ಬೆಂಗಳೂರು (ಆಗಸ್ಟ್ 21, 2025): ರಾಜ್ಯದ ವಾಹನ ಸವಾರರಿಗೆ ಸಂಚಾರಿ ಪೊಲೀಸ್ ಇಲಾಖೆಯಿಂದ ಗುಡ್ ನ್ಯೂಸ್ ನೀಡಿದೆ. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡ ಪಾವತಿಗೆ ಶೇ.50 ರಷ್ಟು ರಿಯಾಯಿತಿಯನ್ನು ಘೋಷಿಸಲಾಗಿದೆ. ಈ ವಿಶೇಷ ಅವಕಾಶವು ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಮಾತ್ರ ಲಭ್ಯವಿರಲಿದೆ.
ಬೆಂಗಳೂರು ಸಂಚಾರಿ ವ್ಯಾಪ್ತಿಯಲ್ಲಿ 2023ರ ಫೆಬ್ರವರಿ 11 ರವರೆಗೆ ದಾಖಲಾದ ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದೆ. ಈ ಅವಧಿಯ ನಂತರ ದಾಖಲಾದ ಪ್ರಕರಣಗಳಿಗೆ ರಿಯಾಯಿತಿ ಲಭ್ಯವಿರುವುದಿಲ್ಲ.
ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಬಾಕಿ ಇರುವ ದಂಡವನ್ನು ಪಾವತಿಸಲು ವಾಹನ ಸವಾರರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸರ್ಕಾರ ಈ ರಿಯಾಯಿತಿ ಯೋಜನೆಯನ್ನು ಜಾರಿಗೆ ತಂದಿದೆ.
ಈ ಹಿಂದೆ ಇಂತಹ ರಿಯಾಯಿತಿ ಯೋಜನೆಯನ್ನು ಘೋಷಿಸಿದಾಗ ಲಕ್ಷಾಂತರ ವಾಹನ ಸವಾರರು ಇದರ ಪ್ರಯೋಜನ ಪಡೆದಿದ್ದರು. ಈಗ ಮತ್ತೊಮ್ಮೆ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ದಂಡವನ್ನು ಕಡಿಮೆ ದರದಲ್ಲಿ ಪಾವತಿಸಲು ಸಾರಿಗೆ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ರಿಯಾಯಿತಿಯ ಲಾಭ ಯಾರಿಗೆ?
2023ರ ಫೆಬ್ರವರಿ 11 ರವರೆಗೆ ಬೆಂಗಳೂರು ಸಂಚಾರಿ ವ್ಯಾಪ್ತಿಯಲ್ಲಿ ದಾಖಲಾದ ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ. ಈ ರಿಯಾಯಿತಿಯನ್ನು ಪಡೆಯಲು ದಂಡವನ್ನು ಆನ್ಲೈನ್ ಪೋರ್ಟಲ್ಗಳ ಮೂಲಕ ಅಥವಾ ಸಂಚಾರಿ ಪೊಲೀಸ್ ಕಚೇರಿಗಳಲ್ಲಿ ಪಾವತಿಸಬಹುದು. ಈ ಅವಕಾಶವನ್ನು ಕಳೆದುಕೊಂಡರೆ, ಸೆಪ್ಟೆಂಬರ್ 12 ರ ನಂತರ ಪೂರ್ಣ ದಂಡವನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ದಂಡ ಪಾವತಿಸದಿದ್ದರೆ, ವಾಹನವನ್ನು ಜಪ್ತಿ ಮಾಡಲಾಗುವುದು. ಇಂತಹ ಸಂದರ್ಭದಲ್ಲಿ, ಕೋರ್ಟ್ಗೆ ಹೋಗಿ ದಂಡ ಪಾವತಿಸಿ ವಾಹನವನ್ನು ಬಿಡಿಸಿಕೊಳ್ಳಬೇಕಾಗುತ್ತದೆ.
ಸಂಚಾರಿ ಪೊಲೀಸರ ಜೊತೆಗೆ, ಸಾರಿಗೆ ಇಲಾಖೆ ಸಿಬ್ಬಂದಿಗೂ ವಾಹನ ತಪಾಸಣೆಗೆ ಅಧಿಕಾರ ನೀಡಲಾಗಿದೆ. ಆರ್ಸಿ, ಲೈಸೆನ್ಸ್, ಮತ್ತು ಇತರ ಸಂಚಾರ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲು ಸಾರಿಗೆ ಇಲಾಖೆ ಸಿಬ್ಬಂದಿಗೆ ಅವಕಾಶವಿದೆ. ಒಂದು ವೇಳೆ ನಿಮ್ಮ ವಾಹನದ ದಾಖಲೆಗಳು ಸರಿಯಿಲ್ಲದಿದ್ದರೆ, ಸಾರಿಗೆ ಇಲಾಖೆ ಸಿಬ್ಬಂದಿಯೂ ವಾಹನವನ್ನು ಜಪ್ತಿ ಮಾಡಬಹುದು ಮತ್ತು ಸರ್ಕಾರದ ನಿಯಮಾವಳಿಯಂತೆ ದಂಡ ವಿಧಿಸಬಹುದು.
ದಂಡವನ್ನು ಪಾವತಿಸಲು ಸಾರಿಗೆ ಇಲಾಖೆಯ ಆನ್ಲೈನ್ ಪೋರ್ಟಲ್ಗಳನ್ನು ಬಳಸಬಹುದು. ಇದರ ಜೊತೆಗೆ, ಸಂಚಾರಿ ಪೊಲೀಸ್ ಕಚೇರಿಗಳಿಗೆ ಭೇಟಿ ನೀಡಿ ನೇರವಾಗಿಯೂ ದಂಡ ಪಾವತಿಸಬಹುದು. ಈ ರಿಯಾಯಿತಿ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು, ಶೇ.50 ರಷ್ಟು ಉಳಿತಾಯ ಮಾಡಿಕೊಳ್ಳಲು ಸಾರಿಗೆ ಇಲಾಖೆ ಸಲಹೆ ನೀಡಿದೆ.