ಶಿವಮೊಗ್ಗ ಸೆ. 09: ಮಲೆನಾಡಿನ ಪ್ರವಾಸಿಗರು ಹಾಗೂ ವನ್ಯಜೀವಿ ಪ್ರೇಮಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಮೃಗಾಲಯ ಹಾಗೂ ಹುಲಿ-ಸಿಂಹ ಸಫಾರಿಗೆ ಹೊಸ ಅತಿಥಿಗಳ ಆಗಮನವಾಗಿದೆ. ಬಿಹಾರದ ಪಾಟ್ನಾದ ಸಂಜಯ್ ಗಾಂಧಿ ಜೈವಿಕ ಉದ್ಯಾನವನದಿಂದ 8 ತೋಳಗಳು ಹಾಗೂ 4 ಅಪರೂಪದ ಘರಿಯಾಲ್ಗಳನ್ನು ಪ್ರಾಣಿ ವಿನಿಮಯ ಯೋಜನೆಯಡಿ ಶಿವಮೊಗ್ಗಕ್ಕೆ ತರಲಾಗಿದೆ.
ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆಯೊಂದಿಗೆ ಈ ಪ್ರಾಣಿ ವಿನಿಮಯ ಪ್ರಕ್ರಿಯೆ ನಡೆದಿದೆ. ಇದರ ಭಾಗವಾಗಿ ಶಿವಮೊಗ್ಗ ಮೃಗಾಲಯದಿಂದ ಎರಡು ಗಂಡು ಕಾಡುಕೋಣಗಳನ್ನು ಪಾಟ್ನಾ ಮೃಗಾಲಯಕ್ಕೆ ನೀಡಲಾಗಿದೆ. ಹೊಸ ಪ್ರಾಣಿಗಳ ಸೇರ್ಪಡೆಯಿಂದ ತ್ಯಾವರೆಕೊಪ್ಪ ಮೃಗಾಲಯದ ಜೀವವೈವಿಧ್ಯ ಮತ್ತಷ್ಟು ಹೆಚ್ಚಾಗಿದೆ.
ಪಾಟ್ನಾದಿಂದ ಬಂದ ತೋಳಗಳ ಪೈಕಿ ಐದು ತೋಳಗಳನ್ನು ಸುಮಾರು ಮೂರು ವಾರಗಳ ಕಾಲ ಪ್ರತ್ಯೇಕವಾಗಿ ಇರಿಸಿ, ಅವುಗಳ ಆರೋಗ್ಯ, ವರ್ತನೆ ಮ ತ್ತು ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಸಿಬ್ಬಂದಿ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಈ ಅವಧಿಯಲ್ಲಿ ಅವುಗಳಿಗೆ ಅಗತ್ಯ ಆಹಾರ, ಆರೈಕೆ ಹಾಗೂ ಪರಿಸರಕ್ಕೆ ಹೊಂದಿಕೊಳ್ಳಲು ಬೇಕಾದ ತರಬೇತಿ ನೀಡಲಾಗಿದೆ. ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂಬುದು ಖಚಿತವಾದ ಬಳಿಕ ಇದೀಗ ಅವುಗಳನ್ನು ಪ್ರವಾಸಿಗರ ವೀಕ್ಷಣೆಗೆ ಪ್ರದರ್ಶನ ಆವರಣದಲ್ಲಿ ಬಿಡಲಾಗಿದೆ.
ಹೊಸ ಪರಿಸರದಲ್ಲಿ ಪ್ರಾಣಿಗಳು ಸುರಕ್ಷಿತವಾಗಿ ಹೊಂದಿಕೊಳ್ಳುವಂತೆ ಮೃಗಾಲಯದ ಸಿಬ್ಬಂದಿ ಅವುಗಳ ಆರೋಗ್ಯ ಹಾಗೂ ಚಲನವಲನದ ಮೇಲೆ ನಿರಂತರ ನಿಗಾ ವಹಿಸುತ್ತಿದ್ದಾರೆ.
ಇದೇ ವೇಳೆ ಪಾಟ್ನಾದಿಂದ ಆಗಮಿಸಿರುವ ನಾಲ್ಕು ಘರಿಯಾಲ್ಗಳು ಶಿವಮೊಗ್ಗ ಮೃಗಾಲಯದ ಜಲಚರ ಜೀವವೈವಿಧ್ಯಕ್ಕೆ ಮತ್ತೊಂದು ವಿಶೇಷ ಸೇರ್ಪಡೆಯಾಗಿವೆ. ಅಪರೂಪದ ಮೊಸಳೆ ಪ್ರಭೇದಗಳಲ್ಲಿ ಒಂದಾಗಿರುವ ಘರಿಯಾಲ್ಗಳ ಸಂರಕ್ಷಣೆ ಹಾಗೂ ಸಂತಾನೋತ್ಪತ್ತಿಗೆ ಮೃಗಾಲಯಗಳಲ್ಲಿ ವಿಶೇಷ ಮಹತ್ವವಿದೆ. ಹೀಗಾಗಿ ಹೊಸ ಘರಿಯಾಲ್ಗಳ ಆಗಮನವು ಭವಿಷ್ಯದ ಸಂರಕ್ಷಣಾ ಮತ್ತು ಸಂತಾನೋತ್ಪತ್ತಿ ಕಾರ್ಯಕ್ರಮಗಳಿಗೆ ಸಹಕಾರಿಯಾಗಲಿದೆ.
ಈ ಹೊಸ ಪ್ರಾಣಿಗಳ ಸೇರ್ಪಡೆಯೊಂದಿಗೆ ಶಿವಮೊಗ್ಗ ಮೃಗಾಲಯದಲ್ಲಿರುವ ಪ್ರಾಣಿ ತಳಿಗಳ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ಜೀವವೈವಿಧ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ತ್ಯಾವರೆಕೊಪ್ಪ ಮೃಗಾಲಯವನ್ನು ‘ಚಿಕ್ಕ ಮೃಗಾಲಯ’ ವಿಭಾಗದಿಂದ ‘ಮಧ್ಯಮ ಮೃಗಾಲಯ’ ವಿಭಾಗಕ್ಕೆ ಮೇಲ್ದರ್ಜೆಗೇರಿಸುವ ನಿರೀಕ್ಷೆಯೂ ಮೂಡಿದೆ.
ಸಾಲು ಸಾಲು ರಜೆಗಳ ಸಂದರ್ಭದಲ್ಲಿ ತ್ಯಾವರೆಕೊಪ್ಪ ಸಫಾರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಈ ಹೊಸ ಅತಿಥಿಗಳು ಮತ್ತಷ್ಟು ಆಕರ್ಷಣೆಯಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಪರೂಪದ ಪ್ರಾಣಿಗಳ ಸೇರ್ಪಡೆಗೆ ಇದು ದಾರಿ ಮಾಡಿಕೊಡಬಹುದು.





