‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ಟ್ರೋಫಿಯನ್ನು ಗೆದ್ದು ರಾಜ್ಯದ ಮನೆಮಾತಾಗಿರುವ ಗಿಲ್ಲಿ ನಟನ ಹುಟ್ಟೂರಿನಲ್ಲಿ ಸಂಭ್ರಮಾಚರಣೆ ಜಾತ್ರೆಯ ರೂಪ ಪಡೆದುಕೊಂಡಿದೆ. ಟ್ರೋಫಿ ಗೆದ್ದ ನಂತರ ಮೊದಲ ಬಾರಿಗೆ ಊರಿಗೆ ಬಂದ ಗಿಲ್ಲಿಗೆ ಜನರಿಂದ ಸಿಕ್ಕ ಸ್ವಾಗತ, ಪ್ರೀತಿ ಮತ್ತು ಅಭಿಮಾನಗಳ ಅಲೆ ಸ್ವತಃ ಗಿಲ್ಲಿಗೂ ಅಚ್ಚರಿ ಮೂಡಿಸಿದೆ. ಮಂಡ್ಯ, ಮದ್ದೂರು ಹಾಗೂ ಮಳವಳ್ಳಿಗೆ ಭೇಟಿ ನೀಡಿರುವ ಗಿಲ್ಲಿ ನಟನನ್ನು ನೋಡಲು ಸಾವಿರಾರು ಅಭಿಮಾನಿಗಳು ಹರಿದು ಬಂದಿದ್ದಾರೆ.
ಗಿಲ್ಲಿಯನ್ನು ಮೆರವಣಿಗೆಯಲ್ಲಿ ಕರೆತರಲಾಗಿದ್ದು, ರಸ್ತೆಗಳೆಲ್ಲ ಜನಸಾಗರದಿಂದ ತುಂಬಿದ್ದವು. ಎಲ್ಲೆಡೆ ಕಟೌಟ್ಗಳು, ಹಾರಗಳು, ಘೋಷಣೆಗಳು, ಡೊಳ್ಳು-ಕುಣಿತದೊಂದಿಗೆ ಸಂಭ್ರಮಾಚರಣೆ ನಡೆಯಿತು. ಗಿಲ್ಲಿ ಹೋಗುವ ದಿಕ್ಕಿನಲ್ಲೆಲ್ಲ ಜನಜಾತ್ರೆ ಸೇರಿದ್ದು, ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಿದ್ದ ದೃಶ್ಯಗಳು ಕಂಡುಬಂದವು.
ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಗಿಲ್ಲಿ ನಟ, “ಖುಷಿಗಿಂತಲೂ ಭಯ ಜಾಸ್ತಿ ಆಗುತ್ತಿದೆ” ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. “ನನಗೆ ತುಂಬಾ ಖುಷಿ ಆಗುತ್ತಿದೆ. ನಾನು ಕೆ.ಎಂ. ದೊಡ್ಡಿಯಲ್ಲಿ ಐಟಿಐ ಓದಿದ್ದು. ಇದೇ ರಸ್ತೆಯಲ್ಲಿ ಸರಕಾರಿ ಬಸ್ನಲ್ಲಿ ಪಾಸ್ ತೋರಿಸಿ ಓಡಾಡುತ್ತಿದ್ದೆ. ಇವತ್ತು ಕಪ್ ಗೆದ್ದು ಇದೇ ರಸ್ತೆಯಲ್ಲಿ ಮೆರವಣಿಗೆ ಆಗ್ತೀನಿ ಅಂತ ನಾನು ಕನಸಲ್ಲೂ ಊಹಿಸಿರಲಿಲ್ಲ. ನಮ್ಮೂರಿಗೆ ಬಂದಾಗ ಖುಷಿಯಾಯ್ತು. ಆದರೆ ಈಗ ಜವಾಬ್ದಾರಿ ಜಾಸ್ತಿ ಆಗಿದೆ. ಖುಷಿಗಿಂತ ಭಯ ಜಾಸ್ತಿ ಅನ್ನಿಸುತ್ತಿದೆ” ಎಂದು ಗಿಲ್ಲಿ ಹೇಳಿದ್ದಾರೆ.
ಅಭಿಮಾನಿಗಳು ತಮ್ಮನ್ನು ದಂತಕಥೆ ನಟ ಅಂಬರೀಶ್ ಅವರೊಂದಿಗೆ ಹೋಲಿಸುತ್ತಿರುವ ಬಗ್ಗೆ ಮಾತನಾಡಿದ ಗಿಲ್ಲಿ, “ಅಂಬರೀಶ್ ಅವರ ಕಾಲಿನ ಧೂಳಿಗೂ ನಾನು ಸಮನಲ್ಲ. ಅವರನ್ನು ನನ್ನ ಜೊತೆ ಹೋಲಿಸುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದ್ದಾರೆ.
ಟ್ರೋಫಿ ಗೆದ್ದ ಬಳಿಕ ಬಿಗ್ ಬಾಸ್ ಮನೆಯ ಅನುಭವಗಳನ್ನು ನೆನಪಿಸಿಕೊಂಡ ಗಿಲ್ಲಿ, “ಬಿಗ್ ಬಾಸ್ಗೆ ಹೋಗುವಾಗ ನಾನು ಕೆಲವು ಜನರ ಪ್ರೀತಿ ಸಂಪಾದಿಸಿದ್ದೆ. ಅವರಿಗೆ ಮೋಸ ಮಾಡಬಾರದು ಅನ್ನೋದೇ ನನ್ನ ಉದ್ದೇಶ. ಒಳಗೆ ಇದ್ದಾಗ ವಿಡಿಯೋ ತೋರಿಸುತ್ತಿದ್ದರು. ಹೊರಗಡೆ ಕಟೌಟ್ಗಳು, ಅಭಿಮಾನಿಗಳ ಬೆಂಬಲ ನೋಡಿದಾಗ ನನಗೆ ನಂಬಲೂ ಆಗಲಿಲ್ಲ. ತುಂಬಾ ಸಂತೋಷವಾಯ್ತು” ಎಂದು ಹೇಳಿದರು.
“ಅಳಬೇಕು ಅಂದ್ರೆ ಅಳುವೂ ಬರಲಿಲ್ಲ. ಕೈ ಹಿಂಡಿಕೊಂಡು ನಿಜಾನಾ ಅಂತ ನೋಡ್ತಾ ಇದ್ದೆ. ದೇವರ ಆಶೀರ್ವಾದ ತುಂಬಾ ಜಾಸ್ತಿ ಸಿಕ್ಕಿದೆ. ಇಷ್ಟು ಜನ ಪ್ರೀತಿ ತೋರಿಸ್ತಾ ಇದ್ದಾರೆ ಅಂದ್ರೆ, ಆ ಯೋಗ್ಯತೆ ನನಗೆ ಇದ್ಯಾ ಅನ್ನೋದೇ ನನ್ನೊಳಗೆ ಪ್ರಶ್ನೆ ಹುಟ್ಟಿಸುತ್ತಿದೆ” ಎಂದು ಗಿಲ್ಲಿ ಮನದಾಳದ ಭಾವನೆಗಳನ್ನು ಹಂಚಿಕೊಂಡರು.
ಬಿಗ್ ಬಾಸ್ ಮನೆಯೊಳಗಿನ ತನ್ನ ಬೆಂಬಲ ವ್ಯವಸ್ಥೆ ಬಗ್ಗೆ ಮಾತನಾಡಿದ ಗಿಲ್ಲಿ, ರಕ್ಷಿತಾ ಶೆಟ್ಟಿ, ರಜತ್, ರಘು ಮತ್ತು ಕಾವ್ಯಾ ಅವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ. “ಹೊರಗಡೆ ಅಭಿಮಾನಿಗಳು ನನಗೆ ಬೆಂಬಲವಾಗಿ ನಿಂತರು. ಮನೆ ಒಳಗೆ ರಘು ಅಣ್ಣ, ರಕ್ಷಿತಾ, ರಜತ್ ಹಾಗೂ ಕಾವ್ಯಾ ನನ್ನ ಬೆನ್ನೆಲುಬಾಗಿ ನಿಂತರು. ಅವರ ಸಹಕಾರವಿಲ್ಲದೆ ಈ ಜಯ ಸಾಧ್ಯವಾಗುತ್ತಿರಲಿಲ್ಲ” ಎಂದು ವೇದಿಕೆ ಮೇಲೆಯೇ ಕೃತಜ್ಞತೆ ಸಲ್ಲಿಸಿದ್ದಾರೆ.





