಬೈಲ್ ಫೋನ್ನಲ್ಲಿ ಅಶ್ಲೀಲ ವೀಡಿಯೋಗಳನ್ನು ವೀಕ್ಷಿಸಿ, ಅದೇ ರೀತಿಯ ಲೈಂಗಿಕ ಕ್ರಿಯೆಗಳನ್ನು ಮಾಡಲು ಪತ್ನಿಗೆ ಒತ್ತಾಯಿಸುತ್ತಿದ್ದನು. “ಡಿಸೈನ್ ಡಿಸೈನ್ ಆಗಿ ಸೆಕ್ಸ್ ಬೇಕು” ಎಂದು ಕಿರುಕುಳ ನೀಡುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪತ್ನಿ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, ಅವಾಚ್ಯ ಶಬ್ದಗಳಿಂದ ನಿಂದನೆ, ಹಲ್ಲೆ ಯತ್ನ ಹಾಗೂ ಮಾನಸಿಕ ಹಿಂಸೆ ನಡೆಸುತ್ತಿದ್ದನು ಎಂದು ಆರೋಪಿಸಲಾಗಿದೆ.
ಮನೆಯೊಳಗೆ ಅತ್ತೆ–ಮಾವ ಇದ್ದರೂ ಮಂಜುನಾಥ ಅಂಡರ್ವೇರ್ನಲ್ಲೇ ಅಥವಾ ಸಂಪೂರ್ಣ ಬೆತ್ತಲೆಯಾಗಿ ಓಡಾಡುತ್ತಿದ್ದನೆಂದು ಸಂತ್ರಸ್ತೆ ಹೇಳಿದ್ದಾಳೆ. ಮನೆಯ ಹೊರಗೆ ಇದೇ ರೀತಿ ವರ್ತಿಸಿ, ಅಕ್ಕಪಕ್ಕದವರಿಗೆ ತೀವ್ರ ಮುಜುಗರ ಉಂಟುಮಾಡುತ್ತಿದ್ದನು ಎನ್ನಲಾಗಿದೆ.
ಮಂಜುನಾಥನಿಗೆ ಉದ್ಯೋಗ ಇರಲಿಲ್ಲ. ಆಕೆಯೇ ಶಿಫಾರಸು ನೀಡಿ HR ಮ್ಯಾನೇಜರ್ ಹುದ್ದೆಗೆ ನೇಮಕ ಮಾಡಿಸಿದ್ದಳು. ಲಕ್ಷಾಂತರ ರೂಪಾಯಿ ಸಂಬಳ ದೊರಕುವಂತೆ ಮಾಡಿದ್ದಷ್ಟೇ ಅಲ್ಲದೆ, ಮದುವೆಯ ನಂತರ ಮೂರು ತಿಂಗಳು ಮನೆಯಲ್ಲೇ ಇಟ್ಟುಕೊಂಡು, ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿದ್ದಾಳೆ. ಆದರೆ ಇದೇ ಪತಿ, ಆಕೆಯ ಮೇಲೆಯೇ ದೋಖಾ ಎಸಗಿದ್ದಾನೆ ಎಂಬುದು ಸಂತ್ರಸ್ತೆಯ ಆರೋಪಿಸಿದ್ದಾಲೆ.
ಇದಲ್ಲದೆ, ಪತ್ನಿಯ ಫೋಟೋಗಳನ್ನು ಆಕೆಯ ಅನುಮತಿ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಅವಮಾನ ಮಾಡಿದ್ದಾನೆ ಎನ್ನಲಾಗಿದೆ. ಮನೆ ಬಿಟ್ಟು ಹೋಗಿದ್ದ ಮಂಜುನಾಥ, ನಂತರ ಮತ್ತೆ ಬಂದು ಗಲಾಟೆ ಮಾಡಿ, ಪತ್ನಿ ಮತ್ತು ಆಕೆಯ ತಾಯಿಗೆ ಅಶ್ಲೀಲವಾಗಿ ಬೈದು, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಎಲ್ಲ ಕೃತ್ಯಗಳಿಗೆ ಅತ್ತೆ-ಮಾವನೂ ಬೆಂಬಲ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದು, ಇದರಿಂದ ಆಕೆ ಸಂಪೂರ್ಣವಾಗಿ ಮಾನಸಿಕವಾಗಿ ಕುಸಿದಿದ್ದಾಳೆ. ಸದ್ಯ ಈ ಕುರಿತು ಕೇಂದ್ರ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆರೋಪಗಳ ಬಗ್ಗೆ ತನಿಖೆ ಕೈಗೊಂಡಿದ್ದಾರೆ.





