ಬಾಗಲಕೋಟೆಯ ಬಡ ವಿದ್ಯಾರ್ಥಿನಿಗೆ ಕ್ರಿಕೆಟಿಗ ರಿಷಬ್‌ ಪಂಥ್ ನೆರವು!

ವಿದ್ಯಾರ್ಥಿನಿಯ BCA ಕನಸಿಗೆ 40,000 ರೂ. ನೀಡಿದ ರಿಷಭ್ ಪಂತ್!

Untitled design (44)

ಬಾಗಲಕೋಟೆ: ಟೀಂ ಇಂಡಿಯಾದ ವಿಕೆಟ್ ಕೀಪರ್ ಮತ್ತು ಸ್ಫೋಟಕ ಬ್ಯಾಟರ್ ರಿಷಭ್ ಪಂತ್ ಅವರು ತಮ್ಮ ಆಟದಷ್ಟೇ ತಮ್ಮ ದಾನಶೀಲತೆಯಿಂದಲೂ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದ ವೇಳೆ ಗಾಯಗೊಂಡಿದ್ದರೂ, ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಡ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಿ ಎಲ್ಲರ ಮನ ಗೆದ್ದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರಮಠ ಎಂಬ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ (ಕಾಮರ್ಸ್) ಪರೀಕ್ಷೆಯಲ್ಲಿ ಶೇ.85ರಷ್ಟು ಅಂಕ ಗಳಿಸಿದ್ದರು. ಆಕೆಗೆ ಜಮಖಂಡಿಯ BLDE ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (BCA) ಕೋರ್ಸ್‌ಗೆ ಸೇರಬೇಕೆಂಬ ಕನಸಿತ್ತು. ಆದರೆ, ಆಕೆಯ ತಂದೆ ತೀರ್ಥಯ್ಯ ಕಣಬೂರ ಅವರು ಗ್ರಾಮದಲ್ಲಿ ಸಣ್ಣ ಟೀ ಸ್ಟಾಲ್ ನಡೆಸುತ್ತಿದ್ದು, ಆರ್ಥಿಕ ಸಂಕಷ್ಟದಿಂದಾಗಿ ಕಾಲೇಜು ಶುಲ್ಕವನ್ನು ಭರಿಸಲು ಆಗದೇ ಇದ್ದರು. ತಂದೆಯ ಸಾಹಸದ ಹೊರತಾಗಿಯೂ ಶುಲ್ಕಕ್ಕೆ ಹಣವನ್ನು ಹೊಂದಿಸಲು ಸಾಧ್ಯವಾಗಿರಲಿಲ್ಲ.

ರಿಷಭ್ ಪಂತ್‌ರ ದಾನಶೀಲತೆ:

ಈ ವಿಷಯ ಗ್ರಾಮದ ಸ್ಥಳೀಯ ಗುತ್ತಿಗೆದಾರ ಅನಿಲ್ ಹುಣಸಿಕಟ್ಟಿ ಅವರಿಗೆ ತಿಳಿಯಿತು. ಅನಿಲ್ ಅವರು ತಮ್ಮ ಬೆಂಗಳೂರಿನ ಗೆಳೆಯರ ಮೂಲಕ, ಐಪಿಎಲ್‌ನಲ್ಲಿ ಕೆಲಸ ಮಾಡುವವರ ಸಂಪರ್ಕದಿಂದ ರಿಷಭ್ ಪಂತ್ ಅವರ ಗಮನಕ್ಕೆ ಜ್ಯೋತಿಯ ಕಷ್ಟದ ಪರಿಸ್ಥಿತಿಯನ್ನು ತಂದರು. ಜ್ಯೋತಿಯ ಕತೆಗೆ ಮನಸೋತ ರಿಷಭ್ ಪಂತ್, ಜುಲೈ 17ರಂದು ತಕ್ಷಣವೇ BLDE ಕಾಲೇಜಿನ ಖಾತೆಗೆ 40,000 ರೂ. ವರ್ಗಾಯಿಸಿ, ಜ್ಯೋತಿಯ ಮೊದಲ ಸೆಮಿಸ್ಟರ್ ಶುಲ್ಕವನ್ನು ಭರಿಸಿದರು.

ರಿಷಭ್ ಪಂತ್‌ರ ಈ ಔದಾರ್ಯದಿಂದ ಭಾವುಕರಾದ ಜ್ಯೋತಿ, “ನಾನು ಗಲಗಲಿಯಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದೆ ಮತ್ತು BCA ಕೋರ್ಸ್ ಮಾಡಬೇಕೆಂಬ ಕನಸು ಕಂಡಿದ್ದೆ. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಒಳ್ಳೆಯದಾಗಿರಲಿಲ್ಲ. ನಾನು ಅನಿಲ್ ಹುಣಸಿಕಟ್ಟಿ ಅಣ್ಣನ ಬಳಿ ವಿಷಯ ಹೇಳಿಕೊಂಡೆ. ಅವರು ಬೆಂಗಳೂರಿನ ಗೆಳೆಯರ ಮೂಲಕ ರಿಷಭ್ ಪಂತ್ ಅವರಿಗೆ ತಿಳಿಸಿದರು, ಅವರು ನನಗೆ ಸಹಾಯ ಮಾಡಿದರು,” ಎಂದು ಹೇಳಿದ್ದಾರೆ. “ರಿಷಭ್ ಪಂತ್ ಅವರಿಗೆ ದೇವರು ಆರೋಗ್ಯ ಕೊಡಲಿ. ಅವರ ಸಹಾಯ ನನಗೆ ತುಂಬಾ ಮುಖ್ಯವಾಗಿದೆ. ಇಂತಹ ಬಡ ವಿದ್ಯಾರ್ಥಿಗಳಿಗೆ ಅವರು ಮುಂದೆಯೂ ಸಹಾಯ ಮಾಡಲಿ,” ಎಂದು ಆಕೆ ಧನ್ಯವಾದ ಹೇಳಿದ್ದಾರೆ.

ಸದ್ಯ ಜ್ಯೋತಿ ಜಮಖಂಡಿಯ BLDE ಕಾಲೇಜಿನಲ್ಲಿ BCA ಪ್ರಥಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಿಷಭ್ ಪಂತ್‌ರ ಈ ನಿಸ್ವಾರ್ಥ ಸಹಾಯವು ದೇಶಾದ್ಯಂತ ಅನೇಕರ ಮನ ಗೆದ್ದಿದೆ.

Exit mobile version