ರಾಯಚೂರು ಜಿಲ್ಲೆಯಲ್ಲಿ ಪಕ್ಷಿಗಳ ನಿಗೂಢ ಸಾವು ಮತ್ತು ಆಂಧ್ರ-ತೆಲಂಗಾಣದ ಗಡಿಪ್ರದೇಶಗಳಲ್ಲಿ ಹಕ್ಕಿಜ್ವರ ಸೋಂಕು ದೃಢಪಟ್ಟಿದ್ದು, ಪ್ರಾದೇಶಿಕ ಆರೋಗ್ಯ ಮತ್ತು ಪಶುಸಂಗೋಪನೆ ಇಲಾಖೆಗಳು ಹೈ ಅಲರ್ಟ್ ಜಾರಿ ಮಾಡಿವೆ. ಇತ್ತೀಚೆಗೆ ರಾಯಚೂರಿನ ಕೋಳಿ ಫಾರ್ಮ್ಗಳಲ್ಲಿ ಅನೇಕ ಪಕ್ಷಿಗಳು ರಹಸ್ಯಮಯವಾಗಿ ಸಾವನ್ನಪ್ಪಿದ್ದು, ಪ್ರಯೋಗಾಲಯ ಪರೀಕ್ಷೆಗಳಲ್ಲಿ H5N1 ಸ್ಟ್ರೈನ್ ಹಕ್ಕಿಜ್ವರದ ಸೋಂಕು ದೃಢವಾಗಿದೆ. ಇದರ ಪರಿಣಾಮವಾಗಿ, ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಕೋಳಿ ಫಾರ್ಮ್ಗಳಿಗೆ ಕಟ್ಟುನಿಟ್ಟು ಮುಂಜಾಗ್ರತಾ ಕ್ರಮಗಳನ್ನು ಆದೇಶಿಸಿದ್ದಾರೆ.
ಕೋಳಿ ಫಾರ್ಮ್ ಮಾಲೀಕರಿಗೆ ಫಾರ್ಮ್ಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡುವಂತೆ ಮತ್ತು ಹೊಸ ವ್ಯಕ್ತಿಗಳು ಅಥವಾ ವಾಹನಗಳ ಪ್ರವೇಶವನ್ನು ನಿಷೇಧಿಸುವಂತೆ ಸೂಚನೆ ನೀಡಲಾಗಿದೆ. ವಾಹನಗಳು ಫಾರ್ಮ್ಗಳಿಗೆ ಪ್ರವೇಶಿಸುವ ಮೊದಲು ಸ್ಕಾನಿಟೈಸರ್ ಸಿಂಪಡಣೆ ಬಳಸುವುದು ಕಡ್ಡಾಯವಾಗಿದೆ. ರಾಯಚೂರು-ತೆಲಂಗಾಣ ಗಡಿಯ ಶಕ್ತಿನಗರ, ಸಿಂಗನೋಡಿ ಮತ್ತು ರಾಯಚೂರು-ಆಂಧ್ರ ಗಡಿಯ ಗಿಲ್ಲೆಸುಗೂರು ಚೆಕ್ಪೋಸ್ಟ್ಗಳಲ್ಲಿ ಹಕ್ಕಿಜ್ವರದ ವಿರುದ್ಧ ಸತತ ನಿರೀಕ್ಷಣೆ ಹಮ್ಮಿಕೊಳ್ಳಲಾಗಿದೆ. ಗಡಿ ಪ್ರದೇಶಗಳಿಂದ ಕೋಳಿ ಉತ್ಪನ್ನಗಳ ಆಮದು ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ.
ಪಶು ಸಂಗೋಪನೆ ಇಲಾಖೆಯ ಅಧಿಕಾರಿ ಡಾ. ರಮೇಶ್ ಬಿ. ಅವರು, “ಹಕ್ಕಿಜ್ವರದ ಸೋಂಕು ಮಾನವರಿಗೆ ಹರಡುವ ಅಪಾಯವಿದೆ. ಆದ್ದರಿಂದ ಫಾರ್ಮ್ಗಳ ಸ್ವಚ್ಛತೆ ಮತ್ತು ಜೈವಿಕ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ” ಎಂದು ಹೇಳಿದ್ದಾರೆ. ಕೋಳಿ ಸಾಕಣೆದಾರರು ತಮ್ಮ ಫಾರ್ಮ್ಗಳಲ್ಲಿ ರೋಗನಿರೋಧಕ ಕ್ರಮಗಳನ್ನು ಕೈಗೊಳ್ಳುವಂತೆ ಕೋರಲಾಗಿದೆ.