ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ತೆಗೆದುಕೊಂಡ ಕಠಿಣ ಕ್ರಮಗಳನ್ನು ಚಾಚೂತಪ್ಪದೆ ಅನುಕರಿಸುತ್ತಾ ಬಂದಿರುವ ಪಾಕಿಸ್ತಾನ, ಇದೀಗ ಮತ್ತೊಮ್ಮೆ ಭಾರತದ ಕ್ರಮವನ್ನೇ ನಕಲಿಸಿದೆ. ಉಗ್ರವಾದಕ್ಕೆ ಆಶ್ರಯ ನೀಡುವ ಪಾಕಿಸ್ತಾನದ ನಿಜವಾದ ಸ್ವರೂಪವನ್ನು ಜಾಗತಿಕ ಮಟ್ಟದಲ್ಲಿ ಬಯಲಿಗೆಳೆಯಲು ಭಾರತವು ಸರ್ವಪಕ್ಷ ಸಂಸದರ 7 ನಿಯೋಗಗಳನ್ನು ವಿದೇಶಗಳಿಗೆ ಕಳುಹಿಸಲು ಘೋಷಿಸಿದ ಬೆನ್ನಲ್ಲೇ, ಪಾಕಿಸ್ತಾನವೂ ರಾಜತಾಂತ್ರಿಕರ ತಂಡವನ್ನು ಪ್ರಮುಖ ರಾಷ್ಟ್ರಗಳಿಗೆ ಕಳುಹಿಸುವುದಾಗಿ ತಿಳಿಸಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ವಿದೇಶಾಂಗ ಖಾತೆಯ ಮಾಜಿ ಸಚಿವ ಮತ್ತು ಪಿಪಿಪಿ ಪಕ್ಷದ ಅಧ್ಯಕ್ಷ ಬಿಲಾವರ್ ಭುಟ್ಟೋ ಅವರೊಂದಿಗಿನ ಚರ್ಚೆಯ ಬಳಿಕ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಪಾಕ್ ರೇಡಿಯೋ ವರದಿಯ ಪ್ರಕಾರ, “ಭಾರತದ ಸಂಚನ್ನು ಜಗಜ್ಜಾಹೀರುಗೊಳಿಸಲು ಮತ್ತು ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ನಿಲುವನ್ನು ವಿವರಿಸಲು” ಬಿಲಾವರ್ ಭುಟ್ಟೋ ನೇತೃತ್ವದ ನಿಯೋಗವು ಅಮೆರಿಕ, ಬ್ರಿಟನ್, ಬ್ರಸೆಲ್ಸ್, ಫ್ರಾನ್ಸ್ ಮತ್ತು ರಷ್ಯಾಗೆ ತೆರಳಲಿದೆ.
ಶನಿವಾರವಷ್ಟೇ, ಉಗ್ರವಾದದ ವಿರುದ್ಧ ತನ್ನ ನಿಲುವನ್ನು ಜಾಗತಿಕವಾಗಿ ಸಮರ್ಥಿಸಲು ಭಾರತವು ಸಂಸದರನ್ನೊಳಗೊಂಡ 7 ರಾಜತಾಂತ್ರಿಕ ನಿಯೋಗಗಳನ್ನು ವಿದೇಶಗಳಿಗೆ ಕಳುಹಿಸುವುದಾಗಿ ಘೋಷಿಸಿತ್ತು. ಈ ಕ್ರಮವನ್ನು ತಕ್ಷಣವೇ ಅನುಕರಿಸಿರುವ ಪಾಕಿಸ್ತಾನ, ತನ್ನ ರಾಜತಾಂತ್ರಿಕ ತಂಡದ ಮೂಲಕ ತನ್ನ “ನಿಲುವನ್ನು” ವಿವರಿಸಲು ಯತ್ನಿಸುತ್ತಿದೆ. ಆದರೆ, ಉಗ್ರವಾದಕ್ಕೆ ಬೆಂಬಲ ನೀಡುವ ದೇಶವಾಗಿ ಈಗಾಗಲೇ ಕುಖ್ಯಾತಿಯಾಗಿರುವ ಪಾಕಿಸ್ತಾನದ ಈ ಕ್ರಮವು ಎಷ್ಟು ಯಶಸ್ವಿಯಾಗಲಿದೆ ಎಂಬುದು ಪ್ರಶ್ನೆಯಾಗಿದೆ.
ಪಾಕಿಸ್ತಾನದ ಈ ಕಾಪಿ ಕ್ಯಾಟ್ ಕ್ರಮವು ಜಾಗತಿಕ ರಾಜತಾಂತ್ರಿಕ ವೇದಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ತಿಕ್ಕಾಟವನ್ನು ಇನ್ನಷ್ಟು ತೀವ್ರಗೊಳಿಸಲಿದೆ. ಭಾರತವು ತನ್ನ ನಿಯೋಗದ ಮೂಲಕ ಉಗ್ರವಾದದ ವಿರುದ್ಧ ತನ್ನ ದೃಢ ನಿಲುವನ್ನು ಮಂಡಿಸಲು ಯತ್ನಿಸುತ್ತಿರುವಾಗ, ಪಾಕಿಸ್ತಾನ ತನ್ನ “ಶಾಂತಿಯ” ನಿಲುವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಎರಡೂ ದೇಶಗಳ ರಾಜತಾಂತ್ರಿಕ ಕಾರ್ಯತಂತ್ರಗಳು ಜಾಗತಿಕ ಸಮುದಾಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಕಾದುನೋಡಬೇಕಾಗಿದೆ.