ಕೋಲಾರ: ಆಟವಾಡಿಕೊಂಡಿದ್ದ ಕಂದಮ್ಮವೊಂದು ಕುಡಿಯುವ ನೀರು ಎಂದು ಭಾವಿಸಿ ಪೇಂಟ್ಗೆ ಬಳಸುವ ರಾಸಾಯನಿಕವನ್ನ (ಥಿನ್ನರ್) ಕುಡಿದು ಪ್ರಾಣ ಕಳೆದುಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿ ಗ್ರಾಮದಲ್ಲಿ ಈ ಕರುಣಾಜನಕ ಘಟನೆ ನಡೆದಿದ್ದು, ಮೃತಪಟ್ಟ ಬಾಲಕಿಯನ್ನು ಮೂರು ವರ್ಷದ ಜಾನ್ವಿ ಅಲಿಯಾಸ್ ಜಾನು ಎಂದು ಗುರುತಿಸಲಾಗಿದೆ. ಮನೆಯಲ್ಲಿ ಪೇಂಟ್ ಕೆಲಸಕ್ಕಾಗಿ ತಂದಿಟ್ಟಿದ್ದ ಥಿನ್ನರ್ ಅನ್ನು ಬಾಟಲಿಯಲ್ಲಿ ಇರಿಸಲಾಗಿತ್ತು. ಆಟವಾಡುತ್ತಾ ಬಂದ ಬಾಲಕಿ, ಅದು ಕುಡಿಯುವ ನೀರು ಎಂದು ಭಾವಿಸಿ ಥಿನ್ನರ್ ಅನ್ನ ಕುಡಿದಿದ್ದಾಳೆ.
ಥಿನ್ನರ್ ಕುಡಿದ ಕೂಡಲೇ ಬಾಲಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾಳೆ. ಗಾಬರಿಗೊಂಡ ಪೋಷಕರು ತಕ್ಷಣವೇ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಜಾನು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.
ಮದುವೆ ಪ್ರಸ್ತಾಪ ನಿರಾಕರಿಸಿದ ವಿವಾಹಿತೆಯ ಮೇಲೆ ಗುಂಡಿನ ದಾಳಿ !
ವ್ಯಕ್ತಿಯೊಬ್ಬ, ವಿವಾಹಿತ ಮಹಿಳೆಯು ತನ್ನ ಮದುವೆ ಪ್ರಸ್ತಾಪವನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಕ್ಲಬ್ನಲ್ಲೇ ಗುಂಡಿನ ದಾಳಿ ನಡೆಸಿದ್ದಾನೆ.ಗುರುಗ್ರಾಮದ ಎಂಜಿ ರಸ್ತೆಯಲ್ಲಿರುವ ಜನಪ್ರಿಯ ಕ್ಲಬ್ ಒಂದರಲ್ಲಿ 25 ವರ್ಷದ ಕಲ್ಪನಾ ಎಂಬುವವರು ಕೆಲಸ ಮಾಡುತ್ತಿದ್ದರು. ವಿವಾಹಿತೆಯಾಗಿದ್ದ ಕಲ್ಪನಾ ಅವರ ಮೇಲೆ ದೆಹಲಿಯ ಸಂಗಮ್ ವಿಹಾರ್ ನಿವಾಸಿ ತುಷಾರ್ ಅಲಿಯಾಸ್ ಜಾಂಟಿ ಎಂಬಾತ ಕಳೆದ ಆರು ತಿಂಗಳಿನಿಂದ ಆಕೆಯ ಜೊತೆ ಸ್ನೇಹ ಬೆಳೆಸಿದ್ದ. ಆಕೆಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ ಕಲ್ಪನಾ ತಾವು ವಿವಾಹಿತೆಯೆಂದು ಪದೇ ಪದೇ ಆತನ ಪ್ರಸ್ತಾಪವನ್ನು ತಿರಸ್ಕರಿಸುತ್ತಾ ಬಂದಿದ್ದರು.
ಡಿಸೆಂಬರ್ 19ರ ರಾತ್ರಿ ಕಲ್ಪನಾ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಸುಮಾರು 1 ಗಂಟೆಯ ಹೊತ್ತಿಗೆ ತನ್ನ ಸ್ನೇಹಿತ ಶುಭಂ ಜೊತೆಗೆ ಕ್ಲಬ್ಗೆ ಬಂದ ತುಷಾರ್, ಮತ್ತೆ ಕಲ್ಪನಾ ಬಳಿ ಮದುವೆಯ ಮಾತು ತೆಗೆದಿದ್ದಾನೆ. ಈ ವೇಳೆ ಜಗಳ ವಿಕೋಪಕ್ಕೆ ಹೋಗಿದ್ದು, ಕೋಪಗೊಂಡ ತುಷಾರ್ ತನ್ನ ಬಳಿಯಿದ್ದ ಪಿಸ್ತೂಲಿನಿಂದ ಕಲ್ಪನಾ ಮೇಲೆ ಗುಂಡು ಹಾರಿಸಿದ್ದಾನೆ. ತಕ್ಷಣವೇ ಕಲ್ಪನಾ ತನ್ನ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಸಂತ್ರಸ್ತೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲ್ಪನಾ ಪತಿ ನೀಡಿದ ದೂರಿನ ಮೇರೆಗೆ ಸೆಕ್ಟರ್ 29 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೂಡಲೆ ಪೊಲೀಸರು, ಉತ್ತರ ಪ್ರದೇಶದ ಬರೌತ್ನಲ್ಲಿ ಅಡಗಿದ್ದ ಆರೋಪಿಗಳಾದ ತುಷಾರ್ (25) ಮತ್ತು ಆತನಿಗೆ ಸಹಕರಿಸಿದ ಶುಭಂ (24) ಅನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ತುಷಾರ್ ತಪ್ಪೊಪ್ಪಿಕೊಂಡಿದ್ದಾನೆ.ಬಂಧಿತ ತುಷಾರ್ ಒಂದು ತಿಂಗಳ ಹಿಂದೆಯೇ ಕಲ್ಪನಾ ಅವರ ಮನೆಗೆ ಹೋಗಿ ಗಲಾಟೆ ಮಾಡಿದ್ದ ಎನ್ನುವುದು ಪತಿಯ ದೂರಿನಿಂದ ತಿಳಿದುಬಂದಿದೆ. ಮನೆಯಲ್ಲಿ ಕಿರಿಕಿರಿ ಉಂಟುಮಾಡಿದ್ದ ತುಷಾರ್, ಕೊನೆಗೆ ಕೆಲಸದ ಸ್ಥಳಕ್ಕೇ ಬಂದು ಪ್ರಾಣಾಂತಿಕ ದಾಳಿ ನಡೆಸಿದ್ದಾನೆ. ಈ ಬಗ್ಗೆ ಪೊಲೀಸರು ತನಿಕೆ ಮುಂದುವರೆಸಿದ್ದಾತರೆ.





