ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೊದ ರಾಜ್ಯದಿಂದ ಕೆಲಸಕ್ಕೆ ಬಂದ ಕೆಲವರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದರಿಂದ ಜನರಲ್ಲಿ ಆತಂಕ ಮೂಡಿಸಿದೆ. ಇದೀಗ, ಹೆಚ್ಎಎಲ್ ನ ಶಾಸ್ತ್ರೀ ನಗರದ ಉದ್ಯಮಿಯೊಬ್ಬರ ಮನೆಯಲ್ಲಿ ನಡೆದ ಕಳ್ಳತನದ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಈ ಘಟನೆಯಲ್ಲಿ ನೇಪಾಳ ಮೂಲದ ದಂಪತಿಯೊಂದಿಗೆ ಒಟ್ಟು ಐವರು ಆರೋಪಿಗಳು, 10 ಲಕ್ಷ ರೂಪಾಯಿ ನಗದು, ಎರಡು ಕೆಜಿ ಚಿನ್ನಾಭರಣ ಮತ್ತು ಲೈಸೆನ್ಸ್ ಪಡೆದ ಪಿಸ್ತೂಲ್ ದೋಚಿ ಪರಾರಿಯಾಗಿದ್ದಾರೆ.
ಮೂರು ತಿಂಗಳ ಹಿಂದೆ, ನೇಪಾಳ ಮೂಲದ ರಾಜ್ ಮತ್ತು ದೀಪಾ ಎಂಬ ದಂಪತಿ, ಉದ್ಯಮಿ ರಮೇಶ್ ಬಾಬು ಅವರ ಮನೆಯಲ್ಲಿ ಸೆಕ್ಯೂರಿಟಿ ಕಾವಲುಗಾರರಾಗಿ ಕೆಲಸಕ್ಕೆ ಸೇರಿದ್ದರು. ರಮೇಶ್ ಬಾಬು ಅವರು ತಮ್ಮ ಕುಟುಂಬದೊಂದಿಗೆ ಮೇ 27ರಂದು ತಿರುಪತಿಗೆ ಯಾತ್ರೆಗೆ ತೆರಳಿದ್ದರು. ಮನೆಯ ಸುರಕ್ಷತೆಯ ಜವಾಬ್ದಾರಿಯನ್ನು ಈ ದಂಪತಿಗೆ ವಹಿಸಿ, ಅವರ ಮೇಲೆ ಸಂಪೂರ್ಣ ನಂಬಿಕೆ ಇರಿಸಿದ್ದರು. ಆದರೆ, ಈ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ರಾಜ್ ಮತ್ತು ದೀಪಾ, ತಮ್ಮ ಇತರ ಮೂವರು ಸಹಚರರೊಂದಿಗೆ ಸೇರಿ ಈ ದರೋಡೆಗಿಳಿದಿದ್ದಾರೆ. ರಮೇಶ್ ಬಾಬು ತಿರುಪತಿಯಲ್ಲಿದ್ದಾಗ, ಆರೋಪಿಗಳು ಮನೆಯ ಮುಖ್ಯ ಬಾಗಿಲು ಮತ್ತು ಬೆಡ್ರೂಂನ ಬಾಗಿಲುಗಳನ್ನು ಮುರಿದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, 10 ಲಕ್ಷ ರೂಪಾಯಿ ನಗದು ಮತ್ತು ಆತ್ಮರಕ್ಷಣೆಗಾಗಿ ಇಟ್ಟುಕೊಂಡಿದ್ದ ಲೈಸೆನ್ಸ್ ಪಡೆದ ಪಿಸ್ತೂಲ್ನ್ನು ಕದ್ದಿದ್ದಾರೆ.
ರಮೇಶ್ ಬಾಬು ಅವರು ತಮ್ಮ ಮನೆಯ ಸಿಸಿಟಿವಿ ಕ್ಯಾಮರಾಗಳನ್ನು ಮೊಬೈಲ್ನಲ್ಲಿ ರಿಮೋಟ್ ಆಗಿ ಪರಿಶೀಲಿಸುತ್ತಿದ್ದರು. ಆದರೆ, ಘಟನೆಯ ದಿನ ಬೆಳಗ್ಗೆ ಇದ್ದಕ್ಕಿದ್ದಂತೆ ಸಿಸಿಟಿವಿ ಆಫ್ ಆಗಿರುವುದನ್ನು ಗಮನಿಸಿದರು. ತಕ್ಷಣ ತಮ್ಮ ಸ್ನೇಹಿತರಿಗೆ ಮನೆಯ ಬಳಿಗೆ ಹೋಗಿ ಪರಿಶೀಲಿಸುವಂತೆ ಕೇಳಿಕೊಂಡರು. ಸ್ನೇಹಿತರು ಮನೆಗೆ ತೆರಳಿದಾಗ, ಕಳ್ಳತನ ನಡೆದಿರುವುದು ದೃಢಪಟ್ಟಿತ್ತು. ಮನೆಯ ಒಳಗಿನ ಬಾಗಿಲುಗಳು ಮುರಿದ ಸ್ಥಿತಿಯಲ್ಲಿ ಕಂಡುಬಂದವು. ಮೌಲ್ಯಯುತ ವಸ್ತುಗಳೆಲ್ಲವೂ ಕಾಣೆಯಾಗಿದ್ದವು.
ಈ ಘಟನೆಯ ಬಗ್ಗೆ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.