ಮೈಸೂರು ಆ. 21: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಮತ್ತೊಮ್ಮೆ ದಸರಾ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ದಸರೆಯ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯ ಗಜಪಡೆಗಳ ಆಗಮನದೊಂದಿಗೆ ಮಹೋತ್ಸವದ ಸಿದ್ಧತೆಗಳಿಗೆ ಅಧಿಕೃತ ಚಾಲನೆ ದೊರೆಯಲಿದೆ.
ಆಗಸ್ಟ್ 26ರಂದು ಸಾಂಪ್ರದಾಯಿಕ ಗಜಪಯಣ ಕಾರ್ಯಕ್ರಮ ನಡೆಯಲಿದ್ದು, ಈ ಮೂಲಕ ದಸರಾ ಮಹೋತ್ಸವದ ಸಿದ್ಧತೆಗಳು ಆರಂಭವಾಗಲಿವೆ. ಈ ಬಾರಿ ಹುಣಸೂರು ತಾಲೂಕಿನ ನಾಗರಹೊಳೆ ಅರಣ್ಯದ ಹೆಬ್ಬಾಗಿಲು ಎಂದೇ ಕರೆಯಲಾಗುವ ವೀರನಹೊಸಳ್ಳಿಯಿಂದ ಗಜಪಡೆಗಳನ್ನು ಬರಮಾಡಿಕೊಳ್ಳಲಾಗುತ್ತದೆ. ಕಾಡಿನಿಂದ ನಾಡಿಗೆ ಆಗಮಿಸುವ ಆನೆಗಳಿಗೆ ವೀರನಹೊಸಳ್ಳಿಯಲ್ಲಿ ವಿಶೇಷ ಗಜಪೂಜೆ ನೆರವೇರಿಸಿ, ಸಂಪ್ರದಾಯ ಬದ್ಧವಾಗಿ ಸ್ವಾಗತಿಸಲಾಗುತ್ತದೆ.
ಬಳಿಕ ಆನೆಗಳನ್ನು ಲಾರಿಗಳ ಮೂಲಕ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯಭವನಕ್ಕೆ ಕರೆತರಲಾಗುತ್ತದೆ. ಅಲ್ಲಿ ಎರಡು ದಿನಗಳ ಕಾಲ ವಿಶ್ರಾಂತಿ ನೀಡಿದ ನಂತರ ಆನೆಗಳನ್ನು ಮೈಸೂರು ಅರಮನೆ ಆವರಣಕ್ಕೆ ಕರೆತರಲಾಗುತ್ತದೆ. ಅರಮನೆ ಪ್ರವೇಶಿಸಿದ ಬಳಿಕ ಜಂಬೂಸವಾರಿಗೆ ಅಗತ್ಯವಿರುವ ತರಬೇತಿ ಹಾಗೂ ಸಿದ್ಧತೆಗಳು ಮತ್ತಷ್ಟು ಚುರುಕುಗೊಳ್ಳಲಿವೆ.
ಈ ಬಾರಿ ದಸರಾ ಮಹೋತ್ಸವಕ್ಕಾಗಿ ಒಟ್ಟು 14 ಆನೆಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 12 ಆನೆಗಳು ಜಂಬೂಸವಾರಿಯಲ್ಲಿ ನೇರವಾಗಿ ಭಾಗವಹಿಸಿ ತನ್ನ ಗಜಗಾಂಭಿರ್ಯದಿಂದ ದಸರಾಕ್ಕೆ ಮತ್ತಷ್ಟು ಮೆರಗು ನೀಡಲಿದೆ. ಇನ್ನು ಎರಡು ಆನೆಗಳನ್ನು ಮೀಸಲು ಪಡೆಯಾಗಿ ಇರಿಸಲಾಗುತ್ತದೆ. ಮುಖ್ಯ ಗಜಪಡೆಯಲ್ಲಿರುವ ಯಾವುದೇ ಆನೆಗೆ ಆರೋಗ್ಯ ಸಮಸ್ಯೆ ಅಥವಾ ಇತರ ತೊಂದರೆ ಎದುರಾದರೆ ಮೀಸಲು ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ.
ಮೊದಲ ಹಂತದಲ್ಲಿ 9 ಆನೆಗಳ ಆಗಮನ
ಆಗಸ್ಟ್ 26 ರಂದು ಮೊದಲ ಹಂತದಲ್ಲಿ ಒಟ್ಟು ಒಂಬತ್ತು ಆನೆಗಳು ವೀರನಹೊಸಳ್ಳಿಯಿಂದ ಮೈಸೂರಿಗೆ ಪ್ರಯಾಣಿಸಲಿವೆ. ದುಬಾರೆ ಶಿಬಿರದಿಂದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ ಹಾಗೂ ಕಾವೇರಿ ಆನೆಗಳು ಆಗಮಿಸಲಿವೆ. ಬಳ್ಳೆ ಶಿಬಿರದಿಂದ ಮಹೇಂದ್ರ ಮತ್ತು ಲಕ್ಷ್ಮಿ, ಮತ್ತಿಗೋಡು ಶಿಬಿರದಿಂದ ಏಕಲವ್ಯ ಗಜಪಡೆ ಸೇರಲಿದೆ.
ಎರಡನೇ ಹಂತದಲ್ಲಿ 3 ಆನೆಗಳು
ಎರಡನೇ ಹಂತದಲ್ಲಿ ದೊಡ್ಡ ಅರವೆ ಶಿಬಿರದ ರೂಪಾ, ರಾಮಾಪುರ ಬಂಡೀಪುರ ಶಿಬಿರದ ಚೈತ್ರಾ ಹಾಗೂ ಮತ್ತಿಗೋಡು ಶಿಬಿರದ ಶ್ರೀಕಂಠ ಮೈಸೂರಿಗೆ ಆಗಮಿಸಲಿವೆ. 57 ವರ್ಷದ ಶ್ರೀಕಂಠ ಈ ಬಾರಿ ದಸರಾ ಗಜಪಡೆಯಲ್ಲಿರುವ ಅತ್ಯಂತ ಹಿರಿಯ ಆನೆಯಾಗಿದೆ.
ಭೀಮ ಈ ಬಾರಿ ಮೀಸಲು ಪಟ್ಟಿಗೆ
ಮೈಸೂರು ದಸರೆಯೊಂದಿಗೆ ವಿಶೇಷವಾಗಿ ಗುರುತಿಸಿಕೊಂಡಿರುವ ಭೀಮ ಆನೆ ಈ ಬಾರಿ ಜಂಬೂಸವಾರಿಯಲ್ಲಿ ನೇರವಾಗಿ ಭಾಗವಹಿಸುವುದಿಲ್ಲ. 26 ವರ್ಷದ ಭೀಮ ತನ್ನ ಸರಳ ಸ್ವಭಾವ ಮತ್ತು ಸ್ನೇಹಪರ ಗುಣಗಳಿಂದ ಜನಪ್ರಿಯವಾಗಿದೆ. ಭೀಮ ಆನೆ ಜನರ ಅಚ್ಚು ಮೆಚ್ಚಿನ ಆನೆಗಳಲ್ಲಿ ಒಂದಾಗಿದೆ. ರಸ್ತೆಯಲ್ಲಿ ಜನರು ‘ಭೀಮ’ ಎಂದು ಕರೆದಾಗ ತಿರುಗಿ ಪ್ರತಿಕ್ರಿಯಿಸುತ್ತಿದ್ದ ಭೀಮನ ವರ್ತನೆ ಜನರ ಗಮನ ಸೆಳೆದಿತ್ತು.
ಆದರೆ ಈ ಬಾರಿ ಭೀಮನಿಗೆ ಮದ ಇರುವ ಹಿನ್ನೆಲೆಯಲ್ಲಿ ಜಂಬೂಸವಾರಿಯಲ್ಲಿ ಭಾಗವಹಿಸಲು ಸಿದ್ಧವಾಗಿಲ್ಲ. ಹೀಗಾಗಿ ಭೀಮನನ್ನು ಮೀಸಲು ಆನೆಯಾಗಿ ಇರಿಸಲಾಗಿದೆ. ದುಬಾರೆ ಶಿಬಿರದ 51 ವರ್ಷದ ಹರ್ಷ ಆನೆಯೂ ಮೀಸಲು ಪಡೆಯಲ್ಲಿರಲಿದೆ.
ಆನೆಗಳಿಗೆ ವಿಶೇಷ ತರಬೇತಿ
ದಸರಾ ಜಂಬೂಸವಾರಿ ವೀಕ್ಷಿಸಲು ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಹೀಗಾಗಿ ಗಜಪಡೆಗಳಿಗೆ ವಿಶೇಷ ತರಬೇತಿ ಮತ್ತು ಆರೈಕೆ ನೀಡಲಾಗುತ್ತದೆ. ಕಾಡಿನಿಂದ ನಾಡಿಗೆ ಬಂದ ಬಳಿಕ ಆನೆಗಳು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಿಸಲಾಗುತ್ತದೆ.
ಇದರ ಜೊತೆಗೆ ಪೌಷ್ಟಿಕ ಆಹಾರ, ಅಗತ್ಯ ವೈದ್ಯಕೀಯ ತಪಾಸಣೆ ಹಾಗೂ ಮೆರವಣಿಗೆಗೆ ಬೇಕಾದ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ಅಕ್ಟೋಬರ್ 11 ರಂದು ದಸರಾ ಮಹೋತ್ಸವ ಆರಂಭವಾಗಲಿದ್ದು, ಅಕ್ಟೋಬರ್ 21 ರಂದು ಜಂಬೂಸವಾರಿ ನಡೆಯಲಿದೆ. ಹೀಗಾಗಿ ಆಗಸ್ಟ್ 26 ರಿಂದಲೇ ಗಜಪಡೆಯ ತರಬೇತಿ ಮತ್ತು ಸಿದ್ಧತೆಗಳು ಆರಂಭವಾಗಲಿವೆ.
ಗಜಪಡೆಗಳ ಆಗಮನದೊಂದಿಗೆ ಮೈಸೂರಿನಲ್ಲಿ ದಸರಾ ಸಂಭ್ರಮಕ್ಕೆ ಅಧಿಕೃತ ಚಾಲನೆ ದೊರೆಯಲಿದ್ದು, ಅರಮನೆ ನಗರಿ ಮೈಸೂರು ಮತ್ತೊಮ್ಮೆ ಜಗತ್ತಿನ ಗಮನ ಸೆಳೆಯಲು ಸಜ್ಜಾಗುತ್ತಿದೆ.





