ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ಅವಾಂತರಗಳು ಸಂಭವಿಸುತ್ತಿವೆ. ಬನಶಂಕರಿಯ ಶ್ರೀನಿವಾಸನಗರದ ಬ್ರಹ್ಮ ಚೈತನ್ಯ ಮಂದಿರದ ಬಳಿ ನಡೆದ ದುರ್ಘಟನೆಯಲ್ಲಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ಮರದ ಕೊಂಬೆಯೊಂದು ಮುರಿದು ಬಿದ್ದು, ಯುವಕನ ಜೀವವನ್ನು ಬಲಿತೆಗೆದುಕೊಂಡಿದೆ. ಗಾಯಗೊಂಡ ಯುವಕನನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ.
ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ ಯುವಕನನ್ನು 29 ವರ್ಷದ ಅಕ್ಷಯ್ ಎಂದು ಗುರುತಿಸಲಾಗಿದೆ. ಶ್ರೀನಿವಾಸನಗರದ ಮೂಲದವನಾದ ಅಕ್ಷಯ್, ತನ್ನ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಭಾರಿ ಬಿರುಗಾಳಿಯಿಂದಾಗಿ ಮರದ ಕೊಂಬೆಯೊಂದು ಮುರಿದು ಬಿದ್ದಿದ್ದು, ಅಕ್ಷಯ್ನ ತಲೆಗೆ ತೀವ್ರವಾಗಿ ಬಡಿದಿದೆ. ಈ ಹೊಡೆತದಿಂದ ಬೈಕ್ನಿಂದ ಕೆಳಗೆ ಬಿದ್ದ ಅಕ್ಷಯ್, ರಕ್ತದ ಮಡುವಿನಲ್ಲಿ ರಸ್ತೆಯ ಮೇಲೆ ಒದ್ದಾಡುತ್ತಿದ್ದರು. ಸ್ಥಳೀಯರು ತಕ್ಷಣವೇ ಅವರನ್ನು ರಕ್ಷಿಸಿ, ಸಮೀಪದ ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಿದರು. ಆದರೆ, ತೀವ್ರ ಗಾಯಗಳಿಂದಾಗಿ ಚಿಕಿತ್ಸೆಗೆ ಸ್ಪಂದಿಸದೇ ಅಕ್ಷಯ್ ಕೊನೆಯುಸಿರೆಳೆದರು.