ಬೆಂಗಳೂರು: ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಎಂಬ ಘೋಷಣೆಯಡಿ ಬೃಹತ್ ಪ್ರತಿಭಟನೆ ನಡೆಯಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ಮತ್ತು ಚುನಾವಣಾ ಅಕ್ರಮಗಳನ್ನು ಖಂಡಿಸಿ ಈ ಪ್ರತಿಭಟನೆ ಆಯೋಜಿಸಲಾಗಿದೆ. ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಜ್ಯ ಕಾಂಗ್ರೆಸ್ ಸರ್ಕಾರವು ಬಿಗಿ ಭದ್ರತಾ ವ್ಯವಸ್ಥೆ ಜಾರಿಗೊಳಿಸಿದೆ.
ಕಳೆದ ಆರ್ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಘಟನೆಯಿಂದ 9 ಮಂದಿ ಅಮಾಯಕರ ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ, ಈ ಬಾರಿ ರಾಜ್ಯ ಸರ್ಕಾರವು ಕಟ್ಟುನಿಟ್ಟಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಈ ಘಟನೆಯಿಂದ ರಾಜ್ಯವು ದೇಶಾದ್ಯಂತ ಟೀಕೆಗೆ ಒಳಗಾಗಿತ್ತು ಮತ್ತು ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು. ಈ ಬಾರಿ, ರಾಹುಲ್ ಗಾಂಧಿ ಅವರ ಕಾರ್ಯಕ್ರಮದಲ್ಲಿ ಯಾವುದೇ ಗೊಂದಲ ಅಥವಾ ಗಲಾಟೆ ತಡೆಯಲು ಸರ್ಕಾರವು ಸಮಗ್ರ ಭದ್ರತಾ ಯೋಜನೆಯನ್ನು ರೂಪಿಸಿದೆ.
ಭದ್ರತಾ ಕ್ರಮಗಳು:
-
15 ಸೆಕ್ಟರ್ಗಳ ವಿಂಗಡಣೆ: ಕಾರ್ಯಕ್ರಮದ ಸ್ಥಳವನ್ನು 15 ಸೆಕ್ಟರ್ಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ಸೆಕ್ಟರ್ಗೆ ಒಬ್ಬ ಡಿಸಿಪಿ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದೆ.
-
6000 ಪೊಲೀಸರ ನಿಯೋಜನೆ: ಒಟ್ಟು 6000 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, ಇವರಲ್ಲಿ 500 ಮಂದಿ ಪ್ರತಿಭಟನಾಕಾರರ ನಡುವೆ ನಿಯೋಜಿತರಾಗಿದ್ದಾರೆ.
-
ತಾತ್ಕಾಲಿಕ ಕಂಟ್ರೋಲ್ ರೂಂ: ಕಾರ್ಯಕ್ರಮವನ್ನು ತಾತ್ಕಾಲಿಕ ಕಂಟ್ರೋಲ್ ರೂಂನಿಂದ ಪರಿಶೀಲಿಸಲಾಗುತ್ತಿದೆ.
-
ಗರುಡ ಫೋರ್ಸ್ ಮತ್ತು ಡಿ ಸ್ವಾಟ್: ಗರುಡ ಫೋರ್ಸ್ ಮತ್ತು ಡಿ ಸ್ವಾಟ್ ಸಿಬ್ಬಂದಿಯನ್ನು ಸ್ಥಳದಲ್ಲಿ ಕಾರ್ಯನಿರ್ವಹಣೆಗೆ ನಿಯೋಜಿಸಲಾಗಿದೆ.
-
ವೈದ್ಯಕೀಯ ವ್ಯವಸ್ಥೆ: ಆಂಬ್ಯುಲೆನ್ಸ್, ವೈದ್ಯಕೀಯ ಸಿಬ್ಬಂದಿ, ಕ್ವಿಕ್ ರೆಸ್ಪಾನ್ಸ್ ವಾಹನಗಳು ಮತ್ತು ಅಗ್ನಿಶಾಮಕ ದಳವನ್ನು ಸ್ಥಳದಲ್ಲಿ ತುರ್ತು ಸೇವೆಗೆ ಸಿದ್ಧವಾಗಿರಿಸಲಾಗಿದೆ.
-
ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ: ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಭದ್ರತೆಗಾಗಿ ಬಂದೋಬಸ್ತ್ ಇರುವ ಪ್ರದೇಶಗಳು:
-
ಮಹಾರಾಣಿ ಕಾಲೇಜು ಜಂಕ್ಷನ್
-
ಶೇಷಾದ್ರಿ ರಸ್ತೆ
-
ಮೆಜೆಸ್ಟಿಕ್
-
ಉಪ್ಪಾರಪೇಟೆ
-
ಕಾಟನ್ಪೇಟೆ
-
ಕೆಂಪೇಗೌಡ ಬಸ್ ನಿಲ್ದಾಣ
-
ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ
-
ಚಾಲುಕ್ಯ ವೃತ್ತ
-
ಅರಮನೆ ರಸ್ತೆ
-
ನೃಪತುಂಗ ರಸ್ತೆ
-
ಮೈಸೂರು ಬ್ಯಾಂಕ್ ವೃತ್ತ
-
ಶಾಂತಲಾ ಜಂಕ್ಷನ್
-
ಆನಂದ ರಾವ್ ಮೇಲ್ಸೇತುವೆ
-
ಜ್ಞಾನ ಜ್ಯೋತಿ ಆಡಿಟೋರಿಯಂ
-
ಪೋತಿಸ್ ಜಂಕ್ಷನ್
ಪ್ರತಿಭಟನೆಯು ಬೆಳಗ್ಗೆ 11:30ಕ್ಕೆ ಆರಂಭವಾಗಲಿದ್ದು, ರಾಹುಲ್ ಗಾಂಧಿ ಅವರು ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಉಸ್ತುವಾರಿ ಸುರ್ಜೇವಾಲಾ, ಸಚಿವರು, ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ರಾಹುಲ್ ಗಾಂಧಿ ಅವರು ನಿನ್ನೆ ಮಹದೇವಪುರ ಕ್ಷೇತ್ರದಲ್ಲಿ ನಡೆದ ಚುನಾವಣಾ ಅಕ್ರಮದ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಈ ಪ್ರತಿಭಟನೆಯ ಮೂಲಕ ಕಾಂಗ್ರೆಸ್ ಪಕ್ಷವು ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಗಾಗಿ ಒತ್ತಾಯಿಸಲಿದೆ.
ಪ್ರತಿಭಟನೆಯಿಂದಾಗಿ ಬೆಂಗಳೂರಿನ ಪ್ರಮುಖ ರಸ್ತೆಗಳಾದ ಫ್ರೀಡಂ ಪಾರ್ಕ್, ವಿಧಾನಸೌಧ ಸುತ್ತಮುತ್ತ, ಚಾಲುಕ್ಯ ವೃತ್ತ, ಅರಮನೆ ರಸ್ತೆ, ನೃಪತುಂಗ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಮೆಜೆಸ್ಟಿಕ್ ಮತ್ತು ಉಪ್ಪಾರಪೇಟೆಯಲ್ಲಿ ದಿನವಿಡೀ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಶೇಷಾದ್ರಿ ರಸ್ತೆ, ಶಾಂತಲಾ ಜಂಕ್ಷನ್, ಆನಂದ ರಾವ್ ಮೇಲ್ಸೇತುವೆ ಮತ್ತು ಜೆಡಿಎಸ್ ಹಳೆ ಕಚೇರಿ ಕ್ರಾಸ್ನಿಂದ ಫ್ರೀಡಂ ಪಾರ್ಕ್ಗೆ ತೆರಳುವ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಾಹನ ಚಾಲಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.





