ಬೆಂಗಳೂರು: ಬಿಸಿಯ ಬೇಗೆಯಲ್ಲಿ ಬೆಂದಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ನಿನ್ನೆ ನಡೆದ ಏಕಾಏಕಿ ಮಳೆ ಸುರಿದು ತಂಪೆರೆದಿದೆ. ಏಕಾಏಕಿ ಮಳೆಯ ಬಂದ ಪರಿಣಾಮ ಒಂದು ಪುಟ್ಟ ಜೀವವನ್ನು ಬಲಿ ಪಡೆದುಕೊಂಡಿದೆ. 3 ವರ್ಷದ ಕಂದಮ್ಮ ರಕ್ಷಾ ಎಂಬ ಬಾಲಕಿ ಬುಡಸಮೇತ ನೆಲಕ್ಕೆ ಬಿದ್ದ ಮರದ ದುರಂತಕ್ಕೆ ಬಲಿಯಾದ್ದಾಳೆ.
ನಿನ್ನೆ ಸಂಜೆ 8.10ರ ಹೊತ್ತಿಗೆ, ಪುಲಕೇಶಿನಗರದ ಜೀವನಹಳ್ಳಿ ಪ್ರದೇಶದಲ್ಲಿ ನಡೆದ ಈ ದುರ್ಘಟನೆ ನಡೆದಿದೆ. ಸತ್ಯ ಎಂಬ ವ್ಯಕ್ತಿ ತನ್ನ ಮಗಳ ಜೊತೆ ಮನೆಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ. ಮಳೆ ಜೋರಾಗುತ್ತಿದ್ದಂತೆ ಜೀವನಹಳ್ಳಿ ರಸ್ತೆ ಕ್ರಾಸ್ ಮಾಡುವಾಗ, ದೊಡ್ಡ ಹೆಮ್ಮರವೊಂದು ಬುಡಸಮೇತ ಕಿತ್ತು ಬಿದ್ದು ಬೈಕ್ ಮೇಲೆ ಅಪ್ಪಳಿಸಿತು. ಮರದ ಬಿದ್ದ ರಭಸಕ್ಕೆ ಮಗಳ ತಲೆಗೆ ಭಾರೀ ಪೆಟ್ಟು ಬಿದ್ದಿತ್ತು, ಬೈಕ್ನ ಹ್ಯಾಂಡಲ್ ಲಾಕ್ ಆಗಿ, ತಂದೆಯೂ ಅರೆಪ್ರಜ್ಞೆಯಲ್ಲಿದ್ದರು. ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅದಾಗಲೇ ರಕ್ಷಾ ಉಸಿರು ಚಲ್ಲಿದ್ದಾಳೆ.
ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ನಗರದ ಹಲವೆಡೆ 48ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ ಎಂದು ವರದಿಯಾಗಿದೆ. ಘಟನೆಯ ನಂತರ, ಬಿಬಿಎಂಪಿ ಅಧಿಕಾರಿಗಳು ಸ್ಥಳದಲ್ಲಿ ತನಿಖೆ ನಡೆಸಿ, ಮರವನ್ನು ತೆರವುಗೊಳಿಸಿದ್ದಾರೆ. ಮುಖ್ಯ ಆಯುಕ್ತ ತಾರಾನಂದ ಸಿನ್ಹಾ ಅವರು “ಅಪಾಯಕಾರಿ ಮರಗಳನ್ನು ಗುರುತಿಸಿ ತ್ವರಿತ ಕಾರ್ಯವೆಡೆಗೊಳ್ಳಲು ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ” ಎಂದು ಹೇಳಿದ್ದಾರೆ.
ಬೆಂಗಳೂರಿನ ಜೊತೆಗೆ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರದಲ್ಲೂ ಭಾರೀ ಮಳೆ ದಾಖಲಾಗಿದೆ. ಹಿಂದಿನ ವಾರಗಳ ಬಿಸಿಲಿನಿಂದ ಬಳಲಿದ್ದ ನಾಗರಿಕರಿಗೆ ತಂಪಾದ ವಾತಾವರಣ ನೀಡಲಿದೆ. ಹವಾಮಾನ ತಜ್ಞರು “ಮುಂಬರುವ ದಿನಗಳಲ್ಲಿ ಇದೇ ರೀತಿಯ ಅಸ್ಥಿರ ಹವಾಮಾನವನ್ನು ನಿರೀಕ್ಷಿಸಬಹುದು” ಎಂದು ಎಚ್ಚರಿಕೆ ನೀಡಿದ್ದಾರೆ.