ಮಂಗಳೂರಿನ ಬಜ್ಪೆಯಲ್ಲಿ ಮೇ 1, 2025 ರಂದು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಬರ್ಬರ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ತೀವ್ರಗೊಳಿಸಿದೆ. ಈಗಾಗಲೇ 12 ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿಗಳು ಬಯಲಾಗಿವೆ. ಈ ಕೊಲೆಯ ಹಿಂದೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಸಂಪರ್ಕವಿದ್ದು, ವಿದೇಶದಿಂದ ಆರ್ಥಿಕ ನೆರವು ಪಡೆದಿರುವ ಆಘಾತಕಾರಿ ವಿವರಗಳು ಎನ್ಐಎ ತನಿಖೆಯಲ್ಲಿ ಬಹಿರಂಗಗೊಂಡಿವೆ.
ಎನ್ಐಎ ವಿಚಾರಣೆಯಲ್ಲಿ, ಬಂಧಿತ ಆರೋಪಿಗಳು ಕೊಲೆಗೆ ಸಂಬಂಧಿಸಿದ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಕೊಲೆಗೆ ನೆರವು ನೀಡಿದವರಲ್ಲಿ ಸ್ಥಳೀಯ ವ್ಯಕ್ತಿಗಳ ಜೊತೆಗೆ ವಿದೇಶದಲ್ಲಿರುವ ಕೆಲವರು ಸೇರಿದ್ದಾರೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. PFI ಸಂಘಟನೆಯೊಂದಿಗೆ ಆರೋಪಿಗಳಿಗೆ ದಟ್ಟ ಸಂಪರ್ಕವಿದ್ದು, ಈ ಕೊಲೆಗೆ ವಿದೇಶದಿಂದ ಹಣಕಾಸಿನ ನೆರವು ಸಿಕ್ಕಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಎನ್ಐಎ ತಂಡವು ಆರೋಪಿಗಳ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸುತ್ತಿದ್ದು, ಈ ದಿಶೆಯಲ್ಲಿ ತನಿಖೆಯನ್ನು ತೀವ್ರಗೊಳಿಸಿದೆ.
ವಿದೇಶಿ ಫಂಡಿಂಗ್ನ ಗಂಭೀರ ಆರೋಪ
ತನಿಖೆಯಲ್ಲಿ, ಸುಹಾಸ್ ಶೆಟ್ಟಿ ಕೊಲೆಗೆ ವಿದೇಶದಿಂದ ಆರ್ಥಿಕ ನೆರವು ಸಂದಾಯವಾಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ವಿದೇಶದಿಂದ ಹಣ ವರ್ಗಾವಣೆಯಾಗಿದ್ದು, ಕೆಲವು ಸ್ಥಳೀಯ ವ್ಯಕ್ತಿಗಳಿಂದಲೂ ಹಣಕಾಸಿನ ನೆರವು ಸಿಕ್ಕಿರುವ ಸಾಕ್ಷ್ಯಗಳು ದೊರೆತಿವೆ. ಎನ್ಐಎ ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದ ತಂಡವು ಈ ಆರ್ಥಿಕ ವಹಿವಾಟುಗಳ ಸಂಪೂರ್ಣ ವಿವರವನ್ನು ಪರಿಶೀಲಿಸುತ್ತಿದೆ.
ಕೊಲೆಗೆ ಮೂರು ತಿಂಗಳ ಮುಂಚಿನ ಸಂಚು
ಸುಹಾಸ್ ಶೆಟ್ಟಿ ಕೊಲೆಗೆ ಮೂರು ತಿಂಗಳ ಮೊದಲೇ ಸಂಚು ರೂಪಿಸಲಾಗಿತ್ತು ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಜನವರಿಯಲ್ಲಿ, 2022ರಲ್ಲಿ ಕೊಲೆಯಾದ ಫಾಜಿಲ್ನ ಸಹೋದರ ಆದಿಲ್ ಮೆಹರೂಫ್, ಪ್ರಮುಖ ಆರೋಪಿ ಸಫ್ವಾನ್ಗೆ 3 ಲಕ್ಷ ರೂಪಾಯಿ ನೀಡಿದ್ದ ಎಂದು ತಿಳಿದುಬಂದಿದೆ. ಕೃತ್ಯಕ್ಕಾಗಿ ಸ್ವಿಫ್ಟ್ ಕಾರ್ ಮತ್ತು ಪಿಕ್ಅಪ್ ಟ್ರಕ್ ಬಳಸಲಾಗಿತ್ತು. ಸುಹಾಸ್ ತಪ್ಪಿಸಿಕೊಂಡರೆ ಎಂಬುದಕ್ಕಾಗಿ ಪ್ಲಾನ್ ಬಿ ಕೂಡ ರೂಪಿಸಲಾಗಿತ್ತು. ಪ್ರಮುಖ ಆರೋಪಿ ಸಫ್ವಾನ್, ಸುಹಾಸ್ನ ಚಲನವಲನಗಳ ಮೇಲೆ 15 ದಿನಗಳ ಕಾಲ ಗುಪ್ತವಾಗಿ ಗಮನಿಟ್ಟಿದ್ದ. ಚಿಕ್ಕಮಗಳೂರಿನ ಕಳಸಾದ ರಂಜಿತ್ ಮತ್ತು ನಾಗರಾಜ್ ಸಫ್ವಾನ್ನ ಮನೆಯಲ್ಲೇ ಇದ್ದು, ಕೊಲೆಯ ಯೋಜನೆಯಲ್ಲಿ ಭಾಗಿಯಾಗಿದ್ದರು.
ಎನ್ಐಎ ತನಿಖೆಗೆ ಒತ್ತಾಯ
ಪ್ರಕರಣವನ್ನು ಆರಂಭದಲ್ಲಿ ರಾಜ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾಗ, ಸುಹಾಸ್ ಶೆಟ್ಟಿ ಅವರ ಕುಟುಂಬವು ಎನ್ಐಎ ತನಿಖೆಯ ಮೂಲಕ ಮಾತ್ರ ನ್ಯಾಯ ಸಿಗಲಿದೆ ಎಂದು ಒತ್ತಾಯಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಶಾಸಕರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದು, PFI ಸಂಘಟನೆಯ ಒಳಸಂಚು ಮತ್ತು ವಿದೇಶಿ ಫಂಡಿಂಗ್ನ ಸಾಧ್ಯತೆಯ ಬಗ್ಗೆ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಯು ಜೂನ್ 7, 2025ರಂದು ಪ್ರಕರಣವನ್ನು ಎನ್ಐಎಗೆ ವಹಿಸಿತು.
ಸುಹಾಸ್ ಶೆಟ್ಟಿ ಹತ್ಯೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಿ, ಕಟ್ಟೆಚ್ಚರಿಕೆ ವಹಿಸಲಾಗಿತ್ತು. ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ (VHP) ಸೇರಿದಂತೆ ಹಲವು ಸಂಘಟನೆಗಳು ಎನ್ಐಎ ತನಿಖೆಗೆ ಒತ್ತಾಯಿಸಿದ್ದವು. ಈ ಕೊಲೆಯನ್ನು “ಗುರಿಯಿಟ್ಟ ಕೊಲೆ” ಎಂದು ಕರೆದಿರುವ ಕೇಂದ್ರ ಗೃಹ ಇಲಾಖೆ, ಜನರಲ್ಲಿ ಭಯ ಸೃಷ್ಟಿಸುವ ಉದ್ದೇಶದಿಂದ ನಡೆದ ಕೃತ್ಯವೆಂದು ವಿವರಿಸಿದೆ.