ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಭರ್ಜರಿ ಅಂತ್ಯ ಕಂಡಿದೆ. ಹಲವು ತಿಂಗಳುಗಳ ಕುತೂಹಲ, ಸಂಘರ್ಷ, ಮನರಂಜನೆಯ ನಂತರ ಕೊನೆಗೂ ವಿನ್ನರ್ ಘೋಷಣೆ ಆಗಿದೆ. ಈ ಬಾರಿ ಕರುನಾಡ ಜನರ ಮನ ಗೆದ್ದ ವ್ಯಕ್ತಿ, ಮಳವಳ್ಳಿಯ ಹೈದನಾದ ಗಿಲ್ಲಿ ನಟ (ನಟರಾಜ) ಬಿಗ್ ಬಾಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಗಿಲ್ಲಿ ಕೈ ಎತ್ತಿ ಟ್ರೋಫಿ ಘೋಷಿಸಿದ್ದಾರೆ. ಫೈನಲ್ಗೆ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಧನುಷ್, ರಘು ಮತ್ತು ಕಾವ್ಯ ಬಂದಿದ್ದರು. ಆರಂಭದಲ್ಲಿ ಧನುಶ್ ಬಳಿಕ ರಘು, ಕಾವ್ಯ ಎಲಿಮಿನೇಷನ್ ಆಗಿದ್ದರು. ಇದೀಗ ಬಿಗ್ಬಾಸ್ ಕಪ್ ಅನ್ನು ಗಿಲ್ಲಿ ತಮ್ಮದಾಗಿಸಿಕೊಂಡಿದ್ದಾರೆ.
ಹಾಸ್ಯ ನಟನಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಗಿಲ್ಲಿ, ಆರಂಭದಿಂದಲೇ ತನ್ನ ಸರಳತೆ, ಭಾಷೆ, ಜನಸಾಮಾನ್ಯರ ಗಮನ ಸೆಳೆದಿದ್ದರು. ಅನೇಕ ಸ್ಪರ್ಧಿಗಳು ಗೇಮ್ ಪ್ಲ್ಯಾನ್, ತಂತ್ರ, ವಾದ-ವಿವಾದಗಳಲ್ಲಿ ತೊಡಗಿದ್ದರೆ, ಗಿಲ್ಲಿ ಮಾತ್ರ ಕಾಮಿಡಿಯಲ್ಲೇ ತನ್ನ ತಾಕತ್ತು ತೋರಿಸಿ ಪ್ರೇಕ್ಷಕರ ಹೃದಯ ಗೆದ್ದರು.
ಈ ಸೀಸನ್ನ ಫಿನಾಲೆಗೂ ಪೈಪೋಟಿ ಭಾರೀ ತೀವ್ರವಾಗಿತ್ತು. ರಕ್ಷಿತಾ ಶೆಟ್ಟಿ ದ್ವಿತೀಯ ಸ್ಥಾನ ಪಡೆದು ಸೆಕೆಂಡ್ ರನ್ನರ್ ಅಪ್ ಆಗಿದ್ದಾರೆ. ಶಾಂತ ಆಟ, ದೃಢ ವ್ಯಕ್ತಿತ್ವದಿಂದ ರಕ್ಷಿತಾ ಕೂಡ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು. ಇನ್ನು ಅಶ್ವಿನಿ ಗೌಡ ಮೂರನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು, ಅವರ ಶ್ರಮಕ್ಕೂ ಪ್ರಶಂಸೆ ವ್ಯಕ್ತವಾಗಿದೆ.
ಬಿಗ್ ಬಾಸ್ 12ನೇ ಸೀಸನ್ ಹಲವು ಅಂಶಗಳಲ್ಲಿ ವಿಭಿನ್ನವಾಗಿತ್ತು. ವೈಲ್ಡ್ ಕಾರ್ಡ್ ಎಂಟ್ರಿಗಳು, ಅಚ್ಚರಿಯ ಎಲಿಮಿನೇಷನ್, ಟಾಸ್ಕ್ಗಳಲ್ಲಿನ ತಿರುವುಗಳು ಎಲ್ಲವೂ ಪ್ರೇಕ್ಷಕರನ್ನು ಮನರಂಜಿಸಿತ್ತು.





