ಬೆಂಗಳೂರು: ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಇಂದು ಪ್ರಮುಖ ಸಭೆಯೊಂದು ನಡೆಯಲಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರ ನೇತೃತ್ವದಲ್ಲಿ ಈ ಸಭೆ ಆಯೋಜನೆಗೊಂಡಿದ್ದು, ಆಟೋ ಚಾಲಕರು ಮತ್ತು ಮಾಲೀಕರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಆಟೋ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಇದರಿಂದ ಆಟೋ ಪ್ರಯಾಣ ದರ ಹೆಚ್ಚಳದ ಆದೇಶ ಇಂದೇ ಹೊರಬೀಳಬಹುದು.
ಕಳೆದ ಕೆಲವು ವರ್ಷಗಳಿಂದ ಆಟೋ ಚಾಲಕರು ಮತ್ತು ಮಾಲೀಕರ ಸಂಘಟನೆಗಳು ದರ ಹೆಚ್ಚಳಕ್ಕೆ ಸಾರಿಗೆ ಇಲಾಖೆಗೆ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದಾರೆ. ಇಂಧನ ಬೆಲೆ ಏರಿಕೆ, ವಾಹನ ನಿರ್ವಹಣೆ ವೆಚ್ಚ ಹಾಗೂ ಜೀವನ ವೆಚ್ಚದ ಏರಿಕೆಯನ್ನು ಕಾರಣವಾಗಿಟ್ಟುಕೊಂಡು ಆಟೋ ಚಾಲಕರು ದರ ಪರಿಷ್ಕರಣೆಗೆ ಒತ್ತಾಯಿಸುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಆದರೆ ಯಾವುದೇ ತೀರ್ಮಾನ ಕೈಗೊಳ್ಳದೇ ಸಭೆಯನ್ನು ಮುಂದೂಡಲಾಗಿತ್ತು. ಹೀಗಾಗಿ ಆಟೋ ಸಂಘಟನೆಗಳು ತಮ್ಮ ಒತ್ತಡವನ್ನು ಮುಂದುವರೆಸಿದ್ದು, ಇಂದಿನ ಸಭೆಯಲ್ಲಿ ದರ ಹೆಚ್ಚಳಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆಯಲ್ಲಿವೆ.
ಪ್ರಸ್ತುತ, ಬೆಂಗಳೂರಿನಲ್ಲಿ ಆಟೋ ರಿಕ್ಷಾಗಳ ಕನಿಷ್ಠ ದರ 30 ರುಪಾಯಿಗಳಾಗಿದ್ದು, ಪ್ರತಿ ಕಿಲೋಮೀಟರ್ಗೆ 15 ರುಪಾಯಿಗಳ ಶುಲ್ಕ ವಿಧಿಸಲಾಗುತ್ತದೆ. ಆದರೆ, ಆಟೋ ಸಂಘಟನೆಗಳು ಕನಿಷ್ಠ ದರವನ್ನು 40 ರುಪಾಯಿಗಳಿಗೆ ಮತ್ತು ಪ್ರತಿ ಕಿಲೋಮೀಟರ್ ದರವನ್ನು 20 ರುಪಾಯಿಗಳಿಗೆ ಏರಿಸುವಂತೆ ಆಗ್ರಹಿಸಿವೆ. ದರ ಪರಿಷ್ಕರಣೆ ಸಮಿತಿಯು ಕನಿಷ್ಠ ದರವನ್ನು 35 ರುಪಾಯಿಗಳಿಗೆ ಮತ್ತು ಕಿಲೋಮೀಟರ್ ದರವನ್ನು 15 ರುಪಾಯಿಗಳಲ್ಲಿಯೇ ಉಳಿಸಿಕೊಳ್ಳಲು ಸಲಹೆ ನೀಡಿದೆ. ಈ ಎರಡೂ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿಗಳು ಇಂದಿನ ಸಭೆಯಲ್ಲಿ ಚರ್ಚಿಸಲಿದ್ದಾರೆ.
ಈ ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ (ಆರ್ಟಿಒ) ಕಮಿಷನರ್ ಮತ್ತು ಎಲ್ಲಾ ವಲಯದ ಆರ್ಟಿಒ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಜೊತೆಗೆ, ಪ್ರತಿ ಆಟೋ ಯೂನಿಯನ್ನಿಂದ ಕನಿಷ್ಠ ಇಬ್ಬರು ಸದಸ್ಯರು ಸಭೆಗೆ ಆಗಮಿಸುವಂತೆ ಸೂಚನೆ ನೀಡಲಾಗಿದೆ. ಈ ಸಭೆಯ ನಂತರ ಆಟೋ ದರ ಪರಿಷ್ಕರಣೆಗೆ ಸಂಬಂಧಿಸಿದ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.