ಕರ್ನಾಟಕದ ಸರ್ಕಾರಿ ನೌಕರರು ಮತ್ತು ಪೌರಸಂಸ್ಥೆಗಳ ಕಾಯಂ ಕಾರ್ಮಿಕರಿಗೆ 7ನೇ ವೇತನ ಆಯೋಗ ಜಾರಿಗೊಳಿಸುವ ಬೇಡಿಕೆಯನ್ನು ಮುಂದುವರೆಸಿದ್ದು, ಈಗ ಸರ್ಕಾರಕ್ಕೆ ಮುಷ್ಕರದ ಎಚ್ಚರಿಕೆ ನೀಡಲಾಗಿದೆ.
ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣಪಂಚಾಯಿತಿ ಸೇರಿ ನಗರದ ಸ್ಥಳಿಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಸೇರಿ ಎಲ್ಲ ಖಾಯಂ ನೌಕರರಿಗೆ 7ನೇ ವೇತನ ಆಯೋಗದ ಪರಿಷ್ಕೃತ ವೇತನವನ್ನು ಸರ್ಕಾರದಿಂದ ಬಿಡುಗಡೆ ಮಾಡಬೇಕೆಂದು ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ನೌಕರರಿಗೆ ಹೆಚ್ಚುವರಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡದೆ ಆಯಾ ನಗರ ಸ್ಥಳಿಯ ಸಂಸ್ಥೆಗಳ ಸ್ವಂತ ಮೂಲಗಳಿಂದ ಭರಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ. 2023ರ ಏಪ್ರಿಲ್ನಿಂದ 2024ರ ಜುಲೈವರೆಗೆ ಪಾವತಿಸಬೇಕಿದ್ದ ಮಧ್ಯಂತರ ಪರಿಹಾರವನ್ನೂ ಕೂಡ ನಗರ ಸ್ಥಳಿಯ ಸಂಸ್ಥೆಗಳ ಸ್ವಂತ ನಿಧಿಯಿಂದ ಭರಿಸುವಂತೆ ಸೂಚಿಸಲಾಗಿದೆ. ಬಹುತೇಕ ಸ್ಥಳಿಯ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಸಂದ ಅಧ್ಯಕ್ಷ ಎ.ಅಮೃತ್ರಾಜ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
1194ನೇ ಸಾಲಿಗಿಂತ ಮುಂಚೆ ಆಕ್ಟ್ರಾಯ್ ವ್ಯವಸ್ಥೆ ರದ್ದುಗೊಂಡ ವೇಳೆ ಪೌರಕಾರ್ಮಿಕರೂ ಸೇರಿ ಎಲ್ಲ ಖಾಯಂ ನೌಕರರಿಗೂ ವೇತನ ಸೇರಿ ಇತರೆ ಸೌಲಭ್ಯಗಳನ್ನು ಪಾವತಿಸಲು ಎಸ್ಎಫ್ಸಿ ಅಡಿ ವೇತನ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡುವ ಪದ್ಧತಿಯನ್ನು ಜಾರಿಗೆ ತರಲಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಶೇ.10ರಷ್ಟು ವೇತನವನ್ನು ಹಾಗೂ 21 ದಿನಗಳ ವಿಶೇಷ ರಜಾ ನಗದೀಕರಣ ಸೌಲಭ್ಯವನ್ನು ನಗರ ಸ್ಥಳಿಯ ಸಂಸ್ಥೆಗಳ ಸ್ವಂತ ಮೂಲದಿಂದ ಭರಿಸಲು ಸರ್ಕಾರವು ಸೂಚಿಸಿದೆ. ಬಹುತೇಕ ನಗರ ಸ್ಥಳಿಯ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಕಾರಣ ಈ ಸೂಚನೆ ಪಾಲಿಸಲು ಸಾಧ್ಯವಿಲ್ಲ ಎಂದರು.
ಸ್ಥಳಿಯ ಸಂಸ್ಥೆಗಳಲ್ಲಿ ಎಸ್ಎಫ್ಸಿ ಅನುದಾನದಲ್ಲಿಯೂ ಗಣನೀಯ ಇಳಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಘನ ತ್ಯಾಜ್ಯ, ಉದ್ಯಾನ ನಿರ್ವಹಣೆ, ಹೊರಗುತ್ತಿಗೆ ಸೇರಿ ಇತ್ಯಾದಿ ಮೂಲ ಸೌಕರ್ಯಗಳ ವೆಚ್ಚವೂ ಜಾಸ್ತಿಯಾಗಿದೆ. ಸ್ವಂತ ಮೂಲಗಳಲ್ಲಿ ಸಂಗ್ರಹವಾಗುವ ತೆರಿಗೆ, ನೀರಿನ ದರ ಸೇರಿ ಇತ್ಯಾದಗಿಳಿಂದ ವೆಚ್ಚಗಳನ್ನು ಭರಿಸಲೂ ಸಹ ಪರದಾಡುವ ಪರಿಸ್ಥಿತಿ ಇದೆ. ಹೀಗಿರುವಾಗ, ನಗರ ಸ್ಥಳಿಯ ಸಂಸ್ಥೆಗಳ ಸ್ವಂತ ಮೂಲಗಳಿಂದ ವೇತನ ವೆಚ್ಚ ಭರಿಸುವಂತೆ ಹೊರಡಿಸಿರುವ ಸುತ್ತೋಲೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಅಮೃತ್ರಾಜ್ ಆಗ್ರಹಿಸಿದರು.
ಸರ್ಕಾರಕ್ಕೆ ಪ್ರತಿಭಟನೆ ಎಚ್ಚರಿಕೆ:
ಸಾರ್ವಜನಿಕರಿಗೆ ಒದಗಿಸುವ ತುರ್ತು,ಅಗತ್ಯ ಸೇವೆಗಳಡಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಇತರೆ ಇಲಾಖೆಗಳಗಿಂತ ಹೆಚ್ಚಿನ ಕಾರ್ಯದೊತ್ತದದಲ್ಲಿ ನೌಕರರು ಇದ್ದಾರೆ. ಕಲ್ಯಾಣ, ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನೌಕರರು ಮುಂಚೂಣಿಯಲ್ಲಿದ್ದಾರೆ. ಆದರೆ, ವೇತನ ಮತ್ತು ಸೌಲಭ್ಯ ವಿಚಾರದಲ್ಲಿ ಸರ್ಕಾರ, ಮಲತಾಯಿ ಧೋರಣೆ ತೋರುತ್ತಿದೆ. ಜೊತೆಗೆ, ರಾಜ್ಯ ಮಹಾನಗರ ಪಾಲಿಕೆಯ ವೃಂದ ಮತ್ತು ನೇಮಕಾತಿ ನಿಯಾಮವಳಿಯ ಕರಡು ತಿದ್ದುಪಡ್ಡಿವಾಗಿಲ್ಲ. ಹಾಗಾಗಿ, ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳು, ನೌಕರರು ಸೇರಿ ವಿವಿಧ ಸಂಟನೆಗಳು ಒಟ್ಟುಗೂಡಿಸಿ ಆಡಳಿತ ಚಟುವಟಿಕೆ ಕಾರ್ಯವನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ಸರ್ಕಾರಕ್ಕೆ ಅಮೃತ್ರಾಜ್ ಎಚ್ಚರಿಕೆ ನೀಡಿದ್ದಾರೆ.
ಏ.10ಕ್ಕೆ ಸಭೆ
7ನೇ ವೇತನ ಜಾರಿಗೆ ತರುವಲ್ಲಿ ಸರ್ಕಾರ ವಿಳಂಭ ಧರೋಣೆ ಖಂಡಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲು ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ, ಏ.10ರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಬಿಬಿಎಂಪಿ ಅಧಿಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಬಸವ ಭವನದಲ್ಲಿ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಸೇರಿ ಇತರೆ ಸಂಘಟನೆಗಳ ಜೊತೆ ಸಭೆ ಆಯೋಜಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಆಗಮಿಸಿ ವಿವಿಧ ಸಲಹೆಗಳನ್ನು ನೀಡುವಂತೆ ಸಂಘದ ಅಧ್ಯಕ್ಷ ಎ.ಅಮೃತ್ರಾಜ್ ಪ್ರಕಟಣೆ ಹೊರಡಿಸಿದ್ದಾರೆ.





