ಬೆಳಗಾವಿ: ಅಂತರರಾಜ್ಯ ಮಟ್ಟದಲ್ಲಿ ಸಂಚಲನ ಮೂಡಿಸಿರುವ ಚೋರ್ಲಾ ಘಾಟ್ನ ₹400 ಕೋಟಿ ದರೋಡೆ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದ ದೂರುದಾರ ಸಂದೀಪ್ ಪಾಟೀಲ್ ಈಗ ಮಹಾರಾಷ್ಟ್ರ ಪೊಲೀಸರ ವಿಶೇಷ ತನಿಖಾ ತಂಡದ (SIT) ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದು, ಬೆಳಗಾವಿಯಲ್ಲಿ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
SIT ತನಿಖೆ ಪಾರದರ್ಶಕವಾಗಿಲ್ಲ ಎಂದು ಆರೋಪ
ಮಹಾರಾಷ್ಟ್ರದ ನಾಸಿಕ್ ಪೊಲೀಸರು ರಚಿಸಿರುವ ಎಸ್ಐಟಿ ತಂಡವು ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿರುವ ಸಂದೀಪ್ ಪಾಟೀಲ್, ಈ ಸಂಬಂಧ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕೆ. ರಾಮರಾಜನ್ ಅವರಿಗೆ ಪತ್ರ ಬರೆದಿದ್ದಾರೆ. ತನಿಖೆಯಲ್ಲಿ ಹಲವು ಲೋಪದೋಷಗಳಿದ್ದು, ನನ್ನ ಬಳಿ ಇರುವ ಸ್ಫೋಟಕ ಆಡಿಯೋ ದಾಖಲೆಗಳನ್ನು ಆಧರಿಸಿ ಬೆಳಗಾವಿಯಲ್ಲೇ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ದೂರಿನ ಪ್ರಕಾರ, ಈ ದರೋಡೆ ನಡೆದದ್ದು 2025ರ ಅಕ್ಟೋಬರ್ 16 ರಂದು. ರದ್ದಾಗಿದ್ದ ₹2,000 ಮುಖಬೆಲೆಯ ನೋಟುಗಳನ್ನು ಎಕ್ಸ್ಚೇಂಜ್ ಮಾಡಲು ಗೋವಾದಿಂದ ಕರ್ನಾಟಕದ ಮಾರ್ಗವಾಗಿ ಎರಡು ಕಂಟೈನರ್ಗಳಲ್ಲಿ ಸಾಗಿಸಲಾಗುತ್ತಿತ್ತು. ಮುಂಬೈ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಅವರಿಗೆ ಸೇರಿದ ಹಣವಿದು ಎಂದು ಹೇಳಲಾಗಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿ ಪ್ರದೇಶವಾದ ಚೋರ್ಲಾ ಘಾಟ್ನಲ್ಲಿ ದರೋಡೆಕೋರರು ಕಂಟೈನರ್ಗಳನ್ನು ಅಡ್ಡಗಟ್ಟಿ ₹400 ಕೋಟಿ ಲೂಟಿ ಮಾಡಿದ್ದರು.
ಅಪಹರಣದಿಂದ ಬಯಲಾದ ಲೂಟಿ ಪ್ರಕರಣ
ಈ ಪ್ರಕರಣ ಬೆಳಕಿಗೆ ಬಂದಿದ್ದು ಅತ್ಯಂತ ರೋಚಕವಾಗಿ. ಅಕ್ಟೋಬರ್ 22ರಂದು ನಾಸಿಕ್ನಲ್ಲಿ ಸಂದೀಪ್ ಪಾಟೀಲ್ ಅವರ ಅಪಹರಣ ನಡೆದಿತ್ತು. ಅಪಹರಣಕಾರರು ಅವರಿಗೆ ದೈಹಿಕ ಹಿಂಸೆ ನೀಡಿ ಕೊಲೆ ಬೆದರಿಕೆ ಹಾಕಿದ್ದರು. ಈ ಅಪಹರಣ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಚೋರ್ಲಾ ಘಾಟ್ನಲ್ಲಿ ನಡೆದ ಲೂಟಿಯ ಸುಳಿವು ಸಿಕ್ಕಿತು. ನಂತರ ಜನವರಿ 6ರಂದು ನಾಸಿಕ್ ಎಸ್ಪಿ ಅವರು ಬೆಳಗಾವಿ ಎಸ್ಪಿಯವರಿಗೆ ಪತ್ರ ಬರೆದು ಘಟನೆಯ ವಿವರಗಳನ್ನು ಹಂಚಿಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಯೇಶ್ ಕದಂ, ವಿಶಾಲ್ ನಾಯ್ಡು, ಸುನಿಲ್ ದುಮಾನ್, ವಿರಾಟ್ ಗಾಂಧಿ ಮತ್ತು ಜನಾರ್ದನ್ ಧಾಯೇಗುಡೆ ಎಂಬ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ದರೋಡೆಯ ಮಾಸ್ಟರ್ ಮೈಂಡ್ ಕಿಶೋರ್ ಸಾಳ್ವೆ ಎಂಬಾತನಾಗಿದ್ದು, ಆತ ಸೇರಿದಂತೆ ಇಬ್ಬರು ಪ್ರಮುಖ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.
ದೂರುದಾರನೇ ಈಗ ತನಿಖಾ ತಂಡದ ವಿರುದ್ಧ ತಿರುಗಿ ಬಿದ್ದಿರುವುದು ಪ್ರಕರಣದಲ್ಲಿ ಹಲವು ಪ್ರಭಾವಿಗಳ ಕೈವಾಡವಿರುವ ಶಂಕೆಯನ್ನು ಮೂಡಿಸಿದೆ. ಬೆಳಗಾವಿ ಪೊಲೀಸರು ಈ ಪತ್ರಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.





