ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಫಿನಾಲೆಗೆ ದಿನಗಳು ಹತ್ತಿರವಾಗುತ್ತಿದ್ದು, ಮನೆಯೊಳಗಿನ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ‘ಟಿಕೆಟ್ ಟು ಟಾಪ್ 6’ (Ticket To Top 6) ಟಾಸ್ಕ್ ಆರಂಭವಾಗುತ್ತಿದ್ದಂತೆ ಸ್ಪರ್ಧಿಗಳ ನಿಜವಾದ ಆಟ ಮತ್ತು ಅಸಲಿ ಸ್ವಭಾವ ಹೊರಬರುತ್ತಿದೆ. ನಿನ್ನೆ ನಡೆದ ಟಾಸ್ಕ್ನಲ್ಲಿ ಸ್ಪರ್ಧಿಗಳ ನಡುವೆ ಭಾರಿ ಗಲಾಟೆ, ಆರೋಪ-ಪ್ರತ್ಯಾರೋಪಗಳು ನಡೆಯುವ ಮೂಲಕ ವಾತಾವರಣವೇ ಬದಲಾಯಿತು.
ಈ ಟಾಸ್ಕ್ನಲ್ಲಿ ಗಿಲ್ಲಿ ನಟ (Gilli Nata) ಸೋಲು ಅನುಭವಿಸಿದ್ದು, ಧ್ರುವಂತ್ಗೆ ಫಿನಾಲೆ ಹಾದಿ ಸುಗಮವಾಗಿದೆ. ಇದೇ ವಿಷಯ ಅಶ್ವಿನಿ ಗೌಡ (Ashwini Gowda) ಹಾಗೂ ರಾಶಿಕಾ ಶೆಟ್ಟಿ (Rashika Shetty) ನಡುವಿನ ವೈಮನಸ್ಸಿಗೆ ಇನ್ನಷ್ಟು ಬೆಂಕಿ ಸುರಿದಂತಾಯಿತು. ಟಾಸ್ಕ್ ವೇಳೆ ನಡೆದ ಘಟನೆಯಿಂದ ರಾಶಿಕಾ, ಅಶ್ವಿನಿ ಹಾಗೂ ಧ್ರುವಂತ್ ವಿರುದ್ಧ ತಮ್ಮ ಸಿಟ್ಟನ್ನು ಸಂಪೂರ್ಣವಾಗಿ ಹೊರಹಾಕಿದ್ದಾರೆ.
ಮುಖಕ್ಕೆ ರಭಸವಾಗಿ ನೀರು ಎರಚಿದ ರಾಶಿಕಾ
‘ಟಿಕೆಟ್ ಟು ಟಾಪ್ 6’ ಟಾಸ್ಕ್ನ ಭಾಗವಾಗಿ ಸ್ಪರ್ಧಿಗಳ ಏಕಾಗ್ರತೆಯನ್ನು ಭಂಗ ಮಾಡುವ ಸಲುವಾಗಿ ಮುಖಕ್ಕೆ ನೀರು ಎರಚುವ ಟಾಸ್ಕ್ ನೀಡಲಾಗಿತ್ತು. ಈ ವೇಳೆ ರಾಶಿಕಾ ಅವರು ಧ್ರುವಂತ್ ಹಾಗೂ ಅಶ್ವಿನಿ ಮುಖಕ್ಕೆ ರಭಸವಾಗಿ ನೀರು ಚಲ್ಲಿದ್ದಾರೆ. ಇದರಿಂದ ಕೋಪಗೊಂಡ ಧ್ರುವಂತ್, “ಈ ರೀತಿ ನೀರು ಎರಚಿದರೆ ಮುಖಕ್ಕೆ ಏನಾದರೂ ಆದರೆ ಯಾರು ಹೊಣೆ? ರೂಲ್ಸ್ ಬುಕ್ ಒಮ್ಮೆ ಓದಿಕೊಳ್ಳಿ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಶ್ವಿನಿ ಕೂಡ “ಕಣ್ಣಿಗೆ ನೀರು ಹೋಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆದರೆ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ ರಾಶಿಕಾ, “ಇದೆಲ್ಲಾ ನಾಟಕ” ಎಂದು ತಿರುಗೇಟು ನೀಡಿದರು.
ಮಾತಿನ ಯುದ್ಧ: ಅಶ್ವಿನಿ vs ರಾಶಿಕಾ
ಟಾಸ್ಕ್ ಮುಗಿದ ಬಳಿಕ ಮಾತಿನ ಸಮರ ಇನ್ನಷ್ಟು ಹೆಚ್ಚಾಯಿತು. ಅಶ್ವಿನಿ, “ನಿನ್ನ ಥರ ಒಂದು ಸಿನಿಮಾ ಮಾಡಿಕೊಂಡು ಬಂದಿಲ್ಲ” ಎಂದು ರಾಶಿಕಾಗೆ ಚುಚ್ಚಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ರಾಶಿಕಾ, “ಅದಕ್ಕೇ ಇವತ್ತಿಗೂ ನೀನು ಯಾರು ಅನ್ನೋದು ಎಷ್ಟೋ ಜನರಿಗೆ ಗೊತ್ತಿಲ್ಲ” ಎಂದು ಕೌಂಟರ್ ಕೊಟ್ಟರು.
ಅಲ್ಲದೆ, “ನಿಮ್ಮ ಥರ ನಾಟಕ ಮಾಡಿ, ಮ್ಯಾನುಪುಲೇಟ್ ಮಾಡಿ ಗುರುತಿಸಿಕೊಳ್ಳುವ ಅವಶ್ಯಕತೆ ನನಗೆ ಇಲ್ಲ. ನಾನು ಮಾನ-ಮರ್ಯಾದೆ ಕಳೆದುಕೊಂಡು ಆಟ ಆಡಲ್ಲ” ಎಂದು ರಾಶಿಕಾ ನೇರವಾಗಿ ಅಶ್ವಿನಿಗೆ ತಿರುಗೇಟು ನೀಡಿದರು.
ಟಾಸ್ಕ್ನ ನಿಯಮಗಳು
ಈ ಟಾಸ್ಕ್ನಲ್ಲಿ ಇಬ್ಬರು ಸ್ಪರ್ಧಿಗಳು ಕಂಬವನ್ನು ಗಟ್ಟಿಯಾಗಿ ಹಿಡಿದುಕೊಂಡು ಏಕಾಗ್ರತೆಯಿಂದ ನಿಲ್ಲಬೇಕು. ಉಳಿದ ಸ್ಪರ್ಧಿಗಳು ಮುಖಕ್ಕೆ ನೀರು ಎರಚುವ ಮೂಲಕ ಅವರ ಏಕಾಗ್ರತೆಯನ್ನು ಭಂಗಗೊಳಿಸಲು ಪ್ರಯತ್ನಿಸಬೇಕು. ಈ ವೇಳೆ ರಘು ಮತ್ತು ರಾಶಿಕಾ ಕಂಬ ಹಿಡಿದರೆ, ಧ್ರುವಂತ್ ಹಾಗೂ ಅಶ್ವಿನಿ ನೀರು ಎರಚುವ ಪಾತ್ರದಲ್ಲಿ ಇದ್ದರು.
ಕೆಲ ದಿನಗಳ ಹಿಂದೆ ಅಶ್ವಿನಿ ಮತ್ತು ರಾಶಿಕಾ ಆತ್ಮೀಯ ಗೆಳತಿಯರಂತೆ ಕಾಣಿಸಿಕೊಂಡಿದ್ದರು. ಆದರೆ ಫಿನಾಲೆ ಹತ್ತಿರವಾಗುತ್ತಿದ್ದಂತೆ ಅವರ ಸಂಬಂಧ ಸಂಪೂರ್ಣ ಬದಲಾಗಿದೆ. ಇದೀಗ ಇಬ್ಬರೂ ಪರಸ್ಪರ ಹಾವು-ಮುಂಗುಸಿಯಂತೆ ವರ್ತಿಸುತ್ತಿದ್ದಾರೆ.
ಫಿನಾಲೆ ಓಟದಲ್ಲಿ ತಿರುವು
ಸದ್ಯ ಧನುಷ್ ಮತ್ತು ಧ್ರುವಂತ್ ಫಿನಾಲೆಗೆ ಆಯ್ಕೆಯಾಗಿದ್ದು, ಗಿಲ್ಲಿ ನಟಗೆ ಇದು ಭಾರಿ ಹಿನ್ನಡೆಯಾಗಿದೆ. ಇದರಿಂದ ಕಾವ್ಯಾ, ರಘು, ರಾಶಿಕಾ, ರಕ್ಷಿತಾ ಹಾಗೂ ಧನುಷ್ ಸೇರಿದಂತೆ ಹಲವು ಸ್ಪರ್ಧಿಗಳಿಗೆ ಶಾಕ್ ಆಗಿದೆ. ಗಿಲ್ಲಿಯನ್ನು ಬೆಂಬಲಿಸುವ ಪ್ರೇಕ್ಷಕರಲ್ಲೂ ನಿರಾಸೆ ಮೂಡಿದೆ.





