ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಹುಟ್ಟಿದ ಮಗುವಿಗೆ ಐದೇ ದಿನಗಳಾಗುವ ಮೊದಲೇ ತಾಯಿಯೇ ಮಗುವನ್ನು ಮಾರಾಟ ಮಾಡಿದ್ದಾರೆ ಎಂಬ ಆರೋಪದ ಮೇಲೆ ದಂಪತಿಗಳು ಮತ್ತು ಮಧ್ಯವರ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ಮಕ್ಕಳ ಕಳ್ಳಸಾಗಣೆ ಜಾಲದ ಸುಳಿವು ಪತ್ತೆಯಾಗಿದೆ.
ಶ್ರೀನಿವಾಸಪುರದ ನಿವಾಸಿ ನೀತು ಮತ್ತು ರಾಘವೇಂದ್ರ ದಂಪತಿಗೆ ಕಳೆದ 5 ದಿನಗಳ ಹಿಂದೆ ಖಾಸಗಿ ನರ್ಸಿಂಗ್ ಹೋಂನಲ್ಲಿ ಗಂಡು ಮಗು ಜನಿಸಿತು. ಈ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಮೂರನೇ ಮಗುವನ್ನು ಸಾಕಲು ಇಷ್ಟವಿಲ್ಲದ ಕಾರಣ 2 ಲಕ್ಷ ರೂಪಾಯಿಗೆ ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪವಿದೆ.
ಮಧ್ಯವರ್ತಿ ನಾರಾಯಣಸ್ವಾಮಿ ಎಂಬಾತನಿಗೆ ಮಗುವನ್ನು ಒಪ್ಪಿಸಲಾಗಿತ್ತು. ಆತ ಮಗುವನ್ನು ಚಿಂತಾಮಣಿ ಮೂಲದ ವ್ಯಕ್ತಿಯೊಬ್ಬರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಮಗು ಮಾರಾಟದ ಮಾಹಿತಿ ತಿಳಿದ ಶ್ರೀನಿವಾಸಪುರ ಪೊಲೀಸರು ನಿನ್ನೆ ರಾತ್ರಿ ದಂಪತಿಗಳನ್ನು ವಶಕ್ಕೆ ಪಡೆದರು. ನಂತರ ಮಧ್ಯವರ್ತಿ ನಾರಾಯಣಸ್ವಾಮಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪ್ರಸ್ತುತ ಮಗುವನ್ನು ಮರಳಿ ಪಡೆಯಲು ತೀವ್ರ ಕಾರ್ಯಾಚರಣೆ ನಡೆಯುತ್ತಿದೆ.
ದಂಪತಿಗಳು ಮಗುವನ್ನು ಮಾರಾಟ ಮಾಡಲು ಮುಖ್ಯ ಕಾರಣವಾಗಿ “ಈಗಾಗಲೇ ಇಬ್ಬರು ಮಕ್ಕಳಿದ್ದಾರೆ, ಮತ್ತೊಂದು ಮಗು ಬೇಡ” ಎಂಬುದನ್ನು ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆಯಿಂದ ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಹೆತ್ತ ತಾಯಿಯೇ ಮಗುವನ್ನು ಮಾರಾಟ ಮಾಡುವುದು ಹೇಗೆ ಸಾಧ್ಯ?” ಎಂಬ ಪ್ರಶ್ನೆಗಳು ಎದ್ದಿವೆ. ಮಕ್ಕಳ ಕಳ್ಳಸಾಗಣೆ ಜಾಲದ ಬಗ್ಗೆ ಆಳವಾದ ತನಿಖೆ ನಡೆಸಬೇಕು ಎಂಬ ಬೇಡಿಕೆ ಏಳುತ್ತಿದೆ. ಪೊಲೀಸರು ಈ ಪ್ರಕರಣದಲ್ಲಿ ಇನ್ನಷ್ಟು ಜನರ ಸಂಪರ್ಕ ಪತ್ತೆಹಚ್ಚುವ ಕೆಲಸ ಮುಂದುವರೆಸಿದ್ದಾರೆ.





