ಶ್ರೀಲಂಕಾದ ಕೊಲಂಬೊದಿಂದ ಮುಂಬೈಗೆ ಸಾಗುತ್ತಿದ್ದ ಸಿಂಗಾಪುರದ ಕಂಟೈನರ್ ಹಡಗು ಕೇರಳದ ಬೇಪೂರ್ ಕಡಲತೀರದಿಂದ 78 ನಾಟಿಕಲ್ ಮೈಲ್ ದೂರದ ಆಳ ಸಮುದ್ರದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ 22 ಮಂದಿ ಸಿಬ್ಬಂದಿಯ ಪೈಕಿ 18 ಜನರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಆದರೆ, ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ನಾಲ್ವರು ಕಣ್ಮರೆಯಾಗಿದ್ದಾರೆ. ಈ ದುರಂತದಿಂದಾಗಿ ಹಡಗಿನ ಸಿಬ್ಬಂದಿಯಲ್ಲಿ ಗಾಬರಿ ಉಂಟಾಗಿದೆ.
ಹಡಗಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಾಗ ಭಾರತೀಯ ನೌಕಾಪಡೆಯ INS ಸೂರತ್ ಯೋಧರು ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಇಂಡಿಯನ್ ಕೋಸ್ಟ್ ಗಾರ್ಡ್ನ ICGS ರಾಜದೂತ್ ಶೋಧ ಕಾರ್ಯವನ್ನು ಮುಂದುವರೆಸಿದ್ದು, ಕಣ್ಮರೆಯಾದ ನಾಲ್ವರು ಸಿಬ್ಬಂದಿಗಾಗಿ ತೀವ್ರ ಶೋಧ ನಡೆಸುತ್ತಿದೆ. ಜೊತೆಗೆ, ICGS ಸಚೇತ್ ಮತ್ತು ICGS ಸಮುದ್ರ ಪ್ರೆಹರಿ ಹಡಗಿನ ಬೆಂಕಿಯನ್ನು ನಂದಿಸಲು ಶ್ರಮಿಸುತ್ತಿವೆ.
ಈ ಹಡಗಿನಲ್ಲಿ ಚೀನಾದ 8, ತೈವಾನ್ನ 4, ಮ್ಯಾನ್ಮಾರ್ನ 4, ಮತ್ತು ಇಂಡೋನೇಷಿಯಾದ 2 ಸಿಬ್ಬಂದಿ ಸೇರಿದಂತೆ ಒಟ್ಟು 22 ಜನರಿದ್ದರು. ರಕ್ಷಣೆಗೊಂಡ 18 ಮಂದಿಯಲ್ಲಿ ಆರು ಜನರಿಗೆ ಗಾಯಗಳಾಗಿದ್ದು, ಅವರನ್ನು INS ಸೂರತ್ ಮೂಲಕ ಮಂಗಳೂರಿಗೆ ಕರೆತರಲಾಗಿದೆ. ಗಾಯಾಳುಗಳನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರ ದೇಹದ 60% ಸುಟ್ಟು ಹಾನಿಯಾಗಿದೆ ಮತ್ತು ಶ್ವಾಸಕೋಶಕ್ಕೆ ತೊಂದರೆಯಾಗಿದೆ. ಉಳಿದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಉಳಿದ 12 ಮಂದಿಗೆ ಮಂಗಳೂರಿನ ಹೊಟೇಲ್ನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.
ಈ ದುರಂತದಲ್ಲಿ ಕಣ್ಮರೆಯಾದ ನಾಲ್ವರು ಸಿಬ್ಬಂದಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಹಡಗಿನಲ್ಲಿ ಪೈಂಟ್, ಗನ್ಪೌಡರ್ನಂತಹ ವಸ್ತುಗಳನ್ನು ಸಾಗಿಸಲಾಗುತ್ತಿತ್ತು. ಇದು ಬೆಂಕಿಯ ತೀವ್ರತೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆಯ ಬಗ್ಗೆ ಡಾ. ದಿನೇಶ್ ಕದಂ, “ಗಂಭೀರವಾಗಿ ಗಾಯಗೊಂಡ ಇಬ್ಬರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರಿಗೆ ಸಣ್ಣ ಗಾಯಗಳಿದ್ದು, ಚಿಕಿತ್ಸೆ ಮುಂದುವರಿದಿದೆ,” ಎಂದು ತಿಳಿಸಿದ್ದಾರೆ.